ಮಹಿಳಾ ವೃತ್ತ ನಿರೀಕ್ಷಕಿ ಹಾಗೂ ಇಬ್ಬರು ಕಾನ್ಸ್ಟೆಬಲ್ಗಳ ಮೇಲೆ ಕಾಂಗ್ರೆಸ್ಸಿಗರ ಗೂಂಡಾ ವರ್ತನೆ ಖಂಡನೀಯ. ಮಹಿಳಾ ಶಕ್ತಿ, ಬಿಜೆಪಿ ಮಹಿಳಾ ಮೋರ್ಚಾ ಬಗ್ಗೆ ಇನ್ನೊಮ್ಮೆ ಅವಹೇಳನಕಾರಿಯಾಗಿ ಮಾತನಾಡಿದರೆ ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ನಿವಾಸಕ್ಕೆ ಮುತ್ತಿಗೆ ಹಾಕಿ, ಪ್ರತಿಭಟಿಸುವುದಾಗಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಎಚ್.ಸಿ.ಜಯಮ್ಮ ಎಚ್ಚರಿಸಿದ್ದಾರೆ.
- ಸಿಪಿಐ ಗಾಯತ್ರಿ, ಪೊಲೀಸರ ಮೇಲೆ ಹಲ್ಲೆ ಆದಾಗ ದಿನೇಶ ಶೆಟ್ಟಿ, ಕಾಂಗ್ರೆಸ್ಸಿಗರ ಮೌನವೇಕೆ? - - -
ಕನ್ನಡಪ್ರಭ ವಾರ್ತೆ ದಾವಣಗೆರೆಮಹಿಳಾ ವೃತ್ತ ನಿರೀಕ್ಷಕಿ ಹಾಗೂ ಇಬ್ಬರು ಕಾನ್ಸ್ಟೆಬಲ್ಗಳ ಮೇಲೆ ಕಾಂಗ್ರೆಸ್ಸಿಗರ ಗೂಂಡಾ ವರ್ತನೆ ಖಂಡನೀಯ. ಮಹಿಳಾ ಶಕ್ತಿ, ಬಿಜೆಪಿ ಮಹಿಳಾ ಮೋರ್ಚಾ ಬಗ್ಗೆ ಇನ್ನೊಮ್ಮೆ ಅವಹೇಳನಕಾರಿಯಾಗಿ ಮಾತನಾಡಿದರೆ ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ನಿವಾಸಕ್ಕೆ ಮುತ್ತಿಗೆ ಹಾಕಿ, ಪ್ರತಿಭಟಿಸುವುದಾಗಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಎಚ್.ಸಿ.ಜಯಮ್ಮ ಎಚ್ಚರಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಸಿಪಿಐ ಗಾಯತ್ರಿ ಹಾಗೂ ಇಬ್ಬರು ಪೊಲೀಸರ ಮೇಲೆ ಕಾಂಗ್ರೆಸ್ಸಿಗರು ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಬಿಜೆಪಿ ಮಹಿಳಾ ಮೋರ್ಚಾದವರು ಇಷ್ಟು ದಿನ ಎಲ್ಲಿದ್ದರೆಂಬ ದಿನೇಶ ಶೆಟ್ಟಿ ವ್ಯಂಗ್ಯ ಹೇಳಿಕೆ ಸರಿಯಲ್ಲ. ನಾವು ಮಹಿಳಾ ಮೋರ್ಚಾದವರು, ಸರ್ವತಾ ಸಮಗ್ರ ಮತ್ತು ಕಟಿಬದ್ಧ ಹೋರಾಟಕ್ಕೆ ಸದಾ ಸಿದ್ಧರಿರುತ್ತೇವೆ ಎಂದರು.ಬಿಜೆಪಿ ಮಹಿಳಾ ಮೋರ್ಚಾ, ಅದರ ಹೋರಾಟ, ಸಂಘಟನೆ ಬಗ್ಗೆ ಬೇಕಿದ್ದರೆ ದಿನೇಶ ಶೆಟ್ಟಿ ತಮ್ಮ ಮನೆಗೆ ಬಂದ ಸೊಸೆಯನ್ನೇ ಕೇಳಿತಿಳಿಯಲಿ. ಶೆಟ್ಟರ ಸೊಸೆ ನಮ್ಮ ಬಿಜೆಪಿ ಕಾರ್ಯಕರ್ತೆ. ಅಂತಹ ಸಂಸ್ಕಾರವನ್ನು ನೋಡಿಯೇ ಅಲ್ಲವೇ ಸೊಸೆ ಮಾಡಿಕೊಂಡಿದ್ದು. ಬಿಜೆಪಿ ಕಾರ್ಯಕರ್ತರ ಕುಟುಂಬದೊಂದಿಗೆ ಬೀಗತನ ಮಾಡಿಕೊಂಡವರು ದಿನೇಶ ಶೆಟ್ಟಿ. ಬೀಗರ ಜೊತೆಗೆ ನಮಗೆ ಯಾಕೆ ಜಗಳ? ವಿಷಯ ಬಂದಾಗ ನಾಲಿಗೆ ಹರಿಬಿಡುವುದನ್ನು ಕಟುವಾಗಿಯೇ ಖಂಡಿಸುತ್ತೇವೆ ಎಂದು ಹೇಳಿದರು.
ದಕ್ಷಿಣ ಕ್ಷೇತ್ರದಲ್ಲಿ ಬ್ಯಾನರ್ ವಿಚಾರದಲ್ಲಿ ಪುಡಾರಿಗಳು ದಲಿತರ ಮನೆಗೆ ನುಗ್ಗಿ, ದಲಿತ ಯುವತಿ, ಮಹಿಳೆಯರು, ಮಕ್ಕಳ ಮೇಲೆ ಹಲ್ಲೆ, ದೌರ್ಜನ್ಯ ಎಸಗಿದಾಗ ದಿನೇಶ ಶೆಟ್ಟಿಯವರಾಗಲೀ, ಕಾಂಗ್ರೆಸ್ಸಿನ ಜನಪ್ರತಿನಿಧಿಗಳಾಗಲೀ ಚಕಾರ ಎತ್ತಲಿಲ್ಲ. ಕರ್ತವ್ಯನಿರತ ಸಿಪಿಐ ಗಾಯತ್ರಿ ಹಾಗೂ ಕಾನ್ಸ್ಟೆಬಲ್ಗಳಿಬ್ಬರ ಮೇಲೆ ಹಲ್ಲೆ ಮಾಡಿದ ರೌಡಿಗಳನ್ನು ಗಡೀಪಾರು ಮಾಡುವಂತೆ ನೀವಾಗಲಿ, ನಿಮ್ಮ ಸಚಿವರು, ನಿಮ್ಮ ಸಂಸದರಾಗಲೀ ಯಾಕೆ ದಿನೇಶ ಶೆಟ್ಟರೇ ಧ್ವನಿ ಎತ್ತಲಿಲ್ಲ. ಘಟನೆ, ಕೃತ್ಯಗಳನ್ನು ಖಂಡಿಸಲಿಲ್ಲ ಏಕೆ ಎಂದು ಪ್ರಶ್ನಿಸಿದರು.ಪ್ರಧಾನಿ ನರೇಂದ್ರ ಮೋದಿ ಶೇ.33 ಮಹಿಳಾ ಮೀಸಲಾತಿ ನೀಡಿ, ನಾರಿಶಕ್ತಿ ಅಭಿನಂದನ್ ಕಾಯ್ದೆ ಪಾಸ ಮಾಡಿದ್ದಾರೆ. ಇದು ಬಿಜೆಪಿಯವರಿಗೆ ಮಾತ್ರವಲ್ಲ, ಕಾಂಗ್ರೆಸ್ನಲ್ಲಿರುವ ಮಹಿಳೆಯರೂ ಸೇರಿದಂತೆ ದೇಶದ ಪ್ರತಿಯೊಬ್ಬ ಸ್ತ್ರೀಯರಿಗೂ ಅನ್ವಯಿಸುತ್ತದೆ. ಮಹಿಳಾ ಘಟಕದವರನ್ನು ಪಕ್ಕದಲ್ಲಿ ಕೂಡಿಸಿಕೊಂಡು, ತಾವೇ ಮಾತನಾಡುವ ಬದಲಿಗೆ, ಇತರೆ ಮಹಿಳಾ ಮುಖಂಡರಿಗೂ ದಿನೇಶ ಶೆಟ್ಟಿ ಮಾತಾಡುವ ಅವಕಾಶ ಕಲ್ಪಿಸಲಿ ಎಂದು ಸಲಹೆ ನೀಡಿದರು.
ಮಹಿಳಾ ಮೋರ್ಚಾ ಮುಖಂಡರಾದ ಚೇತನಾ ಶಿವಕುಮಾರ, ರೇಖಾ ಕೃಷ್ಣ, ನೀತಾ ನಂದೀಶ, ದೇವೀರಮ್ಮ, ಸುಶೀಲಮ್ಮ, ಮಂಜುಳಾ ಇಟಗಿ ಇತರರು ಇದ್ದರು.- - -
-8ಕೆಡಿವಿಜಿ1:ದಾವಣಗೆರೆಯಲ್ಲಿ ಭಾನುವಾರ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಎಚ್.ಸಿ.ಜಯಮ್ಮ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.