ಸಾರಾಂಶ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ಜೀವನದಲ್ಲಿ ಸಾಕಷ್ಟು ಅನುಭವ ಹಾಗೂ ಕೌಶಲ್ಯ ಹೊಂದಿರುವ ನಿವೃತ್ತ ನೌಕರರು ನಡೆದಾಡುವ ಗ್ರಂಥಾಲಯ ಇದ್ದಂತೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.ಇಲ್ಲಿನ ಗೌರಿಶಂಕರ ನಗರದ ನಿವೃತ್ತ ನೌಕರರ ಸಂಘದ ಆವರಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಪಿಂಚಣಿದಾರರ ದಿನಾಚರಣೆ, ಹಿರಿಯ ಪಿಂಚಣಿದಾರರ ಸನ್ಮಾನ ಹಾಗೂ ವಾರ್ಷಿಕ ಸಾಧಾರಣ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಮುಂದಿನ ಪೀಳಿಗೆಗೆ ನಿವೃತ್ತ ನೌಕರರ ಸೂಕ್ತ ಮಾರ್ಗದರ್ಶನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನಿವೃತ್ತರು ಯುವ ಜನಾಂಗಕ್ಕೆ ತಮ್ಮ ಕೌಶಲ್ಯವನ್ನು ಧಾರೆ ಎರೆಯಬೇಕು ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ, ಎಸ್.ಎಂ. ಸಂಕಮ್ಮನವರ, ಸಿ.ಆರ್. ಬಳ್ಳಾರಿ, ಗೌರಮ್ಮ ಮಳಗಿ, ಎಸ್.ಎನ್. ಮಳಗಿ, ಎಸ್.ಎನ್. ಜಂಗಳೇರ ಅತಿಥಿಗಳಾಗಿ ಆಗಮಿಸಿದ್ದರು. ನಿವೃತ್ತ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ವಿ.ಎಂ. ಕರ್ಜಗಿ ಅಧ್ಯಕ್ಷತೆ ವಹಿಸಿದ್ದರು.ಬೇಡಿಕೆ ಈಡೇರಿಸುವಂತೆ ಮನವಿ:
ಇದೇ ವೇಳೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಶಾಸಕ ಪ್ರಕಾಶ ಕೋಳಿವಾಡರಿಗೆ ಮನವಿ ಸಲ್ಲಿಸಿದರು.ಇಲ್ಲಿನ ಗೌರಿಶಂಕರ ನಗರದಲ್ಲಿ ಸ್ವಂತ ಕಟ್ಟಡದಲ್ಲಿ ಮೇಲ್ಛಾವಣಿ ಸುತ್ತಲೂ ಗೋಡೆಗಳನ್ನು ನಿರ್ಮಿಸಿ ಅದನ್ನು ಭೋಜನಾಲಯವನ್ನಾಗಿ ಪರಿವರ್ತಿಸಲು ಆರ್ಥಿಕ ನೆರವು ನೀಡಬೇಕು. ಕೇಂದ್ರ ಸರ್ಕಾರದವರು ನಿವೃತ್ತರಿಗೆ 65 ವರ್ಷಕ್ಕೆ ಶೇ. 5, 70 ವರ್ಷಕ್ಕೆ ಶೇ.10, 75 ವರ್ಷಕ್ಕೆ ಶೇ. 15ರಂತೆ ಹೆಚ್ಚಿನ ವೇತನವನ್ನು ಮಂಜೂರು ಮಾಡಿದ್ದಾರೆ. ನಮ್ಮ ಕೇಂದ್ರ ಸಂಘದವರು ಸಹ 7ನೇ ವೇತನ ಆಯೋಗದ ಮುಂದೆ ಈ ಬೇಡಿಕೆಯನ್ನು ಇಟ್ಟಿರುತ್ತಾರೆ. ಕಾರಣ ತಾವು ಮುಖ್ಯಮಂತ್ರಿಗಳಿಗೆ ನಿವೃತ್ತರ ಈ ಬೇಡಿಕೆಯನ್ನು ಈಡೇರಿಸಲು ಒತ್ತಾಯಿಸಬೇಕು. ನಗರದಲ್ಲಿ ನಗರ ಸಾರಿಗೆಯನ್ನು ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು.
ಟಿ.ಎ. ಮುದಿಗೌಡರ, ಎಸ್.ಎಂ. ಡಮ್ಮಳ್ಳಿ, ಎನ್.ಎಸ್. ಪಾಟೀಲ, ವಿ.ವೀ. ಹರಪನಹಳ್ಳಿ, ಎಂ.ಪಿ. ಮುದ್ದಿ, ಪಿ.ಬಿ. ಕುಲಕರ್ಣಿ, ಹಾಲನಗೌಡ ಹಿರೇಗೌಡರ, ಬಿ.ಬಿ. ಗೌಡರ ಮತ್ತಿತರರು ಇದ್ದರು.