ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೂತನ ವಧೂವರರು ದುಡ್ಡಿನ ಬೆನ್ನು ಹತ್ತಲೆ ಸರಳ ಜೀವನ ಸಾಗಿಸುವಂತೆ ಜಗದ್ಗುರು ಮುರುಘರಾಜೇಂದ್ರ ಬಹನ್ಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಮಹಾ ಸ್ವಾಮೀಜಿ ಸಲಹೆ ಮಾಡಿದರು.ನಗರದ ಶ್ರೀ ಬಹನ್ಮಠದಲ್ಲಿ ಶುಕ್ರವಾರ ನಡೆದ 35ನೇ ವರ್ಷದ 9 ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ 7 ಜೋಡಿಗಳ ವಿವಾಹ ನೆರವೇರಿಸಿ, ಶಿಕ್ಷಕರ ದಿನಾಚರಣೆ ಅಂಗವಾಗಿ ಡಾ.ಸರ್ವಪಲ್ಲಿ ರಾಧಾಕಷ್ಣನ್ರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದ ಶ್ರೀಗಳು.
ಜೀವನದಲ್ಲಿ ಒಳ್ಳೆಯ ಕೆಲಸ ಆರಂಭಿಸಿದರೆ ಅದು ಚರಿತ್ರೆಯಾಗುತ್ತದೆ. ಬಡವ ಸಾಲದ ಸುಳಿಯಲ್ಲಿ ಸಿಲುಕಿ ಮದುವೆಯಾಗುವುದಕ್ಕಿಂತ ಸ್ವಾಮಿಗಳ ಸಮ್ಮುಖದಲ್ಲಿ ಮದುವೆಯಾಗುವವರು ನಿಜವಾದ ಸಹೃದಯವುಳ್ಳ ಶ್ರೀಮಂತರು ಎಂದರು.ದುಡಿಯದೆ ಇರುವ ದುಡ್ಡು ನಮಗೆ ಶ್ರೀಮಂತಿಕೆ ಕೊಡಬಹುದು. ಆದರೆ ಅದರಿಂದ ನೆಮ್ಮದಿ ಸಿಗುವುದಿಲ್ಲ. ಚಿತ್ರದುರ್ಗದವರೇ ಆದ ಎಸ್.ನಿಜಲಿಂಗಪ್ಪನವರು ತಮ್ಮ ಹೆಸರಿಗೆ ಏನೂ ಮಾಡಿಕೊಳ್ಳದೆ ಇಂದು ಶ್ರೇಷ್ಠ ವ್ಯಕ್ತಿಗಳಾಗಿ ಪ್ರಾಮಾಣಿಕ ಜನಸೇವಕರಾಗಿ ನಮಗೆಲ್ಲ ಮಾದರಿಯಾಗಿದ್ದಾರೆ. ಇಂತಹ ನ್ಯಾಯಯುತ ಬದುಕು ನಮ್ಮದಾಗಬೇಕು ಎಂದು ಹೇಳಿದರು.
ಕಷ್ಟಪಟ್ಟು ದುಡಿದ ದುಡ್ಡು ನಮ್ಮನ್ನು ಮೇಲೆತ್ತುತ್ತದೆ. ಬಸವಣ್ಣನವರು ಹೇಳುವಂತೆ ಪರರ ಧನಕ್ಕೆ ಅಂಜಬೇಕು. ಯಾರೂ ಸಹ ಹಣ, ಅಧಿಕಾರ, ಬಂಗಾರ ತಿನ್ನಲು ಸಾಧ್ಯವಿಲ್ಲ. ಹಸಿವಾದಾಗ ಅನ್ನವನ್ನೇ ಸೇವಿಸಬೇಕು. ನವ ವಧು-ವರರು ಸತ್ಯಶುದ್ಧ ಕಾಯಕ ಮಾಡುತ್ತ ಸರಳವಾದ ಜೀವನ ಮಾಡಬೇಕು. ಹಣವಿದ್ದವರು ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲ. ಹಾಗಾಗಿ ನಮ್ಮ ನಮ್ಮ ಕಾಯಕವನ್ನು ನಾವು ನಿರ್ವಹಿಸುತ್ತ ನೆಮ್ಮದಿಯನ್ನು ಕಾಣಬೇಕು. ಸರಳವಾದ ಬದುಕು ಸಹಜವಾದ ವರ್ತನೆ ನಿಮ್ಮೆಲ್ಲರದಾಗಿರಲಿ ಎಂದರು.ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ, ಡಾ. ಸರ್ವಪಲ್ಲಿ ರಾಧಾಕಷ್ಣನ್ ಅವರು ಮೂಲತಃ ಶಿಕ್ಷಕರು. ಆದರೆ ಮುಂದೆ ಅವರು ಭಾರತದ ರಾಷ್ಟ್ರಪತಿಯಾಗುತ್ತಾರೆ. ಶಿಕ್ಷಕರು ನಮ್ಮ ಜೀವನದ ಶಿಲ್ಪಿಗಳು. ಪ್ರತಿಯೊಬ್ಬರ ಬದುಕನ್ನು ಉದ್ಧರಿಸುವವರು. ಶಿಕ್ಷಕ ವೃತ್ತಿ ಪವಿತ್ರವಾದುದು. ವಿದ್ಯೆಯನ್ನು ಪ್ರತಿಯೊಬ್ಬರು ಕಲಿಯಬೇಕು. ಮಕ್ಕಳನ್ನು ತಿದ್ದಿತೀಡಿ ಸರಿಯಾದ ದಾರಿಯಲ್ಲಿ ಕೊಂಡೊಯ್ಯುವ ಕಾರ್ಯವನ್ನು ಶಿಕ್ಷಕರು ಮಾಡುತ್ತಾರೆ. ಶಿಕ್ಷಕ ತುಂಬಾ ಎಚ್ಚರಿಕೆಯಿಂದ ಇರಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳಿಂದ ಅತ್ಯಂತ ಪ್ರೀತಿಯ ಗೌರವವನ್ನು ಸಂಪಾದಿಸಲು ಸಾಧ್ಯ. ಶಿಕ್ಷಣವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು. ಶಿಕ್ಷಣದಿಂದ ತಿಳುವಳಿಕೆ ಬರುತ್ತದೆ. ಸಮಾಜದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಜ್ಞಾನವೇ ಶಿಕ್ಷಣ ಎಂದು ಹೇಳಿದರು.
ಮುರುಘೇಂದ್ರ ಸ್ವಾಮಿಗಳು ವೇದಿಕೆಯಲ್ಲಿದ್ದರು. ಕಲಾವಿದ ಗಂಜಿಗಟ್ಟೆ ಕೃಷ್ಣಮೂರ್ತಿ ಜಾನಪದ ಗೀತೆಗಳನ್ನು ಹಾಡಿದರು. ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ಚಿನ್ಮಯ ದೇವರು ಸ್ವಾಗತಿಸಿದರು. ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿದರು.