ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಭಾಷಾ ಸಂಬಂಧವು, ರಕ್ತ ಸಂಬಂಧಕ್ಕಿಂತಲೂ ಮಿಗಿಲಾಗಿದ್ದು ಹೃದಯ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಭಾಷಾ ಸಂಬಂಧ ವಿಶ್ವವನ್ನೇ ಒಂದುಗೂಡಿಸುತ್ತದೆ ಎಂದು ಸಂಸ್ಕೃತಿ ಚಿಂತಕ , ತಾಲೂಕು ಕಸಾಪ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ತಿಳಿಸಿದರು.ಅಖಿಲ ಕರ್ನಾಟಕ ಕನ್ನಡ ಮಹಾಸಭಾ ಮತ್ತು ಜಿಲ್ಲಾ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ರಾಜ್ಯೋತ್ಸವ ಹಾಗೂ ಸುವರ್ಣ ಸಂಭ್ರಮದ ಅಂಗವಾಗಿ ಕಸಾಪ ಸಭಾಂಗಣದಲ್ಲಿ ಹಮ್ಮಿಕೊಂಡಿರುವ 50 ದಿನಗಳ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ 11ನೇ ದಿನ ಕಾರ್ಯಕ್ರಮದಲ್ಲಿ ಚಿತ್ರರಂಗದ ದಿಗ್ಗಜರ ಕುರಿತು ಮಾತನಾಡಿದರು. ರಾಜ್ಕುಮಾರ್ ವಿಷ್ಣುವರ್ಧನ್, ಅಂಬರೀಶ್, ಶಂಕರ್ನಾಗ್, ಉದಯ್ ಕುಮಾರ್, ನರಸಿಂಹರಾಜು ಪುನೀತ್ ರಾಜಕುಮಾರ್ ಹಾಗೂ ಇನ್ನಿತರರನ್ನು ಸ್ಮರಿಸಿದರು.
ಕನ್ನಡ ಚಿತ್ರರಂಗ ಬರಿ ಕನ್ನಡ ಮಾತ್ರವಲ್ಲದೆ, ಸಂಸ್ಕೃತಿ, ಪರಂಪರೆ ನಾಡು, ನುಡಿ, ಜಲ, ಭಾಷೆ, ಪ್ರಕೃತಿ, ಪ್ರದೇಶಗಳನ್ನು ತನ್ನ ಚಿತ್ರಗಳ ಮೂಲಕ ಬಿಂಬಿಸಿ ಸಾವಿರಾರು ಅಗೋಚರ ಸ್ಥಳಗಳು ಪ್ರವಾಸೋದ್ಯಮಕ್ಕೆ ಮುಖ್ಯ ದಾರಿಯಾಗಿದೆ. ಪ್ರಕೃತಿಯನ್ನು ಬೆಟ್ಟಗುಡ್ಡಗಳನ್ನು, ಅರಣ್ಯಗಳನ್ನು ಪ್ರಾಣಿಗಳ ಜೀವಸಂಕುಲದ ಕಥೆಗಳ ರೂಪದಲ್ಲಿ ಸಂಸ್ಕೃತಿಯನ್ನು ಕಟ್ಟಿ ಬೆಳೆಸಿದ ಕನ್ನಡ ಚಲನಚಿತ್ರರಂಗದ ದಿಗ್ಗಜರು ಕನ್ನಡ ಭಾಷೆಯ ಉಳಿವಿಗೆ ಅಪಾರ ಕೊಡುಗೆ ನೀಡಿದ್ದಾರೆ. ಪ್ರತಿ ನಟನೆ, ಮಾತಿನ ಹಾಡುಗಳ ಮೂಲಕ ಕನ್ನಡ ಸಾಹಿತ್ಯದ ಮೂಲಕವಿಗಳ ಚಿಂತನೆ ಬೆಳಕಿಗೆ ಬರುವ ಮೂಲಕ ಕನ್ನಡಿಗರಿಗೆ ಮತ್ತು ಭಾಷೆಗೆ ಮೌಲ್ಯವನ್ನು, ವಿಶ್ವ ಪ್ರಸಿದ್ಧಿಯನ್ನು ತಂದುಕೊಟ್ಟದ್ದು ಕನ್ನಡ ಚಿತ್ರರಂಗ ಎಂದರು.ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಅಧ್ಯಕ್ಷ ಶ್ರೀನಿವಾಸ್ ಗೌಡ ಮಾತನಾಡಿ, ಕನ್ನಡ ಚಲನಚಿತ್ರರಂಗ ಶತಮಾನದ ಹೊಸ್ತಿಲಲ್ಲಿ ಇದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆ, ಚಲನಚಿತ್ರ ಮಂದಿರಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಚಿತ್ರರಂಗ, ಚಿತ್ರಮಂದಿರಗಳನ್ನು ಬೆಳೆಸಬೇಕು. ಈ ಬಗ್ಗೆ ಕನ್ನಡಿಗರು ಚಿಂತನೆ ನಡೆಸಬೇಕಿದೆ ಎಂದು ತಿಳಿಸಿದರು. ಬರಹಗಾರ ಲಕ್ಷ್ಮೀನರಸಿಂಹ ಮಾತನಾಡಿ, ಕನ್ನಡ ಭಾಷಾ ಬೆಳವಣಿಗೆಯಲ್ಲಿ ಕನ್ನಡ ಚಿತ್ರನಟರ ಕೊಡುಗೆ ಅಪಾರವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಶಾ.ಮುರಳಿ, ಪಣ್ಯದಹುಂಡಿರಾಜು, ನಿಜಧ್ವನಿ ಗೋವಿಂದರಾಜು, ಚಾ.ವೆಂ.ರಾಜ್ ಗೋಪಾಲ್, ಮುತ್ತುರಾಜು, ಪ್ರಕಾಶ್, ನಂಜುಂಡಶೆಟ್ಟಿ, ರಾಚಪ್ಪ, ಮಹೇಶ್ಗೌಡ, ಶಿವಲಿಂಗಮೂರ್ತಿ, ಪದ್ಮಮರುಷೋತ್ತಮ್ ಇತರರು ಹಾಜರಿದ್ದರು.