ಉದ್ಯೋಗಕ್ಕಿಂತ ಒಕ್ಕಲುತನ ಶ್ರೇಷ್ಠ

| Published : May 30 2025, 12:45 AM IST

ಸಾರಾಂಶ

ಒಕ್ಕಲುತನ ಮಾಡುವ ರೈತನು ಯಾರ ಮುಂದೆ ಅಂಗಲಾಚುವ ಅಗತ್ಯವಿಲ್ಲ. ರೈತರು ತಮ್ಮ ಸ್ವ ಪರಿಶ್ರಮದೊಂದಿಗೆ ಕೃಷಿ ಕಾರ್ಯವನ್ನು ಮಾಡುವ ಮೂಲಕ ಜಗತ್ತಿಗೆ ಅನ್ನ ಹಾಕುವ ಶ್ರೇಷ್ಠವಾದ ಕಾರ್ಯವನ್ನು ಮಾಡುತ್ತಿದ್ದಾರೆ.

ಕುಷ್ಟಗಿ:

ಎಲ್ಲ ಉದ್ಯೋಗಕ್ಕಿಂತ ಒಕ್ಕಲುತನ ಶ್ರೇಷ್ಠ ಉದ್ಯೋಗವಾಗಿದೆ ಎಂದು ಪ್ರಗತಿಪರ ರೈತ ಡಾ. ದೇವೇಂದ್ರಪ್ಪ ಬಳೂಟಗಿ ಹೇಳಿದರು.

ಪಟ್ಟಣದ ಟೆಂಗುಂಟಿ ರಸ್ತೆಯ ಪಕ್ಕದಲ್ಲಿರುವ ತಾಲೂಕು ಪಂಚಮಸಾಲಿ ಸಮಾಜದ ಸಮುದಾಯ ಭವನದಲ್ಲಿ ಸಮಾಜದ ವತಿಯಿಂದ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಇಂದಿನ ದಿನಗಳಲ್ಲಿ ಒಕ್ಕಲುತನ ಎನ್ನುವುದು ಎಲ್ಲರಿಗೂ ಬೇಡವಾದ ಉದ್ಯೋಗವಾಗಿದೆ. ಇದು ಬೇಸರದ ಸಂಗತಿಯಾಗಿದೆ ಎಂದರು.

ಒಕ್ಕಲುತನ ಮಾಡುವ ರೈತನು ಯಾರ ಮುಂದೆ ಅಂಗಲಾಚುವ ಅಗತ್ಯವಿಲ್ಲ. ರೈತರು ತಮ್ಮ ಸ್ವ ಪರಿಶ್ರಮದೊಂದಿಗೆ ಕೃಷಿ ಕಾರ್ಯವನ್ನು ಮಾಡುವ ಮೂಲಕ ಜಗತ್ತಿಗೆ ಅನ್ನ ಹಾಕುವ ಶ್ರೇಷ್ಠವಾದ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.

ರೈತರ ಬದುಕು ಸ್ವಾಭಿಮಾನದ ಬದುಕಾಗಿದೆ. ಕೃಷಿ ಕಾರ್ಯದಿಂದ ದೂರ ಉಳಿದ ಯುವಕರು ಕೃಷಿ ಕಾಯಕದ ಕಡೆ ಮುಖ ಮಾಡಿ ಕೃಷಿಯಲ್ಲಿ ಹಲವಾರು ಅಂಶಗಳಿವೆ. ಅವುಗಳನ್ನು ಅರಿತು ಉತ್ತಮವಾದ ಕೃಷಿಕನಾಗಿ ಬದುಕಿ ಬಾಳಬೇಕು ಎಂದರು.

ಮಾಜಿ ಶಾಸಕ ಕೆ. ಶರಣಪ್ಪ ವಕೀಲರು ಮಾತನಾಡಿ, ನಮ್ಮ ಸಮಾಜದ ದೇವೇಂದ್ರಪ್ಪ ಬಳೂಟಗಿ ಅವರ ಕೃಷಿ ಸಾಧನೆ ಗುರುತಿಸಿ ರಾಯಚೂರು ಕೃಷಿ ವಿಶ್ವವಿದ್ಯಾಲಯ ಡಾಕ್ಟರೆಟ್ ಪದವಿ ನೀಡಿದ್ದು ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ, ಹನುಮಸಾಗರ ಗ್ರಾಪಂ ಅಧ್ಯಕ್ಷ ರುದ್ರಗೌಡ್ರು, ವಕೀಲರ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ, ಸಮಾಜದ ಮುಖಂಡರಾದ ಬಸವರಾಜ ಹಳ್ಳೂರು, ಮಹಾಂತೇಶ ಅಗಸಿಮುಂದಿನ, ಶಿವಶಂಕರಪ್ಪ, ಸುರೇಶ ಕೌದಿ, ಶಿವಕುಮಾರ ಅಂಗಡಿ ಉಪಸ್ಥಿತರಿದ್ದರು.