ಸಾರಾಂಶ
ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ಶನಿವಾರ ಬೆಳಂ ಬೆಳಗ್ಗೆ ಮೂವರು ಅಧಿಕಾರಿಗಳಿಗೆ ಸೇರಿದ 5 ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ಶನಿವಾರ ಬೆಳಂ ಬೆಳಗ್ಗೆ ಮೂವರು ಅಧಿಕಾರಿಗಳಿಗೆ ಸೇರಿದ 5 ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.ಬೆಳಗಾವಿ ಲೋಕಾಯುಕ್ತ ಎಸ್ಪಿ ಹನಮಂತರಾಯ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿರುವ ದೇವರಾಜ್ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸಿದ್ಧಲಿಂಗಪ್ಪ ಬಾನಸಿ ಅವರ ಬೆಳಗಾವಿಯ ವಿದ್ಯಾನಗರದಲ್ಲಿರುವ ಮನೆ ಮತ್ತು ರಾಯಬಾಗ ತಾಲೂಕಿನ ಬೆಕ್ಕೇರಿ ಗ್ರಾಮದಲ್ಲಿರುವ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ₹1.02 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿರುವುದು ಪತ್ತೆಯಾಗಿದೆ. ₹37.66 ಲಕ್ಷ ಮೌಲ್ಯದ ನಾಲ್ಕು ನಿವೇಶಗಳು, ₹65 ಲಕ್ಷ ಮೌಲ್ಯದ ಮನೆಯನ್ನು ಹೊಂದಿದ್ದಾರೆ. ₹45.42 ಲಕ್ಷ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಲೋಕಾಯುಕ್ತ ದಾಳಿ ವೇಳೆ ಮನೆಯಲ್ಲಿ ₹18,260 ನಗದು ಹಣ ಜಪ್ತಿ ಮಾಡಲಾಗಿದೆ. ₹34.64 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹10.60 ಲಕ್ಷ ಮೌಲ್ಯದ ವಾಹನ ಹೊಂದಿದ್ದಾರೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.ಮುಖ್ಯ ಇಂಜಿನೀಯರ್ ಎಚ್.ಸಿ.ಸುರೇಶ, ಗಂಗಾಧರಗೆ ಮನೆ ಮೇಲೂ ದಾಳಿ:
ಧಾರವಾಡದ ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್ ಎಚ್.ಸಿ.ಸುರೇಶ ಅವರ ಬೆಳಗಾವಿಯ ಹನುಮಾನ್ ನಗರದಲ್ಲಿರುವ ಮನೆ ಮೇಲೆ ದಾಳಿ ನಡೆಸಲಾಗಿದ್ದು, ಒಟ್ಟು ₹3.62 ಕೋಟಿಗೂ ಅಧಿಕ ಆಸ್ತಿ ಪತ್ತೆಯಾಗಿದೆ. ₹1.90 ಕೋಟಿ ಮೌಲ್ಯದ ಮನೆ ಹಾಗೂ ಫಾರ್ಮ್ಹೌಸ್, ₹13.44 ಲಕ್ಷ ಮೌಲ್ಯದ ಎರಡು ನಿವೇಶನ, ₹55.50 ಲಕ್ಷ ಮೌಲ್ಯದ ನಾಲ್ಕು ವಾಣಿಜ್ಯ ಮಳಿಗೆ, ₹35.36 ಲಕ್ಷ 11 ಎಕರೆ ಕೃಷಿ ಜಮೀನು, ₹76.60 ಸಾವಿರ ನಗದು, ಬ್ಯಾಂಕಿನಲ್ಲಿಟ್ಟ ₹1.65 ಕೋಟಿಯ ಎಫ್.ಡಿ, ₹21.58 ಲಕ್ಷ ಮೌಲ್ಯದ ಚಿನ್ನಾಭರಣಗಳು, ₹2.40 ಲಕ್ಷ ಬೆಲೆಬಾಳುವ ಬೆಳ್ಳಿ ಸಾಮಗ್ರಿಗಳು, ₹26 ಲಕ್ಷ ಬೆಲೆ ಬಾಳುವ 3 ಕಾರುಗಳು, ₹25 ಲಕ್ಷಕ್ಕೂ ಅಧಿಕ ಬೆಲೆಬಾಳುವ ಪೀಠೋಪಕರಣಗಳು ಪತ್ತೆಯಾಗಿವೆ. ಗದಗ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗಂಗಾಧರ ಶಿರೋಳ ಅವರಿಗೆ ಸೇರಿದ ಬೆಳಗಾವಿಯ ಮನೆ, ಮಳಿಗೆ ಹಾಗೂ ವಿವಿಧ ಸಂಬಂಧಿಗಳ ಮನೆ ಮೇಲೆ ದಾಳಿಮಾಡಲಾಗಿದೆ. ಒಟ್ಟು ₹3.50 ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಲಾಗಿದೆ. ₹2.30 ಕೋಟಿ ಮೌಲ್ಯದ ಎರಡು ಬಂಗಲೆ, ₹25.50 ಲಕ್ಷ ಮೌಲ್ಯದ ನಾಲ್ಕು ನಿವೇಶನಗಳು, ₹13 ಲಕ್ಷ ಬೆಲೆ ಬಾಳುವ 3 ಎಕರೆ ಜಮೀನು, ₹21.50 ಲಕ್ಷ ನಗದು, ₹23.83 ಲಕ್ಷ ಮೌಲ್ಯದ ಚಿನ್ನಾಭರಣ, ₹3.70 ಲಕ್ಷ ಮೌಲ್ಯದ ಬೆಳ್ಳಿ ಸಲಕರಣೆ, ₹12.30 ಲಕ್ಷ ಬೆಲೆ ಬಾಳುವ ಕಾರು, ₹5 ಲಕ್ಷದ ಪೀಠೋಪಕರಣಗಳು ಪತ್ತೆಯಾಗಿವೆ.