ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಗರದ ಎಸ್.ಆರ್.ಎಸ್ ಪ್ರಜ್ಞಾ ವಿದ್ಯಾಶಾಲೆಯಲ್ಲಿ ಹೊಸದಾಗಿ ಸೇರ್ಪಡೆಗೊಂಡ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯರು ಮತ್ತು ಹಿರಿಯ ಸಂಸ್ಕೃತ ಸಂಪನ್ಮೂಲ ವ್ಯಕ್ತಿಯಾದ ಪರಮೇಶ್ವರ ವಿ. ಭಟ್ರವರು ಆಗಮಿಸಿ ಮಾತನಾಡುತ್ತಾ, ಮಗುವು ಮನೆಯ ಪರಿಸರದಿಂದ ಶಾಲೆಯ ಶೈಕ್ಷಣಿಕ ವಾತಾವರಣಕ್ಕೆ ಬರುವ ಈ ಹಂತದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮವು ಮಹತ್ವಪೂರ್ಣವಾಗಿದೆ. ಶಾಲೆಯಲ್ಲಿ ಇಂತಹ ಪಾರಂಪರಿಕ ಆಚರಣೆಯನ್ನು ಪಾಲಿಸುತ್ತಿರುವುದು ಒಂದು ವಿಶೇಷ ಎಂದು ತಿಳಿಸುತ್ತಾ, ಅಕ್ಷರಾಭ್ಯಾಸ ಮಾಡಿಸುವುದರೊಂದಿಗೆ ಮಗುವು ಸರಸ್ವತಿಯ ಅನುಗ್ರಹಕ್ಕೆ ಪಾತ್ರವಾಗಿ ಶೈಕ್ಷಣಿಕ ಪ್ರಗತಿ ಹೊಂದಲು ಪೂರಕವಾಗುತ್ತದೆ. ಪೋಷಕರು ಮಕ್ಕಳನ್ನು ಎಳೆಯ ವಯಸ್ಸಿನಿಂದಲೇ ಸೂಕ್ಷ್ಮವಾಗಿ ಗಮನಿಸುತ್ತಾ ಸನ್ಮಾರ್ಗದ ಕಡೆಗೆ ನಡೆಸುತ್ತಾ ಮೌಲ್ಯಾಧಾರಿತ ಶಿಕ್ಷಣವನ್ನು ಕೊಟ್ಟು ಪೋಷಿಸಬೇಕು. ಅಕ್ಷರಾಭ್ಯಾಸದಂತಹ ಕಾರ್ಯಕ್ರಮಗಳು ಸಂಸ್ಕಾರಯುತ ಶಿಕ್ಷಣಕ್ಕೆ ಬುನಾದಿಯಾಗುತ್ತವೆ. ಪ್ರತೀ ಮಗುವಿನಲ್ಲಿಯೂ ಸಹ ಒಂದೊಂದು ಕೌಶಲ್ಯ, ಪ್ರತಿಭೆ ಅಡಗಿದ್ದು ಅದನ್ನು ಗುರುತಿಸಿ, ಉತ್ತೇಜಿಸಿ ಪೋಷಿಸಿ ಹೊರತರುವ ಕಾರ್ಯವನ್ನು ಪೋಷಕರು ಹಾಗೂ ಶಿಕ್ಷಕರು ಮಾಡಬೇಕು ಎಂದು ತಿಳಿಸಿದರು. ಸಂಸ್ಥೆಯ ಅಧ್ಯಕ್ಷರಾದ ಆರ್.ರಾಜಗೋಪಾಲ ಶೆಟ್ಟಿಯವರು ಮಾತನಾಡುತ್ತಾ, ಮಗುವು ಶೈಕ್ಷಣಿಕ ಜೀವನಕ್ಕೆ ಪಾದಾರ್ಪಣೆ ಮಾಡುವ ಆರಂಭದ ಕಾರ್ಯಕ್ರಮವೇ ಅಕ್ಷರಾಭ್ಯಾಸ. ಈ ಅಕ್ಷರಾಭ್ಯಾಸ ಕಾರ್ಯಕ್ರಮದ ಹಿನ್ನೆಲೆಯನ್ನು ತಿಳಿಸುತ್ತಾ, ಪ್ರಾಚೀನ ಕಾಲದ ಗುರುಕುಲ ವ್ಯವಸ್ಥೆಯಲ್ಲಿ ಆಚರಣೆಯಲ್ಲಿದ್ದ ಈ ಪದ್ಧತಿಯು ಗುರುವಿನಿಂದ ಜ್ಞಾನವನ್ನು ಪಡೆಯುವ ಸಲುವಾಗಿ ವಿದ್ಯಾಭ್ಯಾಸದ ಪ್ರಾರಂಭದಲ್ಲಿ ಅಕ್ಷರಾಭ್ಯಾಸವನ್ನು ಮಾಡಿಸಲಾಗುತ್ತಿತ್ತು. ಅಂದಿನ ಪದ್ಧತಿಯನ್ನು ಇಂದಿನ ದಿನಗಳಲ್ಲಿ ಅಳವಡಿಸಿಕೊಂಡು ಮಗುವಿನ ಕಲಿಕೆಯನ್ನು ಉತ್ತಮ ಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪೋಷಕರು ಮಕ್ಕಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಬೇಕು. ಅವರಿಗೆ ಉತ್ತಮ ಆರೋಗ್ಯದ ಜೊತೆಗೆ ಗುಣಾತ್ಮಕ ಶಿಕ್ಷಣವನ್ನು ಒದಗಿಸುವಲ್ಲಿ ಶಿಕ್ಷಕರೊಂದಿಗೆ ಕೈಜೋಡಿಸಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಯಾದ ನಟರಾಜ್.ಎಂ., ಶಾಲಾ ಟ್ರಸ್ಟಿಯವರಾದ ಆಶಾ ನಟರಾಜ್, ಶಾಲಾ ಶಿಕ್ಷಕ ವೃಂದ ಹಾಗೂ ಪೋಷಕರು ಹಾಜರಿದ್ದರು.