ಸಾಹಿತ್ಯ ಸಮಾಜವನ್ನು ಒಗ್ಗೂಡಿಸಬೇಕು: ಅದಮಾರು ಶ್ರೀ

| Published : Feb 27 2024, 01:32 AM IST

ಸಾರಾಂಶ

ಸಾಹಿತ್ಯ ರಚನೆ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಬೇಕೇ ಹೊರತು ಸ್ವಾಸ್ಥ್ಯವನ್ನು ಕದಡುವಂತಾಗಬಾರದು ಎಂದು ಉಡುಪಿ ಶ್ರೀ ಅದಮಾರು ಮಠದ ವಿಶ್ವಪ್ರಿಯತೀರ್ಥ ಸ್ವಾಮೀಜಿ ನುಡಿದರು.

ಅಂಕಣಕಾರ ಟಿ.ದೇವಿದಾಸ್ ವಿರಚಿತ ನಾಲ್ಕು ಪುಸ್ತಕಗಳನ್ನು ಲೋಕಾರ್ಪಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸಾಹಿತ್ಯ ರಚನೆ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಬೇಕೇ ಹೊರತು ಸ್ವಾಸ್ಥ್ಯವನ್ನು ಕದಡುವಂತಾಗಬಾರದು ಎಂದು ಉಡುಪಿ ಶ್ರೀ ಅದಮಾರು ಮಠದ ವಿಶ್ವಪ್ರಿಯತೀರ್ಥ ಸ್ವಾಮೀಜಿ ನುಡಿದರು. ಉದ್ಭವ ಪ್ರಕಾಶನ ನಗರದ ಕುವೆಂಪು ಕಲಾ ಮಂದಿರದಲ್ಲಿ ಆಯೋಜಿಸಿದ್ದ ಅಂಕಣಕಾರ ಟಿ.ದೇವಿದಾಸ್ ವಿರಚಿತ ನಾಲ್ಕು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಶ್ರೀಗಳು ಆಶೀರ್ವಚನ ನೀಡಿದರು. ಬರೆಯುವಾಗ ಅರ್ಥ ಮಾಡಿಕೊಂಡು, ಅನುಭವಿಸಿ ಬರೆಯಬೇಕೆಂಬುದು ಮಹಾಭಾರತದ ಮುಖ್ಯ ಸಂದೇಶ. ದೇವಿದಾಸ್ ಬರೆದಿರುವುದು ಸ್ವಾಸ್ಥ್ಯ ಸಮಾಜದ ವಿವಿಧ ಮುಖಗಳನ್ನು ತೆರೆದಿಡುವಂಥದ್ದು. ಅದುರಾಷ್ಟ್ರ ಪ್ರಜ್ಞೆ ಸಂಕೇತವಾಗಿದೆ. ಸಾಹಿತ್ಯ ಉತ್ತಮ ಅಂಶಗಳನ್ನು ಪಸರಿಸುವ ಮಾಧ್ಯಮವಾದಾಗ ಮಾತ್ರ ಸಾರ್ಥಕವಾಗುತ್ತದೆ ಎಂದರು. ಸ್ವಾತಂತ್ರ್ಯಾನಂತರ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಬಹಳಷ್ಟು ಸ್ಥಿತ್ಯಂತರಗಳು ನಡೆದಿವೆ. ಕಳೆದ ದಶಕದಿಂದ ಬದಲಾವಣೆಯ ಗತಿ ತೀವ್ರವಾಗಿದೆ ಎಂದು ಹೇಳಿದರು.ಸಾಹಿತಿ ಡಾ.ಬೆಳವಾಡಿ ಮಂಜುನಾಥ ಅಭಿಮುಖ ಎರಡು ಸಂಪುಟಗಳನ್ನು ಪರಿಚಯಿಸಿ ಒಟ್ಟು 224 ಲೇಖನಗಳು ಸಂಕಲಿತವಾಗಿದ್ದು ಪ್ರಸಕ್ತ ವಿದ್ಯಮಾನಗಳಿಗೆ ಪ್ರತಿಕ್ರಿಯೆಯಾಗಿದೆ. ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಕ್ರೀಡೆ, ರಾಜಕೀಯ, ಅಧ್ಯಾತ್ಮ, ಸಂಗೀತ, ಕಲೆ, ಜಾನಪದ ಹೀಗೆ ಬಹುಮುಖಿಯಾಗಿದೆ. ಎಲ್ಲಿಯೂ ಕೂಡ ನೀತಿ ಬೋಧೆಯಾಗದಂತೆ ಕಲಾತ್ಮಕವಾಗಿ ನಿರೂಪಿಸಲಾಗಿದೆ. ಯಾವುದೇ ತತ್ತ್ವ ಸಿದ್ಧಾಂತಗಳಿಗೆ ಬದ್ಧರಾಗದ ದೇವಿದಾಸ್ ಮಹತ್ತಾದ ವಿಚಾರ ಗಳನ್ನೂ ಸರಳ ಮತ್ತು ಸ್ಪಷ್ಟವಾಗಿ ದಾಖಲಿಸಿದ್ದಾರೆ ಎಂದರು. ವೈಚಾರಿಕ ಲೇಖನಗಳೇ ಅಭಿಮುಖ ಸಂಪುಟಗಳಲ್ಲಿ ಹೆಚ್ಚಾಗಿದ್ದು ವಿಶೇಷ ಮಾಹಿತಿಯೊಂದಿಗೆ ವರ್ತಮಾನದ ವಿದ್ಯ ಮಾನಗಳಿಗೆ ಸಾಕ್ಷಿಯಾಗಿದೆ. ಇದರಿಂದ ಈ ಸಂಪುಟಗಳು ಐತಿಹಾಸಿಕ ಮಹತ್ವ ಪಡೆದಿವೆ ಎಂದು ಹೇಳಿದರು. ಮೋದಿ-ಹಳಿ ಹಿಡಿದ ಹಾದಿ ಕೃತಿ ಪರಿಚಯಿಸಿದ ರಾಘವೇಂದ್ರ ಅವರು ಕಾರ್ಯಕ್ಷಮತೆ ಹೆಚ್ಚಿಸುವುದು ಖಾಸಗೀಕರಣದ ಪ್ರಮುಖ ಉದ್ಧೇಶ. ಕಾರ್ಯಕ್ಷಮತೆ ಹೆಚ್ಚಳದಿಂದ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದಾಗಿದೆ ಹೇಳಿದರು.ಜಾಗತೀಕರಣದ ಪೈಪೋಟಿಯಲ್ಲಿ ಯುವಜನಾಂಗದ ರಾಷ್ಟ್ರಪ್ರೇಮ ಬಲಪಡಿಸಬೇಕಾಗಿದೆ. ಸ್ವಾತಂತ್ರ್ಯಾನಂತರ ದೇಶದ ಪ್ರಗತಿ ಗಣನೀಯವಾಗಿ ಹೆಚ್ಚಿದೆ. ವಿದ್ಯುನ್ಮಾನ ತಂತ್ರಜ್ಞಾನದ ಬೆಳವಣಿಗೆಯಲ್ಲಿ ಪಿ.ವಿ.ನರಸಿಂಹರಾವ್ ಮತ್ತು ಮೋದಿ ಪಾತ್ರ ಮಹತ್ವದ್ದು ಎಂಬುದನ್ನು ಈ ಪುಸ್ತಕ ದಾಖಲಿಸಿದೆ ಎಂದರು. ಹಾಗೆ ಸುಮ್ಮನೆ ಪುಸ್ತಕ ಪರಿಚಯಿಸಿದ ರಂಗಕರ್ಮಿ ಮಂಜುನಾಥ ಸ್ವಾಮಿ ಮಾತನಾಡಿ, ಗಾಳಿಯಲ್ಲಿ ತೂರಿ ಹೋಗು ವುದನ್ನು ಹಾಳೆಯಲ್ಲಿ ಹಿಡಿದಿರಿಸಿರುವ ಮುದ್ರಣ ಮಾಧ್ಯಮ ಎಂದು ವ್ಯಾಖ್ಯಾನಿಸಿದರು. ಸಹಜವಾಗಿ ಹರಟುವಾಗ ಗಂಭೀರ ವಿಷಯಗಳು ಮಾತಿನ ಮಧ್ಯೆ ಹಾದು ಹೋಗುತ್ತವೆ. ಅಂಥ ಅಂಶಗಳನ್ನು ದಾಖಲಿಸಿ ಚರ್ಚೆಗೆ ಅವಕಾಶ ಮಾಡಿದೆ ಎಂದರು. ಎಸ್.ಎಸ್.ಎಲ್.ಸಿ.ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆ ಮೌನ ಗಿರೀಶ್, ಜಾವಲಿನ್ ಹಾಗೂ ಥ್ರೋಬಾಲ್‌ ಕ್ರೀಡೆಯಲ್ಲಿ ರಾಜ್ಯ ಪ್ರಶಸ್ತಿ ಪಡೆದ ಎಂ.ಮಂದಿರ ಮತ್ತು ಸಾಹಿತಿ ಟಿ.ದೇವಿದಾಸ್‌ರನ್ನು ಸನ್ಮಾನಿಸಲಾಯಿತು. ಶ್ರೀಗಳಿಗೆ ನಾಗರಿಕರ ಗುರುವಂದನೆ ಸಲ್ಲಿಸಲಾಯಿತು. ರಾಮ ಹಾಸ್ಯಗಾರ್, ಕೆ.ಯು.ವಿನೀತ್‌ಕುಮಾರ್, ನಾರಾಯಣ ಮಲ್ಯ. ಜ್ಯೋತಿ ವಿನೀತ್‌ಕುಮಾರ್, ಶಂಕರನಾರಾಯಣ ಭಟ್ ಉಪಸ್ಥಿತರಿದ್ದರು.

26 ಕೆಸಿಕೆಎಂ 2ಉದ್ಭವ ಪ್ರಕಾಶನ ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ಆಯೋಜಿಸಿದ್ದ ಅಂಕಣಕಾರ ಟಿ.ದೇವಿದಾಸ್ ವಿರಚಿತ ನಾಲ್ಕು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಉಡುಪಿ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು.