ಜನರ ಸಮಸ್ಯೆ ಆಲಿಸಿ, ಕೆಲಸ ಮಾಡಿ

| Published : Jul 19 2024, 12:46 AM IST

ಸಾರಾಂಶ

ಗುಂಡ್ಲುಪೇಟೆಯಲ್ಲಿ ನಡೆದ ಎಸ್ಸಿ,ಎಸ್ಟಿ ಸಭೆಯಲ್ಲಿ ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪಟ್ಟಣದಲ್ಲಿ ನಡೆದ ಎಸ್ಸಿ, ಎಸ್ಟಿ ಸಭೆಯಲ್ಲಿ ಸರ್ಕಾರಿ ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಅಧಿಕಾರಿಗಳ ಸ್ಪಂದನೆ ಇಲ್ಲ ಎಂಬ ದೂರು ಕೇಳಿ ಬಂದ ಹಿನ್ನೆಲೆ ಸಾರ್ವಜನಿಕರ ಸಮಸ್ಯೆ ಕೇಳಿ, ಕೆಲಸ ಮಾಡಿ ಕೊಡಿ ಅಲೆಸಬೇಡಿ ಎಂದು ತಹಸೀಲ್ದಾರ್‌‌ ಟಿ.ರಮೇಶ್‌ ಬಾಬು ಸೂಚನೆ ನೀಡಿದರು.

ತಾಲೂಕು ಕಚೇರಿಯ ಸಭಾ ಭವನದಲ್ಲಿ ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಎಸ್ಸಿ,ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಸಭಿಕರಿಂದ ದೂರು ಕೇಳಿ ಬಂದ ಹಿನ್ನೆಲೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಎಸ್ಸಿ,ಎಸ್ಟಿಗೆ ಬ್ಯಾಂಕ್‌ ಗಳು ಸಾಲ ನೀಡುತ್ತಿಲ್ಲ. ಜೊತೆಗೆ ಸಬ್ಸಿಡಿ ಹಣ ನೀಡಲು ಮುಂದಾಗಿಲ್ಲ. ಕೂಡಲೇ ಸಾಲ ಹಾಗೂ ಸಬ್ಸಿಡಿ ಹಣ ನೀಡಬೇಕು ಎಂದು ಲೀಡ್‌ ಬ್ಯಾಂಕ್‌ ಅಧಿಕಾರಿಯನ್ನು ತರಾಟೆಗೆ ತಗೆದುಕೊಂಡರು. ಎಸ್ಸಿ,ಎಸ್ಟಿ ಸಭೆಗೆ ಕೆಲ ಅಧಿಕಾರಿಗಳು ಗೈರಾಗಿದ್ದಾರೆ. ಇದು ಸರೀನಾ? ಹಿತರಕ್ಷಣಾ ಸಮಿತಿ ಸದಸ್ಯರು ಗೈರಾಗಿದ್ದಕ್ಕೆ ಸಭೆಯಲ್ಲಿದ್ದ ಮುಖಂಡರು ಆಕ್ರೋಶ ಹೊರ ಹಾಕಿದರು. ಸಭೆಯಲ್ಲಿ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ, ಸಮಾಜದ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್‌ ಕುಮಾರಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.ಎಸ್ಸಿ,ಎಸ್ಟಿ ಸಭೆಗೆ ಸದಸ್ಯರೇ ಗೈರು!ಎಸ್ಸಿ,ಎಸ್ಟಿ ಹಿರತಕ್ಷಣಾ ಸಮಿತಿ ಸಭೆ ಸಮಿತಿಯ ಮೂರು ಮಂದಿ ಸದಸ್ಯದಲ್ಲಿ ಇಬ್ಬರು ಗೈರಾಗಿದ್ದರೆ, ಓರ್ವ ಸದಸ್ಯರು ತಾಸು ಇದ್ದು ಹೊರ ನಡೆದ ಪ್ರಸಂಗ ನಡೆದಿದೆ. ಎಸ್ಸಿ,ಎಸ್ಟಿ ಹಿತರಕ್ಷಣಾ ಸಮಿತಿ ಸದಸ್ಯರಾದ ಡಿ.ಶ್ರೀನಿವಾಸ್‌ ಮೂರ್ತಿ, ಬಂಗಾರನಾಯಕ ಸಭೆಗೆ ಬರಲೇ ಇಲ್ಲ, ಆದರೆ ಮತ್ತೋರ್ವ ಸದಸ್ಯ ಬೆಟ್ಟಹಳ್ಳಿ ಕೆಂಪರಾಜು ಮದ್ಯಾಹ್ನ ಬಂದು ಒಂದು ತಾಸು ಇದ್ದು ಹೊರ ನಡೆದಿದ್ದಾರೆ. ಹಿತರಕ್ಷಣಾ ಸಮಿತಿ ಸದಸ್ಯರು ಸಭೆಗೆ ಗೈರಾದ ಬಗ್ಗೆ ಸಭೆಯಲ್ಲಿ ಮುಖಂಡರು ಕಿಡಿ ಕಾರಿದ್ದು ಇಂತ ಸದಸ್ಯರಿಂದ ಸಮಸ್ಯೆ ಬಗೆ ಹರಿಯುತ್ತಾ ಎಂದರು.ತಾಲೂಕು ಆಡಳಿತ ವಿರುದ್ಧ ಕಿಡಿ:ಎಸ್ಸಿ,ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯ ವೇದಿಕೆಯಲ್ಲಿ ತಹಸೀಲ್ದಾರ್‌, ಸಮಿತಿ ಸದಸ್ಯರು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ, ತಾಪಂ ಇಒ ಕೂರುತ್ತಿದ್ದರು. ಆದರೆ ಗುರುವಾರ ನಡೆದ ಸಭೆಯಲ್ಲಿ ಮಾತ್ರ ಎಸ್‌ಐ,ಎಎಸ್‌ಐ,ಆರ್‌ಎಫ್‌ ಒ ಕುಳಿತಿದ್ದರು. ಇದು ಸರೀನಾ ಎಂದು ಪುರಸಭೆ ಸದಸ್ಯ ರಾಜಗೋಪಾಲ್‌ ಪ್ರಶ್ನಿಸಿ, ತಾಲೂಕು ಆಡಳಿತದ ವಿರುದ್ಧ ಕಿಡಿಕಾರಿದ್ದಾರೆ.

ಸಿಪಿಐ, ಪಿಐ ಗೈರಿಗೂ ಆಕ್ರೋಶ:

ಗುಂಡ್ಲುಪೇಟೆ ಇನ್ಸ್‌ಪೆಕ್ಟರ್‌, ಬೇಗೂರು ಸರ್ಕಲ್‌ ಇನ್ಸ್‌ಪೆಕ್ಟರ್‌ ಇಬ್ಬರು ಗೈರಾದ ಬಗ್ಗೆ ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಭೆಯಲ್ಲಿ ದಲಿತರ ಪೊಲೀಸ್‌ ಇಲಾಖೆಯಲ್ಲಿನ ಕೇಸಿನ ಸಂಬಂಧ ಮಾತನಾಡಲು ಸಿಪಿಐ, ಪಿಐ ಬಾರದಿರುವುದು ಕೂಡ ಖಂಡನೀಯ ಎಂದು ಹಲವು ಮುಖಂಡರು ದೂರಿದ್ದಾರೆ. ತೆರಕಣಾಂಬಿ ಸಬ್‌ ಇನ್ಸ್‌ಪೆಕ್ಟರ್‌ ಈಶ್ವರ್‌ ದಲಿತರೊಬ್ಬರ ಕೇಸಿನ ಸಂಬಂಧ ಸಭೆಯಲ್ಲಿ ವಿಷಾದ ವ್ಯಕ್ತಪಡಿಸಿದ ಘಟನೆ ಕೂಡ ನಡೆಯಿತು.