ಸರ್ಕಾರಿ ನೌಕರರ ಸಂಘದ ವಿಭಾಗೀಯ ಉಪಾಧ್ಯಕ್ಷ ಎಂ.ಪಿ.ಎಂ. ಮಂಜುನಾಥ ಮಾತನಾಡಿ, ನಾಡಿನ ಹಿರಿಯ ಸಾಹಿತಿಗಳನ್ನು ನುಡಿಜಾತ್ರೆ ಸರ್ವಾಧ್ಯಕ್ಷರನ್ನಾಗಿಸುವುದು ಶ್ರೀಮಠದ ಸತ್ಸಂಪ್ರದಾಯವಾಗಿದೆ.
ತಂಬ್ರಹಳ್ಳಿ: ಜ.೨೯ರಂದು ತಾಲೂಕಿನ ನಂದಿಪುರ ಶ್ರೀಗುರು ದೊಡ್ಡಬಸವೇಶ್ವರ ಜಾತ್ರೆ ನಿಮಿತ್ತ ನುಡಿಜಾತ್ರೆ ಹಮ್ಮಿಕೊಳ್ಳಲಾಗಿದ್ದು, ಸಮ್ಮೇಳನದ ಅಧ್ಯಕ್ಷರಾಗಿ ಹರಿಹರದ ಸಾಹಿತಿ ಪ್ರೊ.ಎಚ್.ಎ. ಬಿಕ್ಷಾವರ್ತಿಮಠ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ನಂದಿಪುರ ಮಠದ ಡಾ.ಮಹೇಶ್ವರ ಸ್ವಾಮೀಜಿ ತಿಳಿಸಿದರು.ನಂದಿಪುರ ದೊಡ್ಡಬಸವೇಶ್ವರ ಮಠದಲ್ಲಿ ನುಡಿಜಾತ್ರೆ ಕುರಿತು ಮಾತನಾಡಿದ ಅವರು, ನುಡಿಜಾತ್ರೆ ಮೂಲಕ ಗ್ರಾಮೀಣರಿಗೆ ಸಾಹಿತ್ಯಿಕ ಪರಂಪರೆಯನ್ನು ಉಣಬಡಿಸಲಾಗವುದು. ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರಿಗೆ ನುಡಿಜಾತ್ರೆ ವೇದಿಕೆಯಾಗಲಿದೆ. ಈ ಜಾತ್ರೆ ಸಾಹಿತ್ಯಿಕ ಮತ್ತು ಧಾರ್ಮಿಕ ಸಮಾಗಮವಾಗಿದೆ. ಪ್ರಮುಖವಾಗಿ ಹಲವು ಯುವ ಮತ್ತು ವಿದ್ಯಾರ್ಥಿ ಕವಿಹೃದಯಗಳಿಗೆ ನುಡಿಜಾತ್ರೆಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಪ್ರತಿವರ್ಷದಂತೆ ಈ ವರ್ಷವೂ ಸಹಸ್ರಾರು ಭಕ್ತರ ನೇತೃತ್ವದಲ್ಲಿ ದೊಡ್ಡಬಸವೇಶ್ವರ ಜಾತ್ರೋತ್ಸವ ವಿಜೃಂಭಣೆಯಿಂದ ಜರುಗುವುದು ಎಂದರು.
ಸರ್ಕಾರಿ ನೌಕರರ ಸಂಘದ ವಿಭಾಗೀಯ ಉಪಾಧ್ಯಕ್ಷ ಎಂ.ಪಿ.ಎಂ. ಮಂಜುನಾಥ ಮಾತನಾಡಿ, ನಾಡಿನ ಹಿರಿಯ ಸಾಹಿತಿಗಳನ್ನು ನುಡಿಜಾತ್ರೆ ಸರ್ವಾಧ್ಯಕ್ಷರನ್ನಾಗಿಸುವುದು ಶ್ರೀಮಠದ ಸತ್ಸಂಪ್ರದಾಯವಾಗಿದೆ. ಹರಿಹರದಲ್ಲಿ ಸಮ್ಮೇಳನಾಧ್ಯಕ್ಷರನ್ನು ಅಧಿಕೃತವಾಗಿ ಆಹ್ವಾನಿಸಲಾಗಿದೆ. ಈ ಹಿಂದೆ ಕವಿಕುಂಚಗಾಯನದ ಮೂಲಕ ಹಲವು ಹೊಸ ಪ್ರತಿಭೆಗಳ ಅನಾವರಣಗೊಳಿಸಲಾಗಿತ್ತು. ಈ ಸಾಲಿನಲ್ಲಿಯೂ ಪುಸ್ತಕ ಬಿಡುಗಡೆ, ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಜಾತ್ರೆಯಲ್ಲಿ ವಿಶೇಷವಾಗಿ ಸಾಮೂಹಿಕ ವಿವಾಹ, ಆರೋಗ್ಯ ಶಿಬಿರ, ಕೃಷಿಮೇಳ, ಧರ್ಮಸಭೆ ಕಾರ್ಯಕ್ರಮಗಳು ವಿಶೇಷ ಮೆರಗು ನೀಡುತ್ತವೆ ಎಂದು ತಿಳಿಸಿದರು.ನುಡಿಜಾತ್ರೆ ಸದಸ್ಯರಾದ ಹ್ಯಾಟಿ ಲೋಕಪ್ಪ, ಸಾಹಿತಿ ಗುಂಡೂರು ಪಾಟೀಲ್, ಉಪನ್ಯಾಸಕರಾದ ಗುರುಬಸವರಾಜ ಇತರರಿದ್ದರು.