ಸಾರಾಂಶ
ಪ್ರತಿಯೊಬ್ಬರೂ ತಮ್ಮ ಬದುಕನ್ನು ಹೇಗೆ ಸಾಗಿಸುತ್ತಾರೋ ಹಾಗೆಯೇ ಅವರ ಬದುಕು ಸಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಬದುಕನ್ನು ಉತ್ಸಾಹ, ಸಂತೋಷದಿಂದ ಸಾಗಿಸಬೇಕೆಂದು ತಾಳಿಕೋಟೆಯ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಹೇಳಿದರು.
ಬಸವನಬಾಗೇವಾಡಿ:
ಪ್ರತಿಯೊಬ್ಬರೂ ತಮ್ಮ ಬದುಕನ್ನು ಹೇಗೆ ಸಾಗಿಸುತ್ತಾರೋ ಹಾಗೆಯೇ ಅವರ ಬದುಕು ಸಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಬದುಕನ್ನು ಉತ್ಸಾಹ, ಸಂತೋಷದಿಂದ ಸಾಗಿಸಬೇಕೆಂದು ತಾಳಿಕೋಟೆಯ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಹೇಳಿದರು.ತಾಲೂಕಿನ ಅವಿಮುಕ್ತ ಸುಕ್ಷೇತ್ರ ಯರನಾಳ ವಿರಕ್ತಮಠದ ಕರ್ತೃ ಜಗದ್ಗುರು ಪಂಪಾಪತಿ ಶಿವಯೋಗಿಗಳ ಜಾತ್ರಾ ಮಹೋತ್ಸವ ಹಾಗೂ ಗುರುಸಂಗನಬಸವ ಸ್ವಾಮೀಜಿಗಳ ಜನ್ಮಸುವರ್ಣ ಮಹೋತ್ಸವ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಉಡಿತುಂಬುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಭಗವಂತ ನಮಗೆ ಒಳ್ಳೆಯ ಜೀವನ ಕೊಟ್ಟಿದ್ದಾನೆ. ಎಲ್ಲರೊಂದಿಗೆ ಪ್ರೀತಿಯಿಂದ ಇರುವ ಮೂಲಕ ಸುಂದರ ಜೀವನ ಕಳೆಯಬೇಕು ಎಂದರು.
ತಮದಡ್ಡಿಯ ಜಯಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಲ್ಲಿನ ಶ್ರೀಗಳು ಜಾತ್ರೆ ನಿಮಿತ್ತ ವೈಚಾರಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಮಾಜದಲ್ಲಿ ವೈಚಾರಿಕತೆ ಬೆಳೆಸುತ್ತಿದ್ದಾರೆ. ಶ್ರೀಗಳು ಇದೀಗ ಜನ್ಮಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದು, ಇವರು ೧೨೧ ವರ್ಷ ಕಾಲ ಬದುಕಿಗೆ ಭಕ್ತರಿಗೆ ಸದಾ ಆಶೀರ್ವಾದ ಕರುಣಿಸುವಂತಾಗಲಿ ಎಂದು ಹಾರೈಸಿದರು.ಬುರಣಾಪುರದ ಯೋಗೇಶ್ವರಿ, ಮಸಬಿನಾಳದ ಸಿದ್ದರಾಮ ಸ್ವಾಮೀಜಿ, ಯರನಾಳದ ಶಿವಪ್ರಸಾದದೇವರು ಮಾತನಾಡಿದರು.
ಗುರುಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ರಮೇಶ ಸೂಳಿಬಾವಿ, ಡಾ.ಅಮರೇಶ ಮಿಣಜಗಿ, ಸೌಮ್ಯ ಕಲ್ಲೂರ, ಶ್ರೀದೇವಿ ಉತ್ಲಾಸಕರ ಇದ್ದರು.ಇದೇ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅಶ್ವಿನಿ ರೆಡ್ಡಿಗೆ ಸುವರ್ಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಧ್ಯಮ ಕ್ಷೇತ್ರದಲ್ಲಿ ಬಂಗಾರ ಪದಕ ಪಡೆದ ಲಕ್ಷ್ಮೀ ಬಾಗಲಕೋಟ ಅವರನ್ನು ಸನ್ಮಾನಿಸಲಾಯಿತು. ಸುರೇಶ ಲಲಿತಾ ಜೀವನ್ಮುಖಿ ದಂಪತಿಗೆ ಆದರ್ಶ ದಂಪತಿಯೆಂದು ಗೌರವಿಸಲಾಯಿತು. ನೂರಾರು ಮಹಿಳೆಯರಿಗೆ ವಿಭೂತಿ, ರುದ್ರಾಕ್ಷಿ, ಮಂಗಳದ್ರವ್ಯದೊಂದಿಗೆ ಉಡಿತುಂಬಲಾಯಿತು. ರೇವಣಸಿದ್ದ ಪೂಜಾರಿ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ರಾಜನಾಳ ಸ್ವಾಗತಿಸಿದರು. ಗಿರಿಜಾ ಪಾಟೀಲ, ಪುಷ್ಪಾ ಗುಳೇದ, ಶರಣಬಸು ಹಳಮನಿ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಸಂಗನಬಸವ ಸ್ವಾಮೀಜಿ ಅವರ ಪಾದಪೂಜೆ,ಪೀಠಾರೋಹಣ ನೆರವೇರಿತು.