ಟಿಕೆಟ್ ಹಣ ಸಂಗ್ರಹವಾಗುತ್ತಿಲ್ಲ ಎಂಬ ನೆಪವೊಡ್ಡಿ ಅಧಿಕಾರಿಗಳು ರೈಲು ನಿಲುಗಡೆಯನ್ನು ರದ್ದುಗೊಳಿಸಿದ್ದಾರೆ. ಇದರಿಂದಾಗಿ ತಾಲೂಕು ಜನತೆಗೆ ಅನ್ಯಾಯವಾದಂತಾಗಿದೆ. ಕಳೆದ ಕೆಲ ದಿನಗಳ ಹಿಂದೆ ಲೋಕಸಭಾ ಸದಸ್ಯರಾದ ಶ್ರೇಯಸ್ ಪಟೇಲ್ರವರು ಕೇಂದ್ರ ರೈಲ್ವೆ ಮಂತ್ರಿಗಳನ್ನು ಭೇಟಿ ಮಾಡಿ ಕೆಲವು ಬೇಡಿಕೆಗಳನ್ನು ಇಟ್ಟಿದ್ದರು. ಇದರಲ್ಲಿ ಹೊಳೆನರಸೀಪುರ, ಹಾಸನ, ಬೀರೂರು ಮುಂತಾದ ತಾಲೂಕುಗಳ ರೈಲು ನಿಲುಗಡೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಕೋರಿದ್ದರೆ ವಿನಃ ಆಲೂರು ತಾಲೂಕಿನ ರೈಲ್ವೆ ಸಮಸ್ಯೆಯ ಬಗ್ಗೆ ಯಾವ ಬೇಡಿಕೆಗಳನ್ನು ಇಟ್ಟಿಲ್ಲ ಇವರಿಗೆ ಆಲೂರಿನ ಸಮಸ್ಯೆ ಬಗ್ಗೆ ಅರಿವಿದೆಯೋ ಇಲ್ಲವೋ ಗೊತ್ತಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಎಚ್ ವಿ ರಾಘವೇಂದ್ರ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಆಲೂರು
ತಾಲೂಕು ಆಲೂರಿನಲ್ಲಿರುವ ಹಂತನ ಮನೆ ರೈಲ್ವೆ ನಿಲ್ದಾಣದಲ್ಲಿ ತಾಲೂಕಿನ ಜನತೆಯ ಹೋರಾಟದ ಫಲವಾಗಿ ನಿಲುಗಡೆ ಆಗುತ್ತಿದ್ದ ಪ್ಯಾಸೆಂಜರ್ ರೈಲನ್ನು, ಸಮರ್ಪಕ ರೀತಿಯಲ್ಲಿ ಟಿಕೆಟ್ ಹಣ ಸಂಗ್ರಹವಾಗುತ್ತಿಲ್ಲ ಎಂಬ ನೆಪವೊಡ್ಡಿ ನಿಲುಗಡೆ ರದ್ದುಗೊಳಿಸಿರುವುದಕ್ಕೆ ಜನಪ್ರತಿನಿಧಿಗಳ ಬೇಜವಾಬ್ದಾರಿಯೇ ಕಾರಣ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಎಚ್ ವಿ ರಾಘವೇಂದ್ರ ಆರೋಪಿಸಿದ್ದಾರೆ.ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರ ಹಾಗೂ ಸಂಘಸಂಸ್ಥೆಯವರ ದಶಕಗಳ ಹೋರಾಟದ ಫಲವಾಗಿ ಈ ನಿಲ್ದಾಣದಲ್ಲಿ ನಿಲುಗಡೆಗೆ ಆದೇಶಿಸಲಾಗಿತ್ತು. ಆದರೆ ಈ ನಿಲ್ದಾಣದಲ್ಲಿ ಸಮರ್ಪಕ ರೀತಿಯಲ್ಲಿ ಟಿಕೆಟ್ ಹಣ ಸಂಗ್ರಹವಾಗುತ್ತಿಲ್ಲ ಎಂಬ ನೆಪವೊಡ್ಡಿ ಅಧಿಕಾರಿಗಳು ರೈಲು ನಿಲುಗಡೆಯನ್ನು ರದ್ದುಗೊಳಿಸಿದ್ದಾರೆ. ಇದರಿಂದಾಗಿ ತಾಲೂಕು ಜನತೆಗೆ ಅನ್ಯಾಯವಾದಂತಾಗಿದೆ. ಕಳೆದ ಕೆಲ ದಿನಗಳ ಹಿಂದೆ ಲೋಕಸಭಾ ಸದಸ್ಯರಾದ ಶ್ರೇಯಸ್ ಪಟೇಲ್ರವರು ಕೇಂದ್ರ ರೈಲ್ವೆ ಮಂತ್ರಿಗಳನ್ನು ಭೇಟಿ ಮಾಡಿ ಕೆಲವು ಬೇಡಿಕೆಗಳನ್ನು ಇಟ್ಟಿದ್ದರು. ಇದರಲ್ಲಿ ಹೊಳೆನರಸೀಪುರ, ಹಾಸನ, ಬೀರೂರು ಮುಂತಾದ ತಾಲೂಕುಗಳ ರೈಲು ನಿಲುಗಡೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಕೋರಿದ್ದರೆ ವಿನಃ ಆಲೂರು ತಾಲೂಕಿನ ರೈಲ್ವೆ ಸಮಸ್ಯೆಯ ಬಗ್ಗೆ ಯಾವ ಬೇಡಿಕೆಗಳನ್ನು ಇಟ್ಟಿಲ್ಲ ಇವರಿಗೆ ಆಲೂರಿನ ಸಮಸ್ಯೆ ಬಗ್ಗೆ ಅರಿವಿದೆಯೋ ಇಲ್ಲವೋ ಗೊತ್ತಿಲ್ಲ.
ಕಳೆದ ಕೆಲ ತಿಂಗಳ ಹಿಂದೆ ತಾಲೂಕಿಗೆ ಆಗಮಿಸಿದ್ದ ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಸಾರ್ವಜನಿಕರು, ರೈಲು ನಿಲುಗಡೆಗೆ ಕೇಂದ್ರ ರೈಲ್ವೆ ಸಚಿವರ ಗಮನಕ್ಕೆ ತಂದು ನಿಲುಗಡೆ ಕೊಡಿಸಿ ಕೊಡುವಂತೆ ಕೋರಿದ್ದರು. ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇನ್ನೂ ನಮ್ಮ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ಅವರು ಇಲ್ಲಿನ ರೈಲು ನಿಲಗಡೆಯ ಸಂಬಂಧವಾಗಿ ಹೆಚ್ಚಿನ ಮುತುವರ್ಜಿ ವಹಿಸಿದಂತೆ ಕಾಣುತ್ತಿಲ್ಲ. ಕಾರವಾರ ಎಕ್ಸ್ಪ್ರೆಸ್ ಪ್ಯಾಸೆಂಜರ್ ರೈಲನ್ನು ಪಟ್ಟಣದ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಆದೇಶ ನೀಡಿದ ಸಂದರ್ಭದಲ್ಲಿ ಒಂದೆರಡು ತಿಂಗಳ ಟಿಕೆಟ್ ಹಣ ಸಂಗ್ರಹದ ಬಗ್ಗೆ ಮಾಹಿತಿ ನೀಡುವುದಾದರೆ ಅಕ್ಟೋಬರ್ ನಲ್ಲಿ 9800 ನವೆಂಬರ್ನಲ್ಲಿ 11200 ಸಂಗ್ರಹವಾಗಿರುತ್ತದೆ. ಮಾವಿನಕೆರೆ ರೈಲು ನಿಲ್ದಾಣದಲ್ಲಿ 8 ರೈಲುಗಳು ನಿಲುಗಡೆ ಇದ್ದು ಅಲ್ಲಿ ಏಪ್ರಿಲ್ ತಿಂಗಳಲ್ಲಿ 33065 ರುಪಾಯಿ ಕಲಕ್ಷನ್ ಆಗಿರುತ್ತದೆ. ಬಾಗೇಶ್ಪುರ ರೈಲ್ವೆ ನಿಲ್ದಾಣದಲ್ಲಿ 6 ರೈಲುಗಳು ನಿಲುಗಡೆಯಾಗುತ್ತಿದ್ದು ಅಲ್ಲಿ ಮೇ ತಿಂಗಳಲ್ಲಿ 200880 ರುಪಾಯಿ ಸಂಗ್ರವಾಗಿರುತ್ತದೆ. ಈ ರೀತಿ ಸಂಗ್ರಹದ ಹಣದ ಲೆಕ್ಕದಲ್ಲಿ ನಿಲುಗಡೆ ನೀಡುವುದಾದರೆ ನಮ್ಮಲ್ಲಿ ಹೆಚ್ಚು ಸಂಗ್ರವಾಗಿದೆ ಇತ್ತೀಚಿಗಷ್ಟೇ ಇಲ್ಲಿ ರೈಲು ನಿಲುಗಡೆಗೆ ಆದೇಶಿಸಿದ್ದರಿಂದ ಕೆಲವು ತಿಂಗಳಲ್ಲಿ ಕಮ್ಮಿ ಕೆಲವು ತಿಂಗಳಲ್ಲಿ ಹೆಚ್ಚು ಸಂಗ್ರವಾಗಿರಬಹುದು ಇಲ್ಲಿ ಹಂತ ಹಂತವಾಗಿ ಸಂಗ್ರಹ ಹೆಚ್ಚಾಗುವ ಸಾಧ್ಯತೆ ಇತ್ತು ಆದರೆ ಕೆಲವೇ ತಿಂಗಳಗಳ ಲೆಕ್ಕಾಚಾರ ನಡೆಸಿ ಇಲ್ಲಿ ರೈಲು ನಿಲುಗಡೆ ಸ್ಥಗಿತಗೊಳಿಸಿರುವುದು ಈ ಭಾಗದ ಜನತೆಗೆ ಮಾಡಿದ ದ್ರೋಹವಾಗಿದೆ.ಹೊಸದಾಗಿ ನಿರ್ಮಾಣ ಹಂತದಲ್ಲಿರುವ ಚಿಕ್ಕಮಂಗಳೂರು ಆಲೂರು, ಮಂಗಳೂರು ಸಂಪರ್ಕ ರೈಲ್ವೆ ಕಾಮಗಾರಿಗೆ ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು ಇದರಲ್ಲೂ ಸಹ ಒಂದು ಗ್ರಾಮದ ಜನರ ಭೂಮಿಗೆ ಒಂದು ರೀತಿ ಇನ್ನೊಂದು ಗ್ರಾಮದ ಜನರಿಗೆ ಮತ್ತೊಂದು ಪ್ರೀತಿ ಭೂಮಿಗೆ ಬೆಲೆ ನಿಗದಿಗೊಳಿಸಿ ಅನ್ಯಾಯ ಮಾಡಲಾಗುತ್ತಿದೆ. ಆದುದರಿಂದ ಭೂಮಿ ನೀಡುವ ರೈತರಿಗೆ ವೈಜ್ಞಾನಿಕ ಮಾದರಿಯಲ್ಲಿ ಹಣ ನಿಗದಿಗೊಳಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ. ಆದುದರಿಂದ ಈ ಸಂಬಂಧವಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಗಮನ ಹರಿಸಿ ರೈಲು ನಿಲುಗಡೆಗೆ ಕ್ರಮ ಕೈಗೊಳ್ಳುವ ದರ ಜೊತೆಗೆ ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಸೂಕ್ತ ಬೆಲೆ ನಿಗದಿಗೊಳಿಸಿ ಅವರಿಗೆ ನ್ಯಾಯ ದೊರಕಿಸಿಕೊಡದೆ ಹೋದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.