ಸಾರಾಂಶ
ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಂಬಾಕು ಬೆಳೆಗಾರರ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ಮಾಜಿ ಶಾಸಕ ಕೆ. ಮಹದೇವ್ ಆಗ್ರಹಿಸಿದರು.ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ಮಳೆಯಿಂದಾಗಿ ಗೋಡೆ ಕುಸಿದು ಮೃತಪಟ್ಟ ಹೇಮಾವತಿ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ವೈಯಕ್ತಿಕವಾಗಿ ಧನಸಹಾಯ ಮಾಡಿ, ಕೇಂದ್ರ ಸರ್ಕಾರದಿಂದ ಸಹಾಯ ಮಾಡುವುದಾಗಿ ತಿಳಿಸಿ ಇಂತಹ ಘಟನೆಗಳು ಮತ್ತೆ ಮರು ಕಳಿಸದಂತೆ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ರೈತರು ಹಗಲಿರುಳೆನ್ನದೆ ಬೆವರು ಸುರಿಸಿ ಬೆಳೆಯನ್ನು ಬೆಳೆಯುತ್ತಾರೆ. ಆದರೆ ಆತ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ರೈತರು ಇನ್ನು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಇವರ ನೆರವಿಗೆ ಸರ್ಕಾರಗಳು ಏಕೆ ದಾವಿಸುತ್ತಿಲ್ಲ? ವಿಶೇಷವಾಗಿ ಕೇಂದ್ರ ಸರ್ಕಾರ ಸರ್ಕಾರಿ ಸೌಮ್ಯದ ಬ್ಯಾಂಕುಗಳಲ್ಲಿ ರೈತರ ಸಂಪೂರ್ಣ ಸಾಲಮನ್ನಾವಾಗಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಚಿಸಬೇಕು. ಕರ್ನಾಟಕದ ಸಂಸದರು ಕೂಡ ಈ ವಿಷಯವಾಗಿ ಪ್ರಧಾನಿಯನ್ನು ಭೇಟಿ ಮಾಡಿ ಅವರಿಗೆ ವಿವರಿಸಿ ರೈತರಿಗೆ ಆಗಿರುವ ಕಷ್ಟವನ್ನು ಪರಿಹರಿಸಬೇಕು ಎಂದು ಅವರು ತಿಳಿಸಿದರು.ಕಷ್ಟದಲ್ಲಿರುವ ರೈತರಿಗೆ ಸಹಾಯ ಹಸ್ತ ನೀಡಿದರೆ ನಮಗೆ ಅನ್ನ ಕೊಡುವ ರೈತ ಸದಾ ಚಿರಋಣಿಯಾಗಿರುತ್ತಾರೆ. ಸತತ ಮಳೆಯಿಂದಾಗಿ ತಂಬಾಕು ಗಿಡಗಳು ಈಗಾಗಲೇ ಜ್ಯೋತು ಬಿದ್ದಿದ್ದು ಇದೇ ರೀತಿ ಮಳೆ ಮುಂದುವರೆದರೆ ಹೊಗೆಸೊಪ್ಪು ಕೈಗೆ ಸಿಗುವುದಿಲ್ಲ. ಎಲ್ಲಾ ಗಿಡದಲ್ಲೇ ಕರಗಿ ಹೋಗುತ್ತದೆ. ಕಾವೇರಿ ಹೊಳೆ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಅಕ್ಕಪಕ್ಕದ ಜಮೀನಿನು ಮುಳುಗಡೆ ಆಗಿ ಅಪಾರ ಪ್ರಮಾಣದ ನಷ್ಟ ಅನುಭವಿಸಿದ್ದಾರೆ. ಸರ್ಕಾರಿ ಅಧಿಕಾರಿಗಳು ಎಲ್ಲದರ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ನೀಡಬೇಕು ಹಾಗೂ ಅವರಿಗೆ ಸೂಕ್ತ ಪರಿಹಾರ ನೀಡುವಲ್ಲಿ ರೈತರಿಗೆ ಸಹಕಾರ ನೀಡಬೇಕು ಎಂದು ಅವರು ಹೇಳಿದರು.
ಹೆಚ್ಚಾದ ಮಳೆಯಿಂದಾಗಿ ತಾಲೂಕಿನಲ್ಲಿ ಅನೇಕ ಮನೆಗಳು ಕುಸಿದಿದ್ದು ಅಂತಹ ಮನೆಗಳಿಗೆ ಸರ್ಕಾರ 5 ಲಕ್ಷಗೂ ಹೆಚ್ಚಾಗಿ ಪರಿಹಾರ ನೀಡಬೇಕು. ನೀಡದಿದ್ದರೆ ನಾವು ಹೋರಾಟಕ್ಕೆ ಸಿದ್ಧವಾಗಿದ್ದೇವೆ ಎಂದರು.ಭಾಷಣದಲ್ಲಿ ಮಾತ್ರ ನಾವು ರೈತರ ದೇಶದ ಬೆನ್ನೆಲುಬು ಎಂದು ಹೇಳುತ್ತೇವೆ. ಆದರೆ ಅನ್ನ ನೀಡುವ ರೈತರನ್ನು ಮರೆತರೆ ಯಾರಿಗೂ ಉಳಿಗಾಲವಿಲ್ಲ. ಕಳೆದ 25 ವರ್ಷಗಳಿಂದ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ರೈತರ ಸಾಲ ಮನ್ನಾವಾಗಿಲ್ಲ. ಈ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಕುರಿತು ಮನವರಿಕೆ ಮಾಡಿಕೊಡಬೇಕು. ರೈತರ ಸಾಲ ಮನ್ನವಾದರೆ ರೈತರ ಆತ್ಮಹತ್ಯೆಗಳು ತಡೆ ಗಟ್ಟಿದಂತಾಗುತ್ತದೆ. ಆ ಮೂಲಕ ರೈತರ ಬಾಳಿಗೆ ಹೊಸ ಜೀವನ ನೀಡಿದಂತೆ ಆಗುತ್ತದೆ. ರೈತರು ತಮಗೆ ಮಾಡಿದ ಸಹಾಯವನ್ನು ಜೀವ ಇರುವವರೆಗೂ ಮರೆಯುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ರೈತರಿಗೆ ಸಹಾಯ ಮಾಡಬೇಕು ಎಂದು ಅವರು ಕೋರಿದರು.
ಈ ವೇಳೆ ವೇಳೆ ಮೈಮುಲ್ ಅಧ್ಯಕ್ಷ ಪಿ.ಎಂ. ಪ್ರಸನ್ನ. ಪುರಸಭಾ ಸದಸ್ಯ ಪಿ.ಸಿ. ಕೃಷ್ಣ, ರೈತ ಸಂಘದ ತಾಲೂಕು ಅಧ್ಯಕ್ಷ ಸುಂದರೇ ಗೌಡ, ತಾಲೂಕು ಅಧ್ಯಕ್ಷ ಅಣ್ಣಶೆಟ್ಟಿ, ಚಿಟ್ಟೆನಹಳ್ಳಿ ರವಿ, ಅಪೂರ್ವ ಮೋಹನ್, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕುಮಾರ್, ಜಯಣ್ಣ, ಸುರೇಶ್ ಮುಂತಾದವರು ಇದ್ದರು.