ಸಾರಾಂಶ
ಟವರ್ ನಿರ್ಮಾಣಕ್ಕೆ ಸ್ಥಳೀಯರ ವಿರೋಧವಿದ್ದರೂ ಯಾವುದೇ ಪರವಾನಗೆ ಅಥವಾ ದಾಖಲೆ ಇಲ್ಲದೆ, ಟವರ್ ನಿರ್ಮಾಣಕ್ಕೆ ಮುಂದಾಗುತ್ತಿರುವುದಕ್ಕೆ ಸ್ಥಳೀಯರು ಆಕ್ಷೇಪಿಸಿದರು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಉಡುಪಿ ಜಿಲ್ಲೆಯ ಎಲ್ಲೂರುನಿಂದ ಕೇರಳದ ಕಾಸರಗೋಡಿಗೆ 440 ಕಿಲೋ ವ್ಯಾಟ್ ವಿದ್ಯುತ್ ಸರಬರಾಜು ಮಾಡಲು ಟವರ್ ನಿರ್ಮಾಣಕ್ಕೆ ಕಳೆದ ಹಲವು ತಿಂಗಳಿನಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಬುಧವಾರ ಕಿನ್ನಿಗೋಳಿ ಸಮೀಪದ ಏಳಿಂಜೆ ಕಂಗುರಿ ಪ್ರದೇಶಕ್ಕೆ ಬಂದ ಅಧಿಕಾರಿಗಳನ್ನು ಸ್ಥಳೀಯರು ವಾಪಸ್ ಕಳಿಸಿದ್ದಾರೆ. ಕಂಗುರಿ ಪ್ರದೇಶದಲ್ಲಿ ಟವರ್ ನಿರ್ಮಾಣಕ್ಕೆಮಂಗಳವಾರ ಮತ್ತು ಬುಧವಾರ ಗುಡ್ಡದಲ್ಲಿ ಮರಗಳನ್ನು ಕಡಿಯಲಾಗುತ್ತಿತ್ತು. ಬುಧವಾರ ಸ್ಥಳೀಯರಿಗೆ ಈ ವಿಷಯ ತಿಳಿದಿದ್ದು, ಕೂಡಲೇ ಐಕಳ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದರು.ಈ ಸಂದರ್ಭ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ, ಟವರ್ ನಿರ್ಮಾಣಕ್ಕೆ ಸ್ಥಳೀಯರ ವಿರೋಧವಿದ್ದರೂ ಯಾವುದೇ ಪರವಾನಗೆ ಅಥವಾ ದಾಖಲೆ ಇಲ್ಲದೆ, ಟವರ್ ನಿರ್ಮಾಣಕ್ಕೆ ಮುಂದಾಗುತ್ತಿರುವುದಕ್ಕೆ ಸ್ಥಳೀಯರು ಆಕ್ಷೇಪಿಸಿದರು. ವಿದ್ಯುತ್ ಟವರ್ ಮತ್ತು ವಯರ್ ಖಾಸಗಿ ಜಮೀನಿನ ಮೇಲ್ಭಾಗದಲ್ಲಿ ಹಾದುಹೋಗುತ್ತದೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದರೂ ಟವರ್ ನಿರ್ಮಾಣಕ್ಕೆ ಮುಂದಾಗುತಿದ್ದಾರೆ ಎಂದು ಸ್ಥಳೀಯರು ಆರೋಪಿಸಿ ಟವರ್ ನಿರ್ಮಾಣ ಕಾರ್ಯವನ್ನು ತಡೆದು ಅಧಿಕಾರಿಗಳನ್ನು ವಾಪಸ್ ಕಳುಹಿಸಿದರು. ಈ ರೀತಿ ಮುಂದುವರಿದಲ್ಲಿ ಮುಂದಿನ ದಿನದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.