ಸಾರಾಂಶ
ವಿಜಯಪುರ: ಸ್ವಾತಂತ್ರ್ಯ ಹೋರಾಟಗಾರರು, ನಾಡಿನ ಜನಪ್ರಿಯ ಸಾಹಿತಿಗಳ ಜೀವನ ಚರಿತ್ರೆ, ಸಾಧನೆಗಳನ್ನು ಪ್ರಚುರಪಡಿಸುವುದೇ ನಮ್ಮ ಉದ್ದೇಶ ಎಂದು ಅಖಿಲ ಕರ್ನಾಟಕ ಮಿತ್ರ ಸಂಘದ ಅಧ್ಯಕ್ಷ ಚಿ.ಮಾ.ಸುಧಾಕರ್ ಹೇಳಿದರು.
ಪುರಸಭಾ ಸದಸ್ಯೆ ಕವಿತಾ ಮುನಿ ಆಂಜನಪ್ಪ ಸ್ವಗೃಹದಲ್ಲಿ ಅಖಿಲ ಕರ್ನಾಟಕ ಮಿತ್ರ ಸಂಘ ಹಮ್ಮಿಕೊಂಡಿದ್ದ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಮತ್ತು ಡಾ.ಶಿವರಾಮ ಕಾರಂತರ ಜನ್ಮ ಶತಾಬ್ದಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಹಡಪದ್ ಮಾತನಾಡಿ, ಜೆಪಿ ಎಂದೆ ಕರೆಯಲ್ಪಡುವ ಜಯಪ್ರಕಾಶ್ ನಾರಾಯಣ್ ಅಪ್ಪಟ ಭಾರತೀಯ ರಾಜಕಾರಣಿ. ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಹಾಗು ೧೯೬೫ರಲ್ಲಿ ಸಾರ್ವಜನಿಕ ಸೇವೆಗಾಗಿ ರಾಮನ್ ಮ್ಯಾಗಸ್ಸೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು ಎಂದರು.
ನಿವೃತ್ತ ಶಿಕ್ಷಕ ಚಂದ್ರಶೇಖರ್ ಮಾತನಾಡಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ, ಕಡಲ ತೀರದ ಭಾರ್ಗವ, ನಡೆದಾಡುವ ವಿಶ್ವಕೋಶ ಎಂದೇ ಖ್ಯಾತರಾಗಿದ್ದ ಡಾ. ಶಿವರಾಮ ಕಾರಂತರು ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರರು. ಕಾದಂಬರಿಕಾರರು. ಕನ್ನಡ ವೈಚಾರಿಕತೆಯ ಧೀಮಂತ ಪ್ರತಿನಿಧಿಯಂತಿದ್ದ ಕಾರಂತರ ಬದುಕೇ ಒಂದು ಪ್ರಯೋಗಶಾಲೆಯಂತಿತ್ತು. ಆಧುನಿಕ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಅವರ ಸಾಹಿತ್ಯ ಸಾಧನೆಗಾಗಿ ಜ್ಞಾನಪೀಠ ಪ್ರಶಸ್ತಿ ಪಡೆದಿದ್ದ ಕಾರಂತರು, ಕನ್ನಡಿಗರಿಗೆ ಕನ್ನಡದ ಒಂದು ವಿಶಿಷ್ಟ ಬದುಕಿನ ಮಾದರಿಯಾಗಿ ಬಹುಕಾಲ ನೆನಪಿನಲ್ಲಿ ಉಳಿಯುವರು ಎಂದರು.ಕಾರ್ಯಕ್ರಮದಲ್ಲಿ ಸಂಘದ ಗೌರವ ಕಾರ್ಯದರ್ಶಿ ಆರ್.ಮುನಿರಾಜು, ಸಮಾಜ ಸೇವಕ ಕೆ.ಮುನಿರಾಜು, ಮುನಿ ಅಂಜಿನಪ್ಪ, ಶೇಖ್ ನಜೀರ್ ಅಹಮದ್, ಹಿರಿಯರಾದ ಪಿಳ್ಳಪ್ಪಯ್ಯ ಮತ್ತು ಕುಟುಂಬದವರು ಉಪಸ್ಥಿತರಿದ್ದರು.
(ಫೋಟೊ ಕ್ಯಾಫ್ಷನ್)ವಿಜಯಪುರದಲ್ಲಿ ಪುರಸಭಾ ಸದಸ್ಯೆ ಕವಿತಾ ಮುನಿಆಂಜನಪ್ಪ ಸ್ವಗೃಹದಲ್ಲಿ ಅಖಿಲ ಕರ್ನಾಟಕ ಮಿತ್ರ ಸಂಘ ಆಯೋಜಿಸಿದ್ದ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಮತ್ತು ಡಾ. ಶಿವರಾಮ ಕಾರಂತರ ಜನ್ಮ ಶತಾಬ್ದಿ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಚಿ.ಮಾ. ಸುಧಾಕರ್ ಉದ್ಘಾಟಿಸಿದರು.