ಸಾರಾಂಶ
ಮುಂಡರಗಿ:ಮನುಷ್ಯನಿಗೆ ಎಲ್ಲ ಭಯಕ್ಕಿಂತ ಸಾವಿನ ಭಯ ಹೆಚ್ಚಿರುತ್ತದೆ. ಹುಟ್ಟಿದ ಮನುಷ್ಯ ಒಂದು ದಿನ ಸಾಯಲೇಬೇಕು ಎನ್ನುವುದನ್ನು ನಾವು ಮನದಟ್ಟು ಮಾಡಿಕೊಳ್ಳುವ ಮೂಲಕ ಸಾವನ್ನು ಪ್ರೀತಿಸಬೇಕು. ಪ್ರಕೃತಿಯಿಂದ ಬಂದ ಜೀವ ಒಂದಲ್ಲ ಒಂದು ದಿನ ಪ್ರಕೃತಿ ಸೇರಲೇಬೇಕು ಎಂದು ಮುಂಡರಗಿ ತೋಂಟದಾರ್ಯ ಮಠದ ಪೀಠಾಧಿಪತಿ ಜ.ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮೀಜಿ ಹೇಳಿದರು. ಅವರು ಬುಧವಾರ ಸಂಜೆ ಪಟ್ಟಣದ ತೋಂಟದಾರ್ಯ ಮಠದಲ್ಲಿ ಜರುಗಿದ 60ನೇ ತ್ರೈಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಪ್ರಕೃತಿಯೊಳಗೆ ತನ್ನ ದೇಹವನ್ನು ಉತ್ತಮ ರೀತಿ ಕಾಪಾಡಿಕೊಳ್ಳುವ ಶಕ್ತಿ ಮನುಷ್ಯನಿಗಿರಬೇಕು. ಬದುಕಿರುವ ದಿನಗಳಲ್ಲಿ ಎಲ್ಲರೊಂದಿಗೆ ನೆಮ್ಮದಿಯಿಂದ, ಸುಖದಿಂದ ಉತ್ತಮ ರೀತಿ ಇದ್ದು ಬಾಳಬೇಕು. ಯಾವಾಗ ಮನುಷ್ಯ ಸಾವಿನ ಬಗ್ಗೆ ಸ್ಪಷ್ಟತೆ ಅರಿವು ಹೊಂದಿರುತ್ತಾನೆಯೋ ಆಗ ಯಾವ ನೋವು ಇರುವದಿಲ್ಲ. ಮತ್ತೊಬ್ಬರಿಗೆ ನೆರವಾಗದಿದ್ದರೂ ಪರವಾಗಿಲ್ಲ, ಅವರಿಗೆ ತೊಂದರೆ ಕೊಡದಂತೆ ಜೀವಿಸಬೇಕು. ಮರಣವೆಯೇ ಮಹಾನವಮಿ ಎಂದ ಶರಣರು ಮರಣಕ್ಕೆಂದಿಗೂ ಅಂಜಿಲ್ಲ. ''''''''ಆವ ವಿದ್ಯ ಕಲಿತರೇನು ಸಾವ ವಿದ್ಯ ಬೆನ್ನಬಿಡದನ್ನಕ್ಕ'''''''' ಎಂದು ಅಕ್ಕ ತನ್ನ ವಚನದಲ್ಲಿ ಸಾವಿನ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾಳೆ ಎಂದರು. ವಿಶ್ರಾಂತ ಡಿಡಿಪಿಐ ಐ.ಬಿ. ಬೆನಕೊಪ್ಪ ಮಾತನಾಡಿ, 12ನೇ ಶತಮಾನದಲ್ಲಿ ಒಬ್ಬೊಬ್ಬರು ಒಂದೊಂದು ಕಾಯಕ ಮಾಡುತ್ತಾ ಅನುಭವ ಮಂಟಪದಲ್ಲಿ ಇರುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಆ ಶರಣರು ಮಾಡುತ್ತಿರುವ ಕಾಯಕಗಳೇ ಜಾತಿಗಳಾಗಿ ಇಡೀ ವ್ಯವಸ್ಥೆಯನ್ನು ಹದಗೆಡಿಸುವ ಮೂಲಕ ಒಬ್ಬೊಬ್ಬ ಶರಣರನ್ನು ಒಂದೊಂದು ಜಾತಿಗೆ ಸೀಮಿತಗೊಳಿಸಿರುವುದು ತುಂಬಾ ಖೇದಕರ ಸಂಗತಿಯಾಗಿದೆ. ಜಾತ್ಯತೀತವಾಗಿ ಹೋರಾಡಿದ ಶರಣರು ಸಮಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದರು. ಬಸವಣ್ಣನವರ ವಿಚಾರಗಳು ಇಂದಿನ ದಿನಮಾನಕ್ಕೆ ಪ್ರಸ್ತುತ ಎಂದರು. ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಬಂದ ಕಾವ್ಯಾ ಉಪ್ಪಾರ ಮತ್ತು ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಬಂದ ವಿಜಯಲಕ್ಷ್ಮೀ ಗೊಂಡಬಾಳ ಮತ್ತು ಡಿಜಿಪಿ ಪ್ರಶಂಸನಾ ಪದಕ ಪುರಸ್ಕೃತ ಜಾಫರ್ ಬಚ್ಚೇರಿ ಅವರನ್ನು ಶ್ರೀಮಠದಿಂದ ಸನ್ಮಾನಿಸಿ ಗೌರವಿಸಲಾಯಿತು. ಭಕ್ತಿಸೇವೆ ವಹಿಸಿಕೊಂಡಿದ್ದ ಬಾಗಲಕೋಟೆಯ ಹಿರಿಯ ದಿವಾಣಿ ನ್ಯಾಯಾಧೀಶ ರಾಜಶೇಖರ ತಿಳಗಂಜಿ ಮತ್ತು ನ್ಯಾಯವಾದಿ ಶೋಭಾ ತಿಳಗಂಜಿ , ಬಿ.ಎಸ್.ಬಿಸನಳ್ಳಿ ಅವರನ್ನು ಸನ್ಮಾನಿಸಲಾಯಿತು. ಮಹಾಲಕ್ಷ್ಮೀ ಹಲವಾಗಲಿ ಧರ್ಮಗ್ರಂಥ ಪಠಿಸಿದರು. ಸಮರ್ಥ ಹಿರೇಹೊಳಿ ವಚನ ಚಿಂತನೆ ಮಾಡಿದರು. ಜಯಶ್ರೀ ಅಳವಂಡಿ, ನಯನಾ ಅಳವಂಡಿ ಹಾಗೂ ಶಿವಕುಮಾರ ಕುಸಬದ ಸಂಗೀತ ಸೇವೆ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಶಿವಯೋಗಿ ಗಡ್ಡದ, ಕೊಟ್ರೇಶ ಅಂಗಡಿ, ಈಶಣ್ಣ ಬೆಟಗೇರಿ, ಅಶೋಕ ಹುಬ್ಬಳ್ಳಿ, ಶಿವಯೋಗಿ ನಾವಿ, ಎಚ್.ವಿರೂಪಾಕ್ಷಗೌಡ್ರ, ದೇವಪ್ಪ ರಾಮೇನಹಳ್ಳಿ, ಪಾಲಾಕ್ಷಿ ಗಣದಿನ್ನಿ, ವಿಶ್ವನಾಥ ಉಳ್ಳಾಗಡ್ಡಿ, ಶಂಕರ ಕುಕನೂರು, ನಾಗಪ್ಪ ಹಾಲಗಿ, ಶಿವಕುಮಾರ ಬೆಟಗೇರಿ, ಸದಾಶಿವಯ್ಯ ಕಬ್ಬೂರಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಡಾ.ನಿಂಗು ಸೊಲಗಿ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಎಸ್.ಎಸ್.ಗಡ್ಡದ ನಿರೂಪಿಸಿದರು.