ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ಸ್ಪರ್ಧೆಯಲ್ಲಿ ಎಲ್ಲರೂ ಅತಿ ಉತ್ಸಾಹದಿಂದ ಭಾಗವಹಿಸಿರುವುದು ತುಂಬಾ ಸಂತೋಷಕರವಾಗಿದೆ. ಎಲ್ಲ ಖಾದ್ಯಗಳು ಅತ್ಯುತ್ತಮವಾಗಿದ್ದು, ಬಹುಮಾನ ಪಡೆಯಲು ಅರ್ಹತೆ ಹೊಂದಿವೆ ಎಂದರು.
ಗದಗ: ಸಿರಿಧಾನ್ಯದ ನಿಯಮಿತವಾದ ಸೇವನೆಯಿಂದ ಸಕ್ಕರೆ ರೋಗ, ರಕ್ತದೊತ್ತಡ, ಬೊಜ್ಜು ಇತ್ಯಾದಿಗಳನ್ನು ನಿಯಂತ್ರಿಸಬಹುದು. ಸಿರಿಧಾನ್ಯಗಳನ್ನು ಹೆಚ್ಚಾಗಿ ಬಳಸಿ ಆರೋಗ್ಯಕರ ಜೀವನ ನಡೆಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮನವಿ ಮಾಡಿದರು.
ತಾಲೂಕಿನ ಹುಲಕೋಟಿ ಗ್ರಾಮದ ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ವಾಣಿಜ್ಯ ಮೇಳ 2025- 26ರ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಸಿರಿಧಾನ್ಯಗಳು ಕಡಿಮೆ ರಸಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದ ಬೆಳೆಯುತ್ತಿದ್ದು, ಪೌಷ್ಟಿಕಾಂಶಗಳ ಆಗರವಾಗಿವೆ ಎಂದರು.ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ಸ್ಪರ್ಧೆಯಲ್ಲಿ ಎಲ್ಲರೂ ಅತಿ ಉತ್ಸಾಹದಿಂದ ಭಾಗವಹಿಸಿರುವುದು ತುಂಬಾ ಸಂತೋಷಕರವಾಗಿದೆ. ಎಲ್ಲ ಖಾದ್ಯಗಳು ಅತ್ಯುತ್ತಮವಾಗಿದ್ದು, ಬಹುಮಾನ ಪಡೆಯಲು ಅರ್ಹತೆ ಹೊಂದಿವೆ ಎಂದರು.
ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ತಾಲೂಕು ಹಾಗೂ ಗ್ರಾಮಗಳಿಂದ ಒಟ್ಟು 73 ಸ್ಪರ್ಧಾಳುಗಳು ವೈವಿಧ್ಯಮಯ, ರುಚಿಕರವಾದ ವಿವಿಧ ಸಿರಿಧಾನ್ಯದ ಹಾಗೂ ಮರೆತುಹೋದ ಖಾದ್ಯಗಳನ್ನು ಮನೆಯಲ್ಲಿ ತಯಾರಿಸಿಕೊಂಡು ಬಂದು ಪ್ರದರ್ಶಿಸಿದರು.ಸಿರಿಧಾನ್ಯದ ಸಿಹಿ ಖಾದ್ಯಗಳಲ್ಲಿ ವಿವಿಧ ಪಾಯಸ, ಹೋಳಿಗೆಗಳು, ಲಾಡುಗಳು, ಹಲ್ವಾ, ಕೇಕ್, ಫುಡ್ಡಿಂಗ್, ಸಿರಿಧಾನ್ಯ ಗಾರಿಗೆ, ಸಜ್ಜೆ ಉಂಡೆ ಮತ್ತು ಮಾದಲಿ ಇತ್ಯಾದಿಗಳನ್ನು ರುಚಿಕರವಾಗಿ ತಯಾರಿಸಿ, ಆಕರ್ಷಕವಾಗಿ ಪ್ರದರ್ಶಿಸಿದರು. ಸಿರಿಧಾನ್ಯದ ಕಾರದ ಖಾದ್ಯಗಳಲ್ಲಿ ರುಚಿಕರವಾದ ವಡೆಗಳು, ನುಚ್ಚು, ಅಂಬಲಿ, ಹಪ್ಪಳ, ಚಕ್ಕುಲಿ, ಕಿಚಡಿ, ರೊಟ್ಟಿಗಳು, ಜೋಳದ ಮುಟುಗಿ, ಎಣ್ಣೆ ಗಡುಬು, ಪಲಾವ್, ದೋಸೆ, ಮಾಲ್ಟ್, ಸಾವಿ ಮೊಸರನ್ನ, ಉಂಡಗಡುಬು, ಜೋಳದ ಕಿಚಡಿ, ಜೋಳದ ಮಸಾಲೆ ರೊಟ್ಟಿ, ಬರ್ಲಿ ಪೊಂಗಲ್, ಸಿರಿಧಾನ್ಯ ನಿಪ್ಪಟ್ಟು ನೋಡುಗರನ್ನು ಸವಿಯಲು ಕೈಬೀಸಿ ಕರೆಯುತ್ತಿದ್ದವು.ಮರೆತುಹೋದ ಖಾದ್ಯಗಳ ವಿಭಾಗದಲ್ಲಿ ಪೌಷ್ಟಿಕವಾದ ಕೊರಲೆ ಅಕ್ಕಿ ಸಂಡಿಗೆ, ಕೋಡಬೇಳೆ, ಗೋದಿ ಗಾರಿಗೆ, ಆಣಿಕಲ್ಲು ಹುಗ್ಗಿ, ಹುರುಳಿ ಪಾಯಸ, ಗುಳ್ಳಡಿಕೆ ಉಂಡಿ, ಬೆಲ್ಲದ ಹೋಳಿಗೆ, ಅಗಸೆ ಉಂಡೆ, ಕೆಂಪುಗೋದಿ ಹಲ್ವ ಬಾಯಲ್ಲಿ ನೀರೂರಿಸುವಂತಿದ್ದವು.ಕೆವಿಕೆ ಮುಖ್ಯಸ್ಥೆ ಸುಧಾ ಮಂಕಣಿ, ಸಾವಿತ್ರಿ ಬ್ಯಾಡಗಿ, ಉಪ ಕೃಷಿ ನಿರ್ದೇಶಕಿ ಸ್ಫೂರ್ತಿ ಜಿ.ಎಸ್. ಅವರು ನಿರ್ಣಾಯಕರಾಗಿ ಭಾಗವಹಿಸಿದ್ದರು.ಸಿರಿಧಾನ್ಯದ ಸಿಹಿ ಖಾದ್ಯಗಳು, ಸಿರಿಧಾನ್ಯದ ಕಾರದ ಖಾದ್ಯಗಳು ಹಾಗೂ ಮರೆತುಹೋದ ಖಾದ್ಯಗಳ ಮೂರು ವಿಭಾಗಗಳಲ್ಲಿ ತಲಾ ಮೂರು ಬಹುಮಾನಗಳನ್ನು ಪ್ರಮಾಣಪತ್ರಗಳೊಂದಿಗೆ ವಿತರಿಸಲಾಯಿತು. ಮೂರು ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದವರು ಬರುವ ದಿನಗಳಲ್ಲಿ ಏರ್ಪಡಿಸುವ ರಾಜ್ಯಮಟ್ಟದ ಸಿರಿಧಾನ್ಯದ ಪಾಕ ಸ್ಪರ್ಧೆಯಲ್ಲಿ ಕಡ್ಡಾಯವಾಗಿ ಭಾಗವಹಿಸಲು ತಿಳಿಸಲಾಯಿತು. ಭಾಗವಹಿಸಿದ ಎಲ್ಲ ಅಭ್ಯರ್ಥಿಗಳಿಗೂ ಅಭಿನಂದನಾ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಉಪವಿಭಾಗಾಧಿಕಾರಿ ಗಂಗಪ್ಪ, ಮಂಜುನಾಥ ಭರಮಗೌಡರ ಸೇರಿದಂತೆ ಇತರರು ಇದ್ದರು. ಸೀಮಾ ಸವಣೂರ ಕಾರ್ಯಕ್ರಮ ನಿರ್ವಹಿಸಿದರು.