ಸಾರಾಂಶ
ಕೆರೆಗಳ ಒತ್ತುವರಿಯನ್ನು ಸಮೀಕ್ಷೆ ನಡೆಸಿ ಶೀಘ್ರದಲ್ಲಿಯೇ ವರದಿ ಸಲ್ಲಿಸಬೇಕು ಮತ್ತು ಕೆರೆಗಳ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೆರೆಗಳ ಒತ್ತುವರಿಯನ್ನು ಸಮೀಕ್ಷೆ ನಡೆಸಿ ಶೀಘ್ರದಲ್ಲಿಯೇ ವರದಿ ಸಲ್ಲಿಸಬೇಕು ಮತ್ತು ಕೆರೆಗಳ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.ಮಂಗಳವಾರ ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಮತ್ತು ನ್ಯಾ.ಬಿ.ವೀರಪ್ಪ ಅವರೊಂದಿಗೆ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಮಹದೇವಪುರ ವ್ಯಾಪ್ತಿಯ ವಿಭೂತಿಪುರ ಕೆರೆ ಮತ್ತು ದೊಡ್ಡನೆಕ್ಕುಂದಿ ಕೆರೆಗಳನ್ನು ಪರಿಶೀಲನೆ ನಡೆಸಿದರು.
ಈ ವೇಳೆ ವಿಭೂತಿಪುರ ಕೆರೆಯಲ್ಲಿ ನೀರು ಸಂಗ್ರಹವಾಗದಿರುವ ಕುರಿತು ಗಮನಿಸಿದರು. ಕೆರೆಗೆ ನೀರು ಹರಿದು ಬರುವ ರಾಜಕಾಲುವೆ ಮತ್ತು ನೀರು ಪ್ರವೇಶಿಸುವ ದ್ವಾರದಲ್ಲಿ ಒತ್ತುವರಿಯಾಗಿರುವುದರಿಂದ ಕೆರೆಗೆ ನೀರು ಹರಿದು ಬರುತ್ತಿಲ್ಲ ಎಂಬುದನ್ನು ಮನಗಂಡರು. ಈ ವೇಳೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕೆರೆಯ ಸಮೀಕ್ಷೆ ಕಾರ್ಯ ನಡೆಸಿ ಒತ್ತುವರಿಗಳನ್ನು ಗುರುತಿಸಿ 20 ದಿನದಲ್ಲಿ ವರದಿಯನ್ನು ಸಲ್ಲಿಕೆ ಮಾಡಬೇಕು ಮತ್ತು ಕೆರೆಯ ನೀರಿನ ಗುಣಮಟ್ಟವನ್ನು ಪರೀಕ್ಷಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು. ಅಲ್ಲದೇ, ಬಿಬಿಎಂಪಿಯವರು ಒಂದು ತಿಂಗಳಲ್ಲಿ ಒತ್ತುವರಿಗಳನ್ನು ತೆರವುಗೊಳಿಸುವಂತೆ ತಿಳಿಸಿದರು.ಬಳಿಕ ದೊಡ್ಡನೆಕ್ಕುಂದಿ ಕೆರೆಗೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ 2.6 ಎಕರೆ ಪ್ರದೇಶವು ಒತ್ತುವರಿಯಾಗಿರುವುದು ಮಾಹಿತಿ ಪಡೆದುಕೊಂಡರು. ಈ ಸಂಬಂಧ ವರದಿಯನ್ನು ಸಲ್ಲಿಕೆ ಮಾಡುವಂತೆ ಹೇಳಿದರು. ಕೆರೆಯ ಅಭಿವೃದ್ಧಿಗೆ 14 ಕೋಟಿ ರು. ಬಿಡುಗಡೆಯಾಗಿರುವ ವಿಷಯ ತಿಳಿದ ಲೋಕಾಯುಕ್ತರು, ಬಿಡುಗಡೆಯಾಗಿರುವ ಹಣದಲ್ಲಿ ಯಾವ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ ಮತ್ತು ಯಾವ ಅಭಿವೃದ್ಧಿಗೆ ಎಷ್ಟು ಹಣ ವಿನಿಯೋಗವಾಗಿದೆ ಎಂಬುದರ ಕುರಿತ ವಿಸ್ತೃತವಾದ ವಿವರಗಳನ್ನು ಒದಗಿಸುವಂತೆ ಸೂಚಿಸಿದರು.