ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ ಲೋಕಸಭಾ ಚುನಾವಣೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಮಾಹಿತಿ ನೀಡಿದರು.
ಮಾದರಿ ನೀತಿ ಸಂಹಿತೆ ಜಾರಿ ಸಂಬಂಧಿಸಿದ ಅಧಿಕಾರಿಗಳು ಚುನಾವಣಾ ಆಯೋಗ ನಿಗದಿಪಡಿದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಹೇಳಿದರು.ಮಾದರಿ ನೀತಿ ಸಂಹಿತೆ ಜಾರಿ ಅವಧಿಯಿಂದ ಫಲಿತಾಂಶ ಪ್ರಕಟಿಸುವವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರಲಿದ್ದು, ಅದರಂತೆ ಸಂಬಂಧಪಟ್ಟ ನೋಡಲ್ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದರು.
ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ, ಈ ಬಗ್ಗೆ ವರದಿ ನೀಡಬೇಕು. ಸಾಕ್ಷ್ಯಗಳನ್ನು ಸಂಗ್ರಹಿಸಬೇಕು ಎಂದರು. ಮಾದರಿ ನೀತಿ ಸಂಹಿತೆ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತರಬೇತಿ ನೀಡಬೇಕು ಎಂದರು.ಸ್ವೀಪ್ ನೋಡಲ್ ಅಧಿಕಾರಿಗಳು ಸ್ವೀಪ್ ಯೋಜನೆ ಸಿದ್ಧಪಡಿಸಬೇಕು. ಮತದಾರರ ಜಾಗೃತಿ ಸಂಬಂಧಿಸಿದಂತೆ ಸೃಜನಾತ್ಮಕ ಚಟುವಟಿಕೆ ಹಮ್ಮಿಕೊಳ್ಳಬೇಕು. ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ಜೊತೆ ಮತದಾನ ಹೆಚ್ಚಳ ಸಂಬಂಧ ಅಗತ್ಯ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.
ಮತದಾನ ಹೆಚ್ಚಳಕ್ಕೆ ಶ್ರಮಿಸಬೇಕು. ನೈತಿಕ ಮತ್ತು ಜಾಗೃತ ಮತದಾನಕ್ಕೆ ಪ್ರೇರಣೆ ನೀಡಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಲಹೆ ಮಾಡಿದರು. ನೋಂದಣಿ ಅಭಿಯಾನಕ್ಕೆ ಸೂಚನೆ: ಮತದಾರರ ನೋಂದಣಿ, ತಿದ್ದುಪಡಿ, ವರ್ಗಾವಣೆ ಮತ್ತಿತರ ಸಂಬಂಧ ಗಮನಹರಿಸುವುದು. ವಿಶೇಷ ಮತದಾರರ ನೋಂದಣಿ ಅಭಿಯಾನ ಹಮ್ಮಿಕೊಳ್ಳುವಂತೆ ಸೂಚಿಸಿದರು.ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನೋಡಲ್ ಅಧಿಕಾರಿಗಳು ಗಮನಹರಿಸುವುದು, ಮುಕ್ತ, ಶಾಂತಿಯುತ ಪಾರದರ್ಶಕ ಚುನಾವಣೆ ನಡೆಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಹೇಳಿದರು.
ಚುನಾವಣೆ ಸಂದರ್ಭದಲ್ಲಿ ಚುನಾವಣೆಗೆ ಬೇಕಾದ ಬಸ್, ಜೀಪು ಸೇರಿದಂತೆ ಅಗತ್ಯ ವಾಹನಗಳನ್ನು ನಿಯೋಜಿಸುವಂತೆ ಸೂಚಿಸಿದರು. ಮತಗಟ್ಟೆ ಅಧಿಕಾರಿಗಳು, ಮೈಕ್ರೋ ಅಬ್ಸರ್ವರ್, ಮಾರ್ಗ ಅಧಿಕಾರಿಗಳು, ಇತರೆ ಎಲ್ಲಾ ಚುನಾವಣಾ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಗೆ ತರಬೇತಿ ನೀಡುವಂತೆ ಮಾಸ್ಟರ್ ಟ್ರೈನರ್ ಅವರಿಗೆ ಸೂಚಿಸಿದರು.ಚುನಾವಣಾ ವೆಚ್ಚ ನಿರ್ವಹಿಸುವ ನೋಡಲ್ ಅಧಿಕಾರಿಗಳಿಗೆ ವೆಚ್ಚ ಸಂಬಂಧಿಸಿದಂತೆ ಎಲ್ಲಾ ವಿಭಾಗದಿಂದ ಕಾಲ ಕಾಲಕ್ಕೆ ಮಾಹಿತಿ ಒದಗಿಸುವಂತೆ ಸೂಚಿಸಿದರು.
ಚುನಾವಣಾ ವೀಕ್ಷಕರು ಮತ್ತು ಶಿಷ್ಟಾಚಾರ ನೋಡಲ್ ಅಧಿಕಾರಿಗಳು ಪ್ರತಿಯೊಂದು ವಿಧಾನಸಭಾ ಮತ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಬ್ಬ ಸಾಮಾನ್ಯ ವೀಕ್ಷಕರು, ವೆಚ್ಚ ನಿರ್ವಹಣಾ ವೀಕ್ಷಕರು ಇತರ ವೀಕ್ಷಕರು ಆಗಮಿಸಲಿದ್ದು, ಚುನಾವಣೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು. ಮತಪತ್ರ ನೋಡಲ್ ಅಧಿಕಾರಿ ಅವರು ಮತಪತ್ರಗಳ ಮುದ್ರಣ ಮತ್ತು ನಿರ್ವಹಣೆ, ಭದ್ರತೆ, ಸಾಗಾಟ, ದಾಸ್ತಾನು, ಸುರಕ್ಷತೆ ಮತ್ತಿತರ ಕಾರ್ಯಗಳ ಬಗ್ಗೆ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವಂತೆ ನಿರ್ದೇಶನ ನೀಡಿದರು.ಬ್ಯಾಲೆಟ್ ಪೇಪರ್ ನೋಡಲ್ ಅಧಿಕಾರಿಗಳ ಕರ್ತವ್ಯ, ಕಿರು ಸಂದೇಶ ನಿಗಾವಹಿಸುವುದು ಮತ್ತು ಸಂಪರ್ಕ, ಮಾಹಿತಿ ಮತ್ತು ಸಂವಹನ ನೋಡಲ್ ಅಧಿಕಾರಿಗಳ ಕರ್ತವ್ಯಗಳು, ಸಹಾಯವಾಣಿ ಮತ್ತು ದೂರವಾಣಿ ನಿರ್ವಹಣೆ, ಮತಯಂತ್ರಗಳ ನೋಡಲ್ ಅಧಿಕಾರಿ, ವಿವಿಎಂ, ಅಬಕಾರಿ ಮತ್ತಿತರ ನೋಡಲ್ ಅಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು.
ನೋಡಲ್ ಅಧಿಕಾರಿಗಳ ಜವಾಬ್ದಾರಿ:ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಲೋಕಸಭಾ ಚುನಾವಣೆ ಸಂಬಂಧ ವಿವಿಧ ನೋಡಲ್ ಅಧಿಕಾರಿಗಳ ಜವಾಬ್ದಾರಿ ಬಗ್ಗೆ ವಿವರಿಸಿದರು.
ವಿವಿಧ ವಿಭಾಗದ ನೋಡಲ್ ಅಧಿಕಾರಿಗಳಾದ ಪಿ.ಶ್ರೀನಿವಾಸ್, ಸೋಮಸುಂದರ, ಸಿದ್ದೇಶ್, ನಾಗರಾಜ ಆಚಾರ್ಯ, ಸೌಮ್ಯ, ಬಿ.ಬಸಪ್ಪ, ಪ್ರಭು, ಮಾಸ್ಟರ್ ಟ್ರೆöÊನರ್ ಕೆ.ಸಿ.ದಯಾನಂದ, ಪ್ರಾಂಶುಪಾಲರಾದ ವಿಜಯ್, ಅಜೀತ್, ತಹಸೀಲ್ದಾರ್ ಕಿರಣ್ ಗೌರಯ್ಯ, ರಾಮಚಂದ್ರ, ನವೀನ್ ಕುಮಾರ್, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವಿಭಾಗದ ಸಹಾಯಕ ನಿರ್ದೇಶಕರಾದ ಮಮತ, ಜಿ.ಪಂ.ಸಹಾಯಕ ಕಾರ್ಯದರ್ಶಿ ಜೀವನ್ ಕುಮಾರ್, ಪೊಲೀಸ್ ಇನ್ಸ್ಪೆಕ್ಟರ್, ಲೆಕ್ಕ ವಿಭಾಗದ ನೋಡಲ್ ಅಧಿಕಾರಿ ಝೀವಲ್ ಖಾನ್ ಇತರರು ಇದ್ದರು.