ಸಾರಾಂಶ
ದೊಡ್ಡಬಳ್ಳಾಪುರ: ಜಾತಿ, ಮತ, ಧರ್ಮಗಳ ಆಧಾರದಲ್ಲಿ ಒಡೆಯುತ್ತಿರುವ ಸಮಾಜವನ್ನು ಒಟ್ಟುಗೂಡಿಸಿ ವಿವೇಕವನ್ನು ವಿಸ್ತರಿಸುವುದು ಇಂದಿನ ಅಗತ್ಯವಾಗಿದ್ದು, ಸಾಹಿತ್ಯವು ಮನುಷ್ಯ ಹಾಗೂ ಮಾನವೀಯ ಚಿಂತನೆಗಳನ್ನು ಉನ್ನತೀಕರಣದ ಮಾರ್ಗವಾಗಬೇಕು ಎಂದು ಬಂಡಾಯ ಸಾಹಿತಿ, ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಹೇಳಿದರು.
ತಾಲೂಕಿನ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಭಾನುವಾರ ಆರಂಭವಾದ ದೊಡ್ಡಬಳ್ಳಾಪುರ ತಾಲೂಕು 13ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.ಕನ್ನಡದ ಜನಪದ ಸಾಹಿತ್ಯ ದೇವರುಗಳನ್ನು ಮೀರಿದ ತತ್ವಶಾಸ್ತ್ರವಾಗಿದೆ. ಅಲ್ಲಿನ ಸೊಗಸು, ವಿಚಾರ, ವಿವೇಕ ಪ್ರಪಂಚದ ಯಾವುದೇ ಸಾಹಿತ್ಯದಲ್ಲೂ ಕಾಣಸಿಗುವುದು ತೀರಾ ವಿರಳ ಎಂದ ಅವರು, ಕನ್ನಡದಲ್ಲಿ ಎಲ್ಲ ವೃತ್ತಿಧರ್ಮಗಳಿಂದ ಬಂದವರೂ ಸಾಹಿತ್ಯವನ್ನು ರಚಿಸಿದ್ದಾರೆ. ವಿವಿಧ ಕಸುಬುಗಳನ್ನು ಹೊಂದಿದ್ದ ಸಾಹಿತಿಗಳು ಸಾರಸ್ವತ ಜಗತ್ತಿನ ಬೆರಗಿಗೆ ದನಿಯಾಗಿದ್ದಾರೆ ಎಂದು ವಿಶ್ಲೇಷಿಸಿದರು.
ಮನುಷ್ಯ ಜಾತಿ ತಾನೊಂದೆ ವಲಂ:ಕನ್ನಡದ ಆದಿಕವಿ ಪಂಪ ಮನುಷ್ಯ ಜಾತಿ ತಾನೊಂದೆ ವಲಂ ಎಂದು ಹೇಳುವ ಮೂಲಕ ಬದುಕಿನ ಶ್ರೇಷ್ಠತೆಯನ್ನು ಸಾರಿದ್ದಾನೆ. ಹುಟ್ಟಿನಿಂದ ಯಾರೂ ದೊಡ್ಡವರಾಗುವುದಿಲ್ಲ ಎಂದು ಸಾರಿದ ಬಸವಣ್ಣ ಕಾಯಕ ನಿಷ್ಠೆ ಹಾಗೂ ಅನನ್ಯತೆಯನ್ನು ಸಾರುವ ಮೂಲಕ ಸಮಾನತೆಯ ನಿವಾರಣೆಯ ಅನಿವಾರ್ಯತೆಯನ್ನು ಪ್ರಸ್ತಾಪಿಸಿದ್ದು, ಧರ್ಮ ಸಮಾನತೆಯ ಸೂಕ್ಷ್ಮಗಳನ್ನು ಅರಿತುಕೊಳ್ಳುವುದು ಅಗತ್ಯ. ಇಂದು ದೇವರುಗಳನ್ನು ಮುಂದಿಟ್ಟುಕೊಂಡು ಅಸಮಾನತೆಯನ್ನು ಆಚರಿಸುವ ಕಾಲ ಬಂದಿದೆ. ಇದು ಅತ್ಯಂತ ವಿಷಾದನೀಯ. ಪೂಜಾಸ್ಥಾನಗಳ ಶ್ರೇಷ್ಠತೆ ವ್ಯಕ್ತಿಗತ ತರ್ಕವಾಗಬಾರದು. ಸಾಹಿತ್ಯ ಅಥವಾ ಭಾಷೆ ಧರ್ಮ ಸಮನ್ವಯದ ತತ್ವಕ್ಕೆ ಬದ್ದವಾಗಿರಬೇಕೇ ವಿನಃ ದ್ವೇಷವನ್ನು ಪ್ರಚೋದಿಸುವ ಮಾರ್ಗವಾಗಬಾರದು ಎಂದರು.
ಸಾಹಿತ್ಯ ಓದು-ಅನುಷ್ಠಾನ ಅಗತ್ಯ:ಸಾಹಿತ್ಯ, ಸಂಸ್ಕೃತಿ, ಸಂಗೀತ ಇತ್ಯಾದಿಗಳು ಆರಾಧಿಸುವ ವಸ್ತುಗಳಾಗದೆ ಅನುಷ್ಠಾನಕ್ಕೆ ತರುವ ಮಾರ್ಗಗಳಾಗಬೇಕು. ಸಮ್ಮೇಳನಗಳು ಒಂದು ಅಥವಾ ಎರಡು ದಿನದ ಆಚರಣೆಗಳು ಮಾತ್ರವಾಗದೇ ವರ್ಷದ ಎಲ್ಲ ದಿನಗಳಲ್ಲೂ ಪಾಲಿಸಲು ಅಗತ್ಯವಿರುವ ಮಾರ್ಗದರ್ಶಕ ಸೂತ್ರಗಳನ್ನು ನೀಡುವ ವೇದಿಕೆಗಳಾಗಬೇಕು ಎಂದರು.
ಸಾಹಿತ್ಯ ಎಲ್ಲರ ಸ್ವತ್ತು:ಜನರ ಸಮಸ್ಯೆಗಳು, ಜ್ವಲಂತ ಸವಾಲುಗಳನ್ನು ಅರಿತುಕೊಳ್ಳದವ ಸಾಹಿತಿಯಾಗಲು ಸಾಧ್ಯವಿಲ್ಲ. ಬರೆವಣಿಗೆ ಅನುಭವದ ಪಡಿಯಚ್ಚಾಗಬೇಕು.ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಜಗತ್ತಿಗೆ ಮೊಟ್ಟಮೊದಲು ಸಾರಿದ ಕನ್ನಡ ಸಂಸ್ಕೃತಿಯ ಅನನ್ಯತೆಯನ್ನು ಅರ್ಥಮಾಡಿಕೊಳ್ಳಬೇಕು. ಜಾಡಮಾಲಿಯ ಅನುಭವವೂ ಸಾಹಿತ್ಯದ ರೂಪದಲ್ಲಿ ಹೊರಬಂದಾಗ ಮಾತ್ರ ಬದುಕಿನ ಶ್ರೇಷ್ಠತೆಯನ್ನು ಅರಿತುಕೊಳ್ಳಲು ಸಾಧ್ಯ. ಗ್ರಾಮೀಣ ಜನರಲ್ಲಿ ವಿವೇಕ ಹೆಚ್ಚಿದ್ದು, ಮೌಢ್ಯದ ಆಚರಣೆಗಳಿಗೆ ಕಡಿವಾಣ ಅಗತ್ಯ. ಸಾಹಿತ್ಯ ಎಲ್ಲರ ಸ್ವತ್ತಾಗಬೇಕು ಎಂದು ಪ್ರತಿಪಾದಿಸಿದರು.
ಅಧ್ಯಯನಶೀಲತೆ ಹೆಚ್ಚಲಿ: ಶಾಸಕಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಧೀರಜ್ ಮುನಿರಾಜ್ ಮಾತನಾಡಿ, ಕನ್ನಡ ಚಿಂತನೆಗಳನ್ನು ಎಲ್ಲ ಹಂತಗಳಲ್ಲಿ ಜಾಗೃತಗೊಳಿಸುವುದು ಅಗತ್ಯವಾಗಿದೆ. ಸಾಹಿತ್ಯ ಜ್ಞಾನದ ವಿನಿಮಯಕ್ಕೆ ಬಹುಮೂಲ್ಯ ಮಾಧ್ಯಮವಾಗಿದ್ದು, ಅಧ್ಯಯನಶೀಲತೆ ಹೆಚ್ಚಬೇಕಿದೆ ಎಂದು ತಿಳಿಸಿದರು.
ಪದ್ಮಶ್ರೀ ಡಾ.ಸಿ.ಆರ್.ಚಂದ್ರಶೇಖರ್ಗೆ ಸನ್ಮಾನ:ಇದೇ ವೇಳೆ ಹಿರಿಯ ಮನೋವೈದ್ಯ, ಲೇಖಕ ಹಾಗೂ ಪ್ರಸಕ್ತ ವರ್ಷದ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿರುವ ಡಾ.ಸಿ.ಆರ್.ಚಂದ್ರಶೇಖರ್ ಅವರಿಗೆ ದೊಡ್ಡಬಳ್ಳಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಅಭಿನಂದನಾ ಕಾರ್ಯಕ್ರಮ ನಡೆಯಿತು. ದಿವಂಗತ ಲಕ್ಕೂರು ಚಿಕ್ಕನಾಗಣ್ಣ ಮತ್ತು ಅವರ ಪತ್ನಿಯ ಹೆಸರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶಾಶ್ವತ ದತ್ತಿ ನಿಧಿಯನ್ನು ಸ್ಥಾಪಿಸಲು ಮಹಿಳಾ ಸಮಾಜದ ಮಾಜಿ ಅಧ್ಯಕ್ಷೆ ಎಲ್.ಸಿ.ದೇವಕಿ ಅವರು ಚೆಕ್ ಅನ್ನು ಜಿಲ್ಲಾಧ್ಯಕ್ಷರಿಗೆ ಹಸ್ತಾಂತರಿಸಿದರು.
ಸಮ್ಮೇಳನಾಧ್ಯಕ್ಷ ಡಾ.ಟಿ.ಎಚ್.ಆಂಜನಪ್ಪ, ಬೆಂ.ಗ್ರಾ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ, ತಹಶೀಲ್ದಾರ್ ವಿಭಾವಿದ್ಯಾ ರಾಥೋಡ್, ತಾಪಂ ಇಒ ಮುನಿರಾಜು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಿ.ನರಸಿಂಹಮೂರ್ತಿ, ಬಾಶೆಟ್ಟಿಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಬಿ.ಕೃಷ್ಣಪ್ಪ, ದೊಡ್ಡಬಳ್ಳಾಪುರ ತಾಲೂಕು ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು, ಬೆಂ.ಗ್ರಾ. ಜಿಲ್ಲಾ ಕಸಾಪ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್, ತಾಪಂ ಮಾಜಿ ಸದಸ್ಯೆ ರೇಣುಕಾ ರಾಜಣ್ಣ, ಗ್ರಾಪಂ ಮಾಜಿ ಉಪಾಧ್ಯಕ್ಷ ಬಿ.ಎಂ.ಮುನಿರಾಜಪ್ಪ, ಮಾಜಿ ಸದಸ್ಯ ಪ್ರೇಮ್ಕುಮಾರ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.25ಕೆಡಿಬಿಪಿ1- ದೊಡ್ಡಬಳ್ಳಾಪುರ ತಾಲೂಕು 13ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ಡಾ.ಟಿ.ಎಚ್.ಆಂಜನಪ್ಪ, ಶಾಸಕ ಧೀರಜ್ ಮುನಿರಾಜ್ ಇದ್ದಾರೆ.25ಕೆಡಿಬಿಪಿ2- ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ್ ಅವರನ್ನು ದೊಡ್ಡಬಳ್ಳಾಪುರ ತಾಲೂಕು 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.