ಸಾರಾಂಶ
ಜಿಲ್ಲೆಯ ಸಣ್ಣೂರ ಗ್ರಾಪಂ ಪಿಡಿಓ ರಾಮಚಂದ್ರಪ್ಪ, ಕಲಬುರಗಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಇಇ ಮಲ್ಲಿಕಾರ್ಜುನ ಅಲ್ಲಿಪೂರ ಇವರ ಮನೆಗಳ ಮೇಲೆ ಮಂಗಳವಾರ ಲೋಕಾಯುಕ್ತ ಅದಿಕಾರಿಗಳು ದಾಳಿ ನಡೆಸಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಜಿಲ್ಲೆಯ ಸಣ್ಣೂರ ಗ್ರಾಪಂ ಪಿಡಿಓ ರಾಮಚಂದ್ರಪ್ಪ, ಕಲಬುರಗಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಇಇ ಮಲ್ಲಿಕಾರ್ಜುನ ಅಲ್ಲಿಪೂರ ಇವರ ಮನೆಗಳ ಮೇಲೆ ಮಂಗಳವಾರ ಲೋಕಾಯುಕ್ತ ಅದಿಕಾರಿಗಳು ದಾಳಿ ನಡೆಸಿದ್ದಾರೆ.ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನಲೆಯಲ್ಲಿ ಕಲಬುರಗಿ ಲೋಕಾಯುಕ್ತ ಪೊಲೀಸ್ ರಿಂದ ದಾಳಿ ನಡೆದಿದೆ.
ಸಣ್ಣೂರ ಗ್ರಾಮ ಪಂಚಾಯತ್ ಪಿಡಿಓ ರಾಮಚಂದ್ರಪ್ಪ ಇವರಿಗೆ ಸೇರಿರುವ ಕಲಬುರಗಿ ನಗರದ ಮಾನಸ ಲೇಔಟ್ ನಲ್ಲಿರುವ ಮನೆಯ ಮೇಲೆ ಹಾಗೂ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಮನೆಯ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ.ಸಣ್ಣೂರ ಗ್ರಾಮ ಪಂಚಾಯತ್ ಕಚೇರಿ ಮೇಲೂ ದಾಳಿ ಮಾಡಿರುವ ಲೋಕಾಯುಕ್ತರು ದಾಖಲೆ ಪರಿಶೀಲನೆ ನಡೆಸಿದ್ದಾರೆ.
ಆರ್ಡಿಪಿಆರ್ ಇಇ ಅಲ್ಲಿಪೂರ ಮನೆ ಮೇಲೂ ದಾಳಿಸಣ್ಣೂರ ಪಿಡಿಓ ಜೊತೆಗೆ ಕಲಬುರಗಿಯ ಆರ್ಡಿಪಿಆರ್ ಇಲಾಖೆಯ ಇಇ ಮನೆ ಮೇಲೂ ಲೋಕಾ ದಾಳಿಯಾಗಿದೆ.
ಕಲಬುರಗಿ ಆರ್ಡಿಪಿಆರ್ ಇಲಾಖೆಯ ಇಇ ಮಲ್ಲಿಕಾರ್ಜುನ ಅಲಿಪುರ್ ಅವರ ಬೆಂಗಳೂರಿನ ಮನೆ ಹಾಗೂ ಕಲಬುರಗಿ ಮನೆ , ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಇನ್ನು ಕೇವಲ ನಾಲ್ಕು ದಿನಗಳಲ್ಲಿ ಇಇ ಮಲ್ಲಿಕಾರ್ಜುನ ಅಲ್ಲಿಪೂರ ಅವರು ಸೇವೆಯಿಂದ ನಿವೃತಿಯಾಗಲಿದ್ದರು.ಈ ಹಂತದಲ್ಲಿಯೇ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ತಂಡ ಅಲ್ಲಿಪೂರ ಮನೆ, ಕಚೇರಿ ಮೇಲೆ ದಾಳಿ ಮಾಡಿದೆ.
ಲೋಕಾಯುಕ್ತ ಎಸ್.ಪಿ. ಬಿಕೆ. ಉಮೇಶ್ ನೇತೃತ್ವದದಲ್ಲಿ ನಡೆದ ದಾಳಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇಇ ಮಲ್ಲಿಕಾರ್ಜುನ್ ಅಲಿಪುರ ಬೆಂಗಳೂರು ಮನೆ, ಕಲಬುರಗಿಯ ಮದರ್ ತೆರೇಸಾ ಸ್ಕೂಲ್ ಹತ್ತಿರದ ಜೇವರ್ಗಿ ಕ್ರಾಸ್. ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಲಾಗಿದೆ.ಎಸ್ ಪಿ. ಉಮೇಶ್ ಮತ್ತು ಡಿವೈಎಸ್ಪಿ ಗೀತಾ ಬಿನಾಳ, ಹನುಮಂತ್ ರಾಯ, ಶೀಲವಂತ, ಇನ್ಸ್ಪೆಕ್ಟರ್ ರಾಜಶೇಖರ್, ಸಂತೋಷ್, ಅರುಣ್ ಕುಮಾರ್ ಹಾಗೂ ಪೋಲಿಸ್ ಸಿಬ್ಬಂದಿ ಈ ದಾಳಿಯಲ್ಲಿದ್ದರು.
ಅಧಿಕಾರಿಗಳ ಮನೆಯಲ್ಲಿ ಚಿನ್ನಾಭರಣ, ಬೆಳ್ಳಿ ಸಾಮಾನುಗಳು, ಹಲವು ದಾಖಲೆಗಳು ಸೇರಿದಂತೆ ಆದಾಯ ಗಳಿಕೆಗೆ ಸಂಬಂಧಪಟ್ಟಂತಹ ದಾಖಲೆಗಳು ಪತ್ತೆಯಾಗಿವೆ ಎಂದು ಲೋಕಾಯುಕ್ತ ಮೂಲಗಳು ಹೇಳಿವೆ.