ಮೃತನಿಗೆ ೭ ವರ್ಷದ ಹಿಂದೆ ಮದುವೆಯಾಗಿತ್ತು. ಪ್ರಸ್ತುತ ೬ ತಿಂಗಳ ಮಗುವಿದ್ದು, ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ
ಕೊಪ್ಪಳ/ ಗಂಗಾವತಿ: ತಾಲೂಕಿನ ಜಬ್ಬಲಗುಡ್ಡದ ಗ್ರಾಮದಲ್ಲಿ ಗುರುವಾರ ತಡರಾತ್ರಿ ಸಿಡಿಲು ಬಡಿದು ರೈತ ಮೃತಪಟ್ಟಿದ್ದರೆ, ಗಂಗಾವತಿ ತಾಲೂಕಿನ ಸಿದ್ದಿಕೇರಿಯಲ್ಲಿ ಕೋಲ್ಕಾರ ಅಯ್ಯಪ್ಪ ಅವರ ಹೊಲದಲ್ಲಿ ಸಿಡಿಲು ಬಡಿದು ಆರು ಆಕಳು ಮೃತಪಟ್ಟಿವೆ.
ಮೃತನನ್ನು ಜಬ್ಬಲಗುಡ್ಡ ಗ್ರಾಮದ ಕರಿಯಪ್ಪ ಮ್ಯಾದನೇರಿ (೩೬) ಎಂದು ಗುರುತಿಸಲಾಗಿದೆ. ಗ್ರಾಮದ ಹುಲಗಪ್ಪ ಶಿವಲಿಂಗಪ್ಪ ಪ್ರಜಾರ ಎಂಬುವವರ ಜಮೀನಿನಲ್ಲಿ ಭತ್ತದ ರಾಶಿಗೆ ಹೊದಿಕೆ ಹಾಕುವಾಗ ಸಿಡಿಲು ಬಡಿದು ಕರಿಯಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.ಮೃತನಿಗೆ ೭ ವರ್ಷದ ಹಿಂದೆ ಮದುವೆಯಾಗಿತ್ತು. ಪ್ರಸ್ತುತ ೬ ತಿಂಗಳ ಮಗುವಿದ್ದು, ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ. ತಾಲೂಕಿನ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರು ಆಕಳು ಸಾವು:ಗಂಗಾವತಿಯ ಸಿದ್ದಿಕೇರಿಯ ಕೋಲ್ಕಾರ ಅಯ್ಯಪ್ಪ ಅವರ ಹೊಲದಲ್ಲಿ ಮೇಯುತ್ತಿದ್ದ ವೇಳೆ ಸಿಡಿಲು ಬಡಿದು ಆರು ಆಕಳು ಸಾವನ್ನಪ್ಪಿವೆ. ಅದೃಷ್ಠವಶಾತ್ ಅಲ್ಲಿಯೇ ಇದ್ದ ದನಗಾಹಿಗಳು ಮತ್ತು ಕುರಿಗಾಹಿಗಳಿಗೆ ಯಾವುದೇ ಹಾನಿಯಾಗಿಲ್ಲ.
ಕನಕಗಿರಿ ತಾಲೂಕಿನ ಬಂಕಾಪುರ ಗ್ರಾಮದ ಪಾರ್ವತಮ್ಮ ಅವರಿಗೆ ಸೇರಿ ಮೂರು ಆಕಳು ಮತ್ತು ನಾಗೇಶಪ್ಪನಿಗೆ ಸೇರಿ ಮೂರು ಆಕಳು ಸಾವಿಗೀಡಾಗಿವೆ. ಇದರಿಂದ ಸುಮಾರು ನಾಲ್ಕು ಲಕ್ಷ ಹಾನಿಯಾಗಿದ್ದು, ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.ಭತ್ತ ಕಟಾವು ಆದ ಮೇಲೆ ಕುರಿ ಮತ್ತು ಆಕಳನ್ನು ಹೊಲದಲ್ಲಿಯೇ ಬಿಡಲಾಗಿತ್ತು. ತಡರಾತ್ರಿಯಲ್ಲಿ ಘಟನೆ ನಡೆದಿದೆ. ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳೆ ಹಾನಿ ಇಲ್ಲ:ಕೊಪ್ಪಳ ಸೇರಿದಂತೆ ಗಂಗಾವತಿ ತಾಲೂಕಿನ ಬಹುತೇಕ ಭಾಗಗಳಲ್ಲಿ ಗುರುವಾರ ತಡರಾತ್ರಿ ಸರಿಸುಮಾರು 11.30 ರಿಂದ 12 ಗಂಟೆಯ ವೇಳೆಯಲ್ಲಿ ಮಳೆ ಸಾಧಾರಣ ಆಗಿದ್ದರೂ ಸಿಡಿಲ ಆರ್ಭಟವೇ ದೊಡ್ಡ ಪ್ರಮಾಣದಲ್ಲಿ ಇದ್ದು, ಹೀಗಾಗಿ ಮಳೆಯಿಂದ ಯಾವುದೇ ಹಾನಿಯಾಗಿಲ್ಲ. ಆದರೆ, ಸಿಡಿಲು ಬಡಿದು ಹಾನಿಯಾಗಿದೆ.