ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಹಾಸನ ಜಿಲ್ಲೆಯ ಹೆಸರನ್ನು ವಿಶ್ವ ಮಟ್ಟದಲ್ಲಿ ಬೆಳಗಿಸಿರುವ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ನಮ್ಮ ನಡುವೆ ಇರುವುದು ನಮಗೊಂದು ಹೆಮ್ಮೆ. ಸಾಹಿತ್ಯ ಮತ್ತು ಕಲೆ, ಕ್ರೀಡೆಗಳು ಮನುಷ್ಯನ ವ್ಯಕ್ತಿತ್ವವನ್ನು ಬದಲಾಯಿಸುತ್ತವೆ. ವ್ಯಕ್ತಿಗೆ ಕೀರ್ತಿ ತರುವುದರ ಜೊತೆಗೆ ಸಮಾಜದಲ್ಲಿ ಉತ್ತಮ ಮನುಷ್ಯರಾಗಿ ಬದುಕಲು ಸಹಕಾರಿಯಾಗುತ್ತವೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ೨೦೨೪-೨೫ನೇ ಸಾಲಿನ ಸಾಂಸ್ಕೃತಿಕ, ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್ ರಿಬ್ಬನ್, ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮೊಬೈಲ್ ಚಟವನ್ನು ಬಿಟ್ಟು ದಿನಕ್ಕೆ ಒಂದು ಪತ್ರಿಕೆಯನ್ನಾದರೂ ಓದುವ ಹವ್ಯಾಸ ಬೆಳಸಿಕೊಳ್ಳಿ. ಭಾರತದಲ್ಲಿ ಯುವಶಕ್ತಿಯ ಪ್ರಾಬಲ್ಯವೇ ಹೆಚ್ಚಾಗಿದ್ದು ಅಡ್ಡದಾರಿ ಹಿಡಿಯಬಾರದು. ತಮ್ಮ ಶಕ್ತಿ ಮತ್ತು ಯುಕ್ತಿಯಿಂದ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಕರೆಕೊಟ್ಟರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಾಸನ ಕಲಾ ಕಾಲೇಜಿನ ಪ್ರಾಂಶುಪಾಲ ಇರ್ಷಾದ್ ಮಾತನಾಡಿ, ಹಾಸನ ಮೂರು ಬಾರಿ ವಿಶ್ವ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಎಚ್.ಡಿ.ದೇವೇಗೌಡ ಅವರು ಪ್ರಧಾನಿಯಾದಾಗ, ಬೇಲೂರು ಹಳೇಬೀಡು ಯುನೆಸ್ಕೋ ಪಟ್ಟಿಗೆ ಸೇರಿದಾಗ, ಬಾನು ಮುಷ್ತಾಕ್ ಬೂಕರ್ ಪ್ರಶಸ್ತಿ ಪಡೆದಾಗ. ಆದ್ದರಿಂದ ಹಾಸನ ಜಿಲ್ಲೆ ಕಲೆ, ಸಾಹಿತ್ಯ ಮತ್ತು ರಾಜಕೀಯಕ್ಕೆ ಹೆಚ್ಚು ಹೆಸರು ಪಡೆದಿದೆ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯ ಮೂಲಕ ಬದುಕಿನ ನೆಲೆ ಕಂಡುಕೊಳ್ಳಬೇಕು. ಶಿಕ್ಷಣ ನಮ್ಮನ್ನು ಬದಲಾವಣೆಯ ಹಾದಿಗೆ ಕರೆದುಕೊಂಡು ಹೋಗುತ್ತದೆ. ತಂದೆ ತಾಯಿಗಳನ್ನು ಹೆಚ್ಚು ಗೌರವಿಸಿ. ನಿಮ್ಮ ಜೀವನದ ಪರಿವರ್ತನೆಯಲಿ ಗುರುವಿನ ಪಾತ್ರ ಬಹುಮುಖ್ಯವಾಗಿರುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ.ಗಂಗೇಗೌಡ ಎಸ್.ಎಚ್ ಅವರು, ಕಲೆ ಮತ್ತು ಸಾಹಿತ್ಯ ನಮ್ಮ ಜೀವನದ ಕನ್ನಡಿ. ಹೆಚ್ಚು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಪ್ರಾಧ್ಯಾಪಕರಾದ ಜೆ.ಎಸ್. ಗುರುರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿದರೆ, ಮೋಹನ್ ಕುಮಾರ್ ವಾರ್ಷಿಕ ವರದಿಯನ್ನು ಓದಿದರು. ವೆಂಕಟೇಶ್ ಜೆ.ಆರ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಮರುಗೂರು ಅನಿಲ್, ಪುರಸಭೆಯ ಸದಸ್ಯ ಲೋಕೇಶ್, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ವೆಂಕಟೇಶ್, ಕಾಲೇಜಿನ ಪ್ರಾಧ್ಯಾಪಕರಾದ ಡಾ. ಅಜಯ್ ಕುಮಾರ್, ಡಾ.ವಾಸುದೇವ ಪ್ರಸಾದ್, ಡಾ. ಪೂರ್ಣಿಮಾ, ಡಾ.ರೂಪ, ಡಾ. ಮುನಿರಾಜ್, ದೈಹಿಕ ನಿರ್ದೇಶಕರಾದ ಪ್ರಕಾಶ್ ಕುಮಾರ್, ಕಚೇರಿ ಅಧೀಕ್ಷಕರಾದ ಕೃಷ್ಣ, ಚೆಲುವೇಗೌಡ ಇದ್ದರು.