ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಬಡವರ, ಅಸಹಾಯಕರ, ಅನಾರೋಗ್ಯ ಪೀಡಿತರಿಗಾಗಿ ಸಹಾಯ ಮಾಡುವುದು ಲಯನ್ಸ್ ಕ್ಲಬ್ ಉದ್ದೇಶವಾಗಿವೆ. ಅನೇಕ ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು, ಸಮಾಜಮುಖಿ ಸೇವೆಗಳಿಂದ ಮನೆಮಾತಾಗಿದೆ ಎಂದು ಲಯನ್ಸ್ನ ಜಿಲ್ಲಾ ಪ್ರಾಂತಪಾಲ ಜೈಮೋಲ ನಾಯಿಕ ಹೇಳಿದರು.ಪಟ್ಟಣದ ರಾಯಲ್ ಭವನದಲ್ಲಿ ಲಯನ್ಸ್ ಕ್ಲಬ್ ಪ್ರಾರಂಭೋತ್ಸವ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಲಯನ್ಸ್ ಕ್ಲಬ್ ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು, 1917ರಲ್ಲಿ ಅಮೆರಿಕಾದಲ್ಲಿ ಸ್ಥಾಪನೆಯಾಯಿತು. ವಿಶ್ವದ 207 ದೇಶಗಳಲ್ಲಿ 17 ಲಕ್ಷ ಸದಸ್ಯರಿದ್ದಾರೆ. ಭಾರತದಲ್ಲಿ 5 ಸಾವಿರ ಕ್ಲಬ್ಗಳು ಸಾಮಾಜಿಕ ಸೇವೆಯಲ್ಲಿ ತೊಡಗಿವೆ. ಒಳ್ಳೆಯ ಯೋಜನೆಗಳಿದ್ದರೆ ಅನುದಾನ ಮಂಜೂರಾತಿಗೆ ಅಂತಾರಾಷ್ಟ್ರೀಯ ದೇಣಿಗೆದಾರರಿಗೆ ಕಳುಹಿಸಿ ಕೊಡಲಾಗುವುದು. ಅನುದಾನ ಸದ್ಬಳಕೆಯಾಗಿ ಸಮಾಜಕ್ಕೆ ಒಳ್ಳೆಯದಾಗಬೇಕು. ಕರ್ನಾಟಕದಿಂದ ಬರುವ ಎಲ್ಲ ಯೋಜನೆಗಳಿಗೆ ಅನುದಾನ ದೊರಕಿಸಿಕೊಡಲು ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಪದಗ್ರಹಣ ಅಧಿಕಾರಿಯಾಗಿ ಆಗಮಿಸಿದ್ದ ಡಾ.ಕೀರ್ತಿ ನಾಯಿಕ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ ಮಾತನಾಡಿ, ದೇಶ ವಿದೇಶಗಳಲ್ಲಿ ಸಮಾಜಮುಖಿ ಸೇವೆ ಸಲ್ಲಿಸುವ ಅನೇಕ ಸಂಸ್ಥೆಗಳಿವೆ. ಆದರೆ ನಮ್ಮ ಲಯನ್ಸ್ ಸಂಸ್ಥೆಯಲ್ಲಿ ಸದಾ ಕ್ರಿಯಾಶೀಲರಾಗಿ ಜನಪರ ಕಾರ್ಯ ಮಾಡುವ ಉದ್ದೇಶ ಹೊಂದಲಾಗಿದೆ. ಈಗಷ್ಟೇ ಸಮಾಜಮುಖಿ ಸೇವಾ ಮನೋಭಾವನೆಯಿಂದ ಸದಸ್ಯತ್ವ ಹೊಂದಿರುವ ಅಥಣಿ ತಂಡವು ಲಯನ್ಸ್ ರಮೇಶ ಬುಲೆಬುಲೆಯವರ ನೇತೃತ್ವದಲ್ಲಿ ಹೆಮ್ಮರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.ನೂತನ ಸಂಸ್ಥಾಪಕ ಅಧ್ಯಕ್ಷರಾಗಿ ರಮೇಶ ಬುಲಬುಲೆ ಮಾತನಾಡಿ, ಲಯನ್ಸ್ ಕ್ಲಬ್ ಕೇವಲ ಒಂದು ಸಂಘಟನೆಯಲ್ಲ. ಇದು ಸ್ನೇಹದ ಸೇತುವೆ ಮತ್ತು ಸಮಾಜಮುಖಿ ಚಟುವಟಿಕೆಗಳ ದ್ವೀಪ ಸ್ತಂಭ. ನಾವೆಲ್ಲರೂ ಸೇವಾ ಮನೋಭಾವನೆಯಿಂದ ಬಡವರಿಗೆ ನೆರವು, ಯುವಶಕ್ತಿಗೆ ಪ್ರೇರಣೆ, ಪರಿಸರ ಸಂರಕ್ಷಣೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಸಲ್ಲಿಸುವ ಸಂಕಲ್ಪ ಹೊಂದಿದ್ದೇವೆ. ಲಯನ್ಸ್ ಕ್ಲಬ್ನ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಒಗ್ಗಟ್ಟಿನಿಂದ ಸೇವೆ ಸಲ್ಲಿಸುವ ಮೂಲಕ ಸಂಸ್ಥೆ ಮುನ್ನಡಿಸೋಣ ಎಂದು ಸಂಸ್ಥೆಯ ಹಿರಿಯ ಅಧಿಕಾರಿಗಳಿಗೆ ಮತ್ತು ಕಾರ್ಯಕ್ರಮಕ್ಕೆ ಆಗಮಿಸಿದ ನಾಗರಿಕರಿಗೆ ಅಭಿನಂದಿಸಿದರು. ಅಥಣಿಯ ಎಲ್ಲಾ ನಾಗರಿಕರು ಸಹಕಾರ ನೀಡುವುದರ ಜೊತೆಗೆ ಸಂಘದ ಕಾರ್ಯ ಚಟುವಟಿಕೆಗಳಿಗೆ ಮಾರ್ಗದರ್ಶನ ಮತ್ತು ಸಹಕಾರ ನೀಡಬೇಕು ಮನವಿ ಮಾಡಿದರು.
ನೂತನ ಅಧ್ಯಕ್ಷರಾಗಿ ರಮೇಶ ಬುಲಬುಲೆ, ಕಾರ್ಯದರ್ಶಿಯಾಗಿ ವಿನೋದ ಕಲಮಡಿ, ಖಜಾಂಚಿಯಾಗಿ ಅಶೋಕ ಹೊಸೂರ ಸೇರಿ ಇನ್ನಿತರರು ಪದಗ್ರಹಣ ಸ್ವೀಕರಿಸಿದರು. ಈ ವೇಳೆ ಅತಿಥಿಗಳಾಗಿ ಮಹಾಲಿಂಗಪುರದ ಲಯನ್ಸ್ ಕ್ಲಬ್ನ ಸಿದ್ದು ನಕಾತಿ, ವಿದ್ಯಾ ದಿನ್ನಿಮನಿ, ಪ್ರಶಾಂತ್ ಅಂಗಡಿ, ರಾಜು ತಾಳಿಕೋಟಿ ಸೇರಿ ಅಥಣಿ ಲಯನ್ಸ್ ಕ್ಲಬ್ ನಿರ್ದೇಶಕರಾದ ಚಿದಾನಂದ ಸವದಿ, ಮಹೇಶ್ ಕಾಪಸೆ, ರವೀಂದ್ರ ಗಾವಡೆ, ಕಿರಣ ಶಿರಗುಪ್ಪಿ, ಶಶಿಕಾಂತ ಹುಲಕುಂದ, ಮಹಾದೇವ ನಾಯಿಕ ಸೇರಿ ಇತರರಿದ್ದರು. ಆನಂದ ಟೋಣಪಿ ಸ್ವಾಗತಿಸಿ, ಸಂಜೀವ ಪಾಂಚಾಲ ನಿರೂಪಿಸಿ, ವಿನೋದ ಕಲಮಡಿ ವಂದಿಸಿದರು.