ಗದಗ: ಸಾಹಿತ್ಯಾಭಿರುಚಿ ಮತ್ತು ಪುಸ್ತಕ ಓದುವ ಹವ್ಯಾಸ ವ್ಯಕ್ತಿಯ ಬೌದ್ಧಿಕ, ಭಾವನಾತ್ಮಕ ಮತ್ತು ಕ್ರಿಯಾಶೀಲ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಪ್ರಧಾನ ಅಂಚೆ ಕಚೇರಿಯ ಉಪ ಅಂಚೆ ಪಾಲಕರಾದ ಡಿ.ಜಿ. ಮ್ಯಾಗೇರಿ ಹೇಳಿದರು.
ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಶನಿವಾರ ಮನರಂಜನಾ ಕೂಟದ ಸದಸ್ಯರಿಗೆ ಅಂಚೆ ಸಹಾಯಕ ಸುರೇಶ ತಂಗೋಡ ಅವರು ಬರೆದಿರುವ ಅಂಗೈಯಲ್ಲಿ ಅಂಚೆ ಪುಸ್ತಕ ಗೌರವ ಪ್ರತಿ ನೀಡಿ ಮಾತನಾಡಿದರು.ಮಾತನಾಡಿದಷ್ಟು ಬರೆಯುವುದು ಸುಲಭದ ಕೆಲಸವಲ್ಲ. ಲಕ್ಷ್ಮೇಶ್ವರದ ಅಂಚೆ ಕಚೇರಿಯ ಅಂಚೆ ಸಹಾಯಕ ಸುರೇಶ ತಂಗೋಡ ಅವರು ಕಾಂಕ್ರೀಟ್ ಕಾಡು ಹಾಗೂ ಅಂಗೈಯಲ್ಲಿ ಅಂಚೆ (ಒಂಚೂರು ವಿಷಯ ಒಂಚೂರು ಸಾಹಿತ್ಯ) ಎಂಬ ಅಪರೂಪದ ಎರಡು ಪುಸ್ತಕಗಳನ್ನು ಹೊರ ತಂದಿದ್ದಾರೆ. ಅದು ನಿಜಕ್ಕೂ ಶ್ಲಾಘನೀಯ ಕಾರ್ಯ. ಇಂತಹ ಮತ್ತಷ್ಟು ಪುಸ್ತಕಗಳನ್ನು ಹೊರತರುವ ಶಕ್ತಿ ಅವರಿಗೆ ಲಭಿಸಲಿ ಎಂದರು. ಅಂಚೆ ಇಲಾಖೆಯ ಯೋಜನೆಗಳ ಮತ್ತು ಇಲಾಖೆಯ ಬಗೆಗೆ ವಿಸ್ತೃತ ವಿವರಣೆ ಪರಿಚಯಿಸಲು ಅತ್ಯಂತ ಉಪಯುಕ್ತವಾದ ಪುಸ್ತಕ ಇದಾಗಿದೆ. ಅಂಚೆ ಇಲಾಖೆ ಸಾಕಷ್ಟು ಕೆಲಸದ ಒತ್ತಡ ಮಧ್ಯದಲ್ಲಿಯೂ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವದು ಹೆಮ್ಮೆ ಮತ್ತು ಸಂತಸದ ತಂದಿದೆ ಎಂದರು.ಅಂಚೆ ಸಹಾಯಕ ಸುರೇಶ ತಂಗೋಡ ಮಾತನಾಡಿ, ಅಂಚೆ ಇಲಾಖೆಯ ಬಗೆಗಿನ ಋಣವನ್ನು ತೀರಿಸುವ ಅಳಿಲು ಸೇವೆ ನನ್ನಿಂದ ಆಗಿರುವುದು ನನ್ನ ಪುಣ್ಯ.
ಓದುವ ಹವ್ಯಾಸ ಜಗತ್ತಿನ ಬಗ್ಗೆ, ಸಂಸ್ಕೃತಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಹೊಸ ವಿಷಯಗಳನ್ನು ಕಲಿಯುವ ಕುತೂಹಲವನ್ನು ಪುಸ್ತಕಗಳಿಂದ ಪಡೆದ ಸೌಜನ್ಯ ಮತ್ತು ಜ್ಞಾನವು ವ್ಯಕ್ತಿಯನ್ನು ಸಮಾಜದಲ್ಲಿ ಉತ್ತಮ ನಾಯಕತ್ವ ಗುಣ ಬೆಳೆಯಲು ಸಹಕಾರಿಯಾಗಿದೆ. ಅಷ್ಟೇ, ಅಲ್ಲದೇ ಜೀವನದಲ್ಲಿ ಉತ್ತಮ ಬದುಕು ಕಟ್ಟಿಕೊಡುವ ಶಕ್ತಿ ಪುಸ್ತಕಗಳಿಗಿದೆ ಎಂದರು.ಈ ವೇಳೆ ಅಂಚೆ ಸಹಾಯಕರಾದ ಮನೋಹರ ಕಡಿಯವರ, ಹಜರತ ಅಲಿ ಕೊತಬಾಳ, ವೆಂಕಟೇಶ, ಗೋಪಾಲ ಲಮಾಣಿ, ಸಿದ್ಧಲಿಂಗೇಶ ಯಂಡಿಗೇರಿ, ಉಮೇಶ ಸಂದಿಮನಿ, ಶಿವಕುಮಾರ ಸುಳ್ಯದ, ಪ್ರವೀಣ ಮಲಕಶೆಟ್ಟಿ, ಕೆ.ಎಂ.ಹೊಂಬಳ ಮತ್ತಿತರರು ಇದ್ದರು.