ಲಿಂಗರಾಜರ ತ್ಯಾಗಗುಣ, ಬದುಕು ಅನುಕರಣೀಯ

| Published : Feb 02 2025, 11:47 PM IST

ಸಾರಾಂಶ

ಶಿರಸಂಗಿ ಲಿಗರಾಜರು ಮಾಡಿದ ಲಿಂಗಾಯತ ಸಮ್ಮೇಳನದ ಅಂದಿನ ಭಾಷಣ ಮಹತ್ವಪೂರ್ಣವಾಗಿತ್ತು. ಮೀಸಲಾತಿ ಹಾವಳಿ ಅಂದು ಇರಲಿಲ್ಲ.

ಗದಗ: ಲಿಂಗಾಯತ ಧರ್ಮ ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಶಿರಸಂಗಿ ಲಿಂಗರಾಜರ ಕೊಡುಗೆ ಅಗಾಧವಾದುದು. ಲಿಂಗಾಯತ ಮಕ್ಕಳ ವಿದ್ಯಾಭ್ಯಾಸಕ್ಕೆ ತಮ್ಮ ಸಂಪೂರ್ಣ ಆಸ್ತಿ ಧಾರೆಯೆರೆದಿದ್ದಾರೆ. ಶಿರಸಂಗಿ ಲಿಂಗರಾಜರ ತ್ಯಾಗಗುಣ, ಸಮಾಜಮುಖಿ ಬದುಕು, ನಡೆ-ನುಡಿ, ಆದರ್ಶಗಳು ಅನುಕರಣೀಯ ಎಂದು ಜ.ಡಾ. ತೋಂಟದ ಸಿದ್ದರಾಮ ಸ್ವಾಮೀಜಿಗಳು ಹೇಳಿದರು.

ನಗರದ ತೋಂಟದಾರ್ಯ ಮಠದಲ್ಲಿ ನಡೆದ ಲಿಂಗಾಯತ ಪ್ರಗತಿಶೀಲ ಸಂಘದ 2730ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಶಿರಸಂಗಿ ಲಿಗರಾಜರು ಮಾಡಿದ ಲಿಂಗಾಯತ ಸಮ್ಮೇಳನದ ಅಂದಿನ ಭಾಷಣ ಮಹತ್ವಪೂರ್ಣವಾಗಿತ್ತು. ಮೀಸಲಾತಿ ಹಾವಳಿ ಅಂದು ಇರಲಿಲ್ಲ. ಲಿಂಗಾಯತ ಧರ್ಮದ ಎಲ್ಲ ಒಳಪಂಗಡಗಳು ಒಂದಾಗಿದ್ದವು. ಲಿಂಗಾಯತ ಸಮಾಜದ ಹಿರಿಯರಾದ ಫ.ಗು.ಹಳಕಟ್ಟಿ, ಅರಟಾಳ ರುದ್ರಗೌಡರು, ಡೆಪ್ಯುಟಿ ಚನ್ನಬಸಪ್ಪ ಮುಂತಾದ ಹಿರಿಯರ ಕೊಡುಗೆ ಅಪಾರ. ಲಿಂಗರಾಜರ ತ್ಯಾಗ ಜನರಿಗೆ ತಿಳಿಯಬೇಕು. ನಿರಂತರ ನೆನೆಯಬೇಕು. ಅವರ ಬದುಕು, ಸಾಧನೆ, ನಡೆ-ನುಡಿಗಳು ವೈಶಿಷ್ಟ್ಯವಾಗಿದೆ. ಲಿಂಗರಾಜರು ಕಷ್ಟ ಸಹಿಸಿಕೊಂಡು ಕಲ್ಲಾಗು, ಕಷ್ಟಗಳು ಮಳೆ ಸುರಿಯೆ ಎಂಬಂತೆ ಗಟ್ಟಿಯಾಗಿ ವೀರರಾಗಿ, ಧೀರಗಾಗಿ, ಬದುಕಿದವರು ಎಂದರು.

ಬಸವಾನಂದ ಸ್ವಾಮಿಗಳು ಬರೆದ ವಚನ ಹೃದಯ ಪುಸ್ತಕ ತುಂಭಾ ಅರ್ಥಪೂರ್ಣವಾಗಿ ಮೂಡಿಬಂದಿದೆ. ಲಿಂಗಾಯತ ಧರ್ಮಕ್ಕಾಗಿ ದುಡಿದ, ಲಿಂಗರಾಜ ಜಯಂತಿಯ ಆಚರಣೆ ಸಂದರ್ಭದಲ್ಲಿ ವಚನ ಹೃದಯ ಪುಸ್ತಕ ಲೋಕಾರ್ಪಣೆಗೊಂಡಿದ್ದು ವಿಶೇಷ ಎಂದರು.

ಗುರುಬಸವ ಮಹಾಮನೆ ಚೆನ್ನಯ್ಯನಗಿರಿ ಮನಗುಂಡಿಯ ಶ್ರೀ ಬಸವಾನಂದ ಸ್ವಾಮಿಗಳು ಮಾತನಾಡಿ, ವಚನ ಹೃದಯದಲ್ಲಿ 30 ಅಧ್ಯಾಯಗಳಿವೆ. ಮೊದಲ ಭಾಗದಲ್ಲಿ ಸುಮಾರು 35ಕ್ಕೂ ಹೆಚ್ಚು ಶರಣರ ವಚನಗಳ ಅಂತರಂಗದ ಬಾಗಿಲು ತೆರೆದು ತೋರಿಸಿದೆ. ಎರಡನೇ ಭಾಗ ಶರಣರ ವಚನಾಂಕಿತಗಳಿಗೆ ಸಂಬಂಧಿಸಿದೆ ಎಂದು ತಿಳಿಸಿದರು.

ಮುಂಡರಗಿಯ ಕೆ.ಆರ್. ಬೆಲ್ಲದ ಕಾಲೇಜು ಪ್ರಾಧ್ಯಾಪಕ ಎಂ.ಜಿ.ಗಚ್ಚಣ್ಣವರ ಮಾತನಾಡಿ, ಲಿಂಗರಾಜರ ನವಲಗುಂದ ವಾಡೆಯ ಅಭಿವೃದ್ಧಿ ಆಗಬೇಕಾಗಿದೆ. ಭಾರತದ ಹಲವಾರು ಸಂಸ್ಥಾನಗಳಲ್ಲಿ ಲಿಂಗರಾಜ ದೇಸಾಯಿ ಸಂಸ್ಥಾನ ಗಟ್ಟಿಯಾಗಿ ನಿಂತು ಲಿಂಗಾಯತ ಸಮಾಜದ ಮಕ್ಕಳ ಶಿಕ್ಷಣಕ್ಕೆ ಅವಿರತವಾಗಿ ಪರಿಶ್ರಮಿಸುತ್ತ ಬಂದಿದೆ. ಸಮಾಜ ಸಂಘಟನೆಗಳಿಗೆ ಹಲವು ದತ್ತಿ ದಾನ ಮಾಡಿದ್ದಲ್ಲದೆ ಇಡೀ ಸರ್ವಸ್ವ ಸಮಾಜಕ್ಕಾಗಿ ಧಾರೆಯೆರೆದ ಧೀರೋದಾತ್ತರು ಎಂದರು.

ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ವಚನ ಸಂಗೀತ ನೆರವೇರಿಸಿದರು. ಧರ್ಮಗ್ರಂಥ ಪಠಣವನ್ನು ಶ್ರೇಯಾ ಜಾಲಿಹಾಳ, ವಚನಚಿಂತನವನ್ನು ರಕ್ಷಿತಾ ಬಳಿಗೇರ ನಡೆಸಿದರು. ದಾಸೋಹ ಸೇವೆ ಶಿವಯೋಗಿ ಹುಬ್ಬಳ್ಳಿ ಹಾಗೂ ಸಹೋದರರು ಹಾಗೂ ಅಖಿಲ ಕರ್ನಾಟಕ ಲಿಂಗಾಯತ ಕುಡು ಒಕ್ಕಲಿಗರ ಸಮಾಜ ರಾಜ್ಯಾಧ್ಯಕ್ಷ ಶಿವಕುಮಾರಗೌಡ ಪಾಟೀಲ ವಹಿಸಿಕೊಂಡಿದ್ದರು.

ಶಿದ್ರಾಮಪ್ಪ ಗೊಜನೂರ, ಈಶಣ್ಣ ಮುನವಳ್ಳಿ, ಅನಿಲ ಪಾಟೀಲ, ಬಸವರಾಜ ಬಿಂಗಿ, ಮಹೇಶ್‌ಗೌಡ ಪಾಟೀಲ್, ಡಾ. ಹನುಮಾಕ್ಷಿ ಗೋಗಿ, ಬಾಲಚಂದ್ರ ಭರಮಗೌಡ್ರ, ಡಾ. ಉಮೇಶ ಪುರದ, ವೀರಣ್ಣ ಗೋಟಡಕಿ, ಸೋಮನಾಥ ಪುರಾಣಿಕ, ನಾಗರಾಜ ಹಿರೇಮಠ, ಮಹೇಶ ಗಾಣಿಗೇರ, ಬಸವರಾಜ ಕಾಡಪ್ಪನವರ ಇದ್ದರು.

ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ಶಿವಾನಂದ ಹೊಂಬಳ ಪರಿಚಯಿಸಿದರು. ವಿದ್ಯಾ ಪ್ರಭು ಗಂಜಿಹಾಳ ನಿರೂಪಿಸಿದರು.