ಸಾರಾಂಶ
ಗವಿಸಿದ್ದೇಶ್ವ ಮಠದ ಲಿಂ.ಲಿಂಗೇಶ್ವರ ಸ್ವಾಮೀಜಿ, ಮಠ ಕಟ್ಟದೇ ಭಕ್ತರ ಮನಸ್ಸು ಕಟ್ಟುವ ಕೆಲಸ ಮಾಡಿದ್ದರಿಂದ ಶ್ರೀಮಠಕ್ಕೆ ಅಪಾರ ಸಂಖ್ಯೆಯ ಭಕ್ತ ಗಣ ಹೊಂದಿದೆ
ಹೂವಿನಹಡಗಲಿ: ಪಟ್ಟಣದ ಗವಿಸಿದ್ದೇಶ್ವ ಮಠದ ಲಿಂ.ಲಿಂಗೇಶ್ವರ ಸ್ವಾಮೀಜಿ, ಮಠ ಕಟ್ಟದೇ ಭಕ್ತರ ಮನಸ್ಸು ಕಟ್ಟುವ ಕೆಲಸ ಮಾಡಿದ್ದರಿಂದ ಶ್ರೀಮಠಕ್ಕೆ ಅಪಾರ ಸಂಖ್ಯೆಯ ಭಕ್ತ ಗಣ ಹೊಂದಿದೆ ಎಂದು ಲಿಂಗನಾಯಕನಹಳ್ಳಿ ಜಂಗಮ ಕ್ಷೇತ್ರದ ಚೆನ್ನವೀರ ಸ್ವಾಮೀಜಿ ಹೇಳಿದರು.
ಇಲ್ಲಿನ ಗವಿಸಿದ್ದೇಶ್ವರ ಮಠದಲ್ಲಿ ಲಿಂಗೇಶ್ವರ ಸ್ವಾಮೀಜಿಯವರ 23ನೇ ವರ್ಷದ ಪುಣ್ಯ ಸಂಸ್ಮರಣೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜೀವನದಲ್ಲಿ ಮನುಷ್ಯ ಸಾಕಷ್ಟು ಸಂಪತ್ತು, ಐಶ್ವರ್ಯ ಇದ್ದರೂ ನೆಮ್ಮದಿಯಿಂದ ಇಲ್ಲ. ನೆಮ್ಮದಿ ಹೊರಗೆ ಹುಡುಕಿದರೆ ಸಿಗುವುದಿಲ್ಲ. ನಮ್ಮೊಳಗಿನ ಆತ್ಮಜ್ಞಾನವನ್ನು ಅರಿತು ಬಾಳಬೇಕು. ನಮ್ಮ ಗುರು ಹಿರಿಯರು ಇಂದಿನ ಯುವ ಜನಾಂಗಕ್ಕೆ ಇಂತಹ ವಿಷಯಗಳನ್ನು ಮಾಹಿತಿ ನೀಡಿ ಅವರನ್ನು ಸರಿದಾರಿಗೆ ತರುವಂತಹ ಕೆಲಸ ಮಾಡಬೇಕೆಂದು ಹೇಳಿದರು.ಹಿರೇಮಲ್ಲನಕೆರೆ ಚೆನ್ನಬಸವೇಶ್ವರ ವಿರಕ್ತ ಮಠದ ಅಭಿನವ ಚೆನ್ನಬಸವ ಸ್ವಾಮೀಜಿ ಮಾತನಾಡಿ, ಈ ಭೂಮಿಯ ಮೇಲೆ ಪಶು, ಪಕ್ಷಿ, ಪ್ರಾಣಿಗಳು ಎಲ್ಲವೂ ಬದುಕುತ್ತಿವೆ. ಅವುಗಳ ನಿಯತ್ತು ಮತ್ತು ನಿತ್ಯ ಕಾಯಕವನ್ನು ನಾವು ನೋಡಿ ಕಲಿಯಬೇಕಿದೆ. ಸಮಾಜದಲ್ಲಿ ಸಂಸ್ಕಾರ, ಸಂಸ್ಕೃತಿಯನ್ನು ಅರಿತು ನಡೆದುಕೊಳ್ಳಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಿಕ್ಷಕ ಎಚ್.ಎಂ.ಕೊಟ್ರಯ್ಯ ಇವರ ಭಾವ ಬೆಸುಗೆ, ಡಾ.ಪಿ.ಎಂ. ಅನಿಲಕುಮಾರ ಅವರ ಸಾವಿರದ ನೂರು ಕವಿತೆಗಳು ಎಂಬ ಎರಡು ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಕನ್ನಡ ವಿವಿಯ ಸಹಾಯಕ ಕುಲಸಚಿವ ಡಾ.ಎಂ.ಎಂ.ಶಿವಪ್ರಕಾಶ, ಶಿಕ್ಷಕರು ಹೆಚ್ಚು ಮಕ್ಕಳ ಸಾಹಿತ್ಯ, ಕಥೆಗಳ ಬಗ್ಗೆ ಒಲವು ತೋರಬೇಕು, ಇದರಿಂದ ಉತ್ತಮ ಭವಿಷ್ಯವಿದೆ, ಎಲ್ಲರೂ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದರು.ಗವಿಸಿದ್ದೇಶ್ವರ ಮಠದ ಡಾ.ಹಿರಿಶಾಂತ ವೀರ ಸ್ವಾಮೀಜಿ, ಮೈನಳ್ಳಿ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಇಟಿಗಿ ಹಿರೇಮಠದ ಗುರುಶಾಂತ ದೇವರು, ಚಿಕ್ಕಸಿಂದೋಗಿ ಮಠದ ಶ್ರೀಗಳು ಸಾನಿಧ್ಯ ವಹಿಸಿದ್ದರು.
ಅಖಿಲ ಭಾರತ ವೀರಶೈವ ಮಹಾ ಸಭಾ ತಾಲೂಕು ಅಧ್ಯಕ್ಷ ಸಿ.ಕೆ.ಎಂ. ಬಸಲಿಂಗ ಸ್ವಾಮಿ, ನಗರ ಘಟಕ ಅಧ್ಯಕ್ಷ ಮುಂಡವಾಡ ಉಮೇಶ, ಡಾ.ನಾಗನಗೌಡ, ತಾಲೂಕು ಗಾಣಿಗ ಸಮಾಜದ ಅಧ್ಯಕ್ಷ ಎಂ.ಕಿರಣಕುಮಾರ, ಸದಾಶಿವಯ್ಯ, ವೀರಯ್ಯ, ಯೋಗಾಚಾರ್ಯ ಎಸ್.ಎಸ್. ಹಿರೇಮಠ, ಕೋಡಿಹಳ್ಳಿ ಕೊಟ್ರೇಶ ಇದ್ದರು.ಶ್ರೀಮಠದಿಂದ ನೀಡುವ ಲಿಂಗೇಶ್ವರ ಪ್ರಶಸ್ತಿಯನ್ನು ಹಗರಿಬೊಮ್ಮನಹಳ್ಳಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಬಿ.ಶಿವಕುಮಾರ ಅವರಿಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾನಸ ಮಂಜುನಾಥ ಲಕ್ಕಣನವರ್ ಅವರ ಭರತ ನಾಟ್ಯ ನೃತ್ಯ ಎಲ್ಲರ ಗಮನ ಸೆಳೆಯಿತು.