ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಮ್ಮ ಬದುಕಿನ ವಿಧಾನವನ್ನು ಪರಿಸರಕ್ಕೆ ಪೂರಕವಾಗಿ ಬಳಸಿಕೊಂಡರೆ ಮಾತ್ರ ಮುಂದಿನ ಪೀಳಿಗೆ ನೆಮ್ಮದಿಯಿಂದ ಬದುಕಲು ಸಾಧ್ಯವೆಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.ನವನಗರದ ಆದರ್ಶ ವಿದ್ಯಾಲಯದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಅರಣ್ಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಜೀವಿತದ ಕೊನೆಯವರೆಗೂ ಪರಿಸರಕ್ಕೆ ಕೃತಜ್ಞತಾ ಪೂರ್ವಕವಾಗಿ ಇರಬೇಕಾಗುತ್ತದೆ. ಪರಿಸರ ಇಲ್ಲದೇ ಯಾವ ಜೀವಯು ಉಸಿರಾಡಲು ಸಾಧ್ಯವಾಗುವದಿಲ್ಲವೆಂದರು.
ಪ್ಲಾಸ್ಟಿಕ್ ವೈದ್ಯಕೀಯ ಹಾಗೂ ತಾಂತ್ರಿಕ ಅವಿಷ್ಕಾರಗಳಿಗೆ ಅವಶ್ಯಕತೆ ಇದೆ. ಆದರೆ ನಮ್ಮ ಮನೆಯಲ್ಲಿ ದಿನಕ್ಕೆ 5 ರಿಂದ 10 ಪ್ಲಾಸ್ಟಿಕ್ ಕವರಗಳು ಬರುತ್ತವೆ. ಅವುಗಳನ್ನು ಕಡಿಮೆ ಮಾಡಬೇಕು. ನಾವೆಲ್ಲರೂ ಕೃತಜ್ಞತಾ ಭಾವನೆಯಿಂದ ಕೆಲಸ ಪ್ರಾರಂಭಿಸಿದಾಗ ಆ ದಿನ ಚೆನ್ನಾಗಿರುತ್ತದೆ. ಇವೆಲ್ಲದಕ್ಕೂ ಮಿಗಿಲಾಗಿರುವುದು ಪರಿಸರ. ಪರಿಸರ ಹಾಳು ಮಾಡಲು ಎಷ್ಟು ವಿಧಾನಗಳಿಗೆ ಅದಕ್ಕೆ ಪೂರಕವಾಗಿ ಬದುಕಲು ಸಹ ವಿಧಾನಗಳಿವೆ. ಬದುಕಿನ ವಿಧಾನವನ್ನು ಪರಿಸರಕ್ಕೆ ಪೂರಕವಾಗಿ ಬಳಸದಿಕೊಂಡು ಜೀವನ ಸಾಗಿಸಬೇಕಿದೆ ಎಂದು ಹೇಳಿದರು.ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್ ಪಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ಜಿ.ಮಿರ್ಜಿ ಮಾತನಾಡಿ ವಿಶ್ವ ಪರಿಸರ ದಿನಾಚರಣೆಯು ಪ್ರತಿ ವರ್ಷ ಜೂನ್ 5 ರಂದು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಆಚರಿಸಲಾಗುವ ಒಂದು ಜಾಗತಿಕ ಕಾರ್ಯಕ್ರಮವಾಗಿದೆ. ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗಳೊಳಿಸುವುದು ಈ ವರ್ಷದ ಥೀಮ್ ಆಗಿದ್ದು, ಪರಿಸರ ಸಂರಕ್ಷಣೆಯು ನಮ್ಮ ಗೃಹ, ಸಮುದಾಯಗಳು ಮತ್ತು ಆರ್ಥಿಕತೆಯನ್ನು ಕಾಪಾಡಿಕೊಳ್ಳಲು ಮೂಲಾಧಾರವಾಗಿವೆ. ಇದನ್ನು ರಕ್ಷಿಸುವ ಅಗತ್ಯತೆ ಇದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿ ಡಾ.ಅನುಲಕುಮಾರ ತಳಗೇರಿ ಅವರು ಪ್ರತಿ ವರ್ಷ ಒಂದೊಂದು ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಮಕ್ಕಳು, ಯುವಕರು ಹಾಗೂ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸುವುದು ಅವಶ್ಯವಾಗಿರುತ್ತದೆ. ಪ್ರಕೃತಿ ನಮ್ಮ ಪೂರ್ವಜರಿಂದ ಬಳುವಳಿಯಾಗಿ ದೊರೆತಿಲ್ಲ. ಅದು ನಮಗೆ ಸಾಲದ ರೂಪದಲ್ಲಿ ನೀಡಿದ್ದು, ಮುಂದಿನ ಪೀಳಿಗೆಗೆ ಸುಂದರವಾಗಿ ಹಸ್ತಾತರಿಸುವ ಕಾರ್ಯವಾಗಬೇಕಿದೆ. ಆದ್ದರಿಂದ ಸಾರ್ವಜನಿಕರು ನಮ್ಮ ಸುತ್ತಮುತ್ತಲಿನ ದೈನಂದಿನ ಜೀವನ ಶೈಲಿ ಬದಲಾಯಿಸಿಕೊಳ್ಳಬೇಕಿದೆ ಎಂದರು.ಈ ಸಂದರ್ಭದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಸಾಮಾಜಿಕ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ಸಿ.ಜಿ.ಮಿರ್ಜಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಬಡದಾನಿ, ಸಹಾಯಕ ಅರಣ್ಯ ಅಧಿಕಾರಿ ರೂಪಾ ವಿ, ಆದರ್ಶ ವಿದ್ಯಾಲಯದ ಮುಖ್ಯಶಿಕ್ಷಕ ಹಾಗೂ ಇತರರು ಉಪಸ್ಥಿತರಿದ್ದರು.
ದೈನಂದಿನ ಬದುಕಿನಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಬೇಕಿದೆ. ಯಾವ ಊರಿಗೆ ಹೋಗಿ ಕಾಲಿಟ್ಟರು ಅರ್ದ ಕಿ.ಮೀ ಮುಂಚೆನೆ ಪ್ಲಾಸ್ಟಿಕ ರಾಶಿ ಸ್ವಾಗತ ಕೋರುತ್ತವೆ. ನೀರಿನ ಮೂಲ ಕೊಳದ ಸಮೀಪ ಪ್ಲಾಸ್ಟಿಕ್ ತೊಟ್ಟಿಗಳನ್ನು ಮಾಡಿರುತ್ತಾರೆ. ಪ್ಲಸ್ಟಿಕ್ ಕರಗಿ ಮಣ್ಣಲ್ಲಿ ಮಣ್ಣಾಗಬೇಕಾದರೆ, ಸಾವಿರ ವರ್ಷಗಳು ಬೇಕಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಮಾನವ ಕುಲ ಮಾತ್ರ ಪರಿಸರಕ್ಕೆ ವಿಮುಖವಾಗಿ ಕೆಲಸ ಮಾಡುತ್ತಿದೆ. ನಾವೆಲ್ಲರೂ ಪರಿಸರಕ್ಕೆ ಋಣಿಯಾಗಿದ್ದು, ಪ್ಲಾಸ್ಟಿಕ್ ಬಳಕೆ ಮಾಡುವದನ್ನು ಕಡಿಮೆ ಮಾಡಬೇಕಿದೆ.- ಜಾನಕಿ ಕೆ.ಎಂ ಜಿಲ್ಲಾಧಿಕಾರಿಬಾಗಲಕೋಟೆ