ಧರ್ಮ ಸಂಸ್ಥಾಪನೆಗೆ ಜೀವನ ಮುಡಿಪಾಗಿಟ್ಟ ಶ್ರೀಕೃಷ್ಣ: ಎಚ್.ಡಿ.ತಮ್ಮಯ್ಯ

| Published : Aug 17 2025, 01:33 AM IST

ಧರ್ಮ ಸಂಸ್ಥಾಪನೆಗೆ ಜೀವನ ಮುಡಿಪಾಗಿಟ್ಟ ಶ್ರೀಕೃಷ್ಣ: ಎಚ್.ಡಿ.ತಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ದ್ವಾಪರ ಯುಗದಲ್ಲಿ ಅಧರ್ಮದ ನಾಶಕ್ಕಾಗಿಯೇ ಅವತರಿಸಿ ಧರ್ಮ ಸಂಸ್ಥಾಪನೆ ಮತ್ತು ಭಕ್ತರ ರಕ್ಷಣೆಗೆ ತನ್ನ ಜೀವನವನ್ನು ಮುಡಿಪಾಗಿಟ್ಟವನು ಭಗವಾನ್ ಶ್ರೀಕೃಷ್ಣ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

- ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ದ್ವಾಪರ ಯುಗದಲ್ಲಿ ಅಧರ್ಮದ ನಾಶಕ್ಕಾಗಿಯೇ ಅವತರಿಸಿ ಧರ್ಮ ಸಂಸ್ಥಾಪನೆ ಮತ್ತು ಭಕ್ತರ ರಕ್ಷಣೆಗೆ ತನ್ನ ಜೀವನವನ್ನು ಮುಡಿಪಾಗಿಟ್ಟವನು ಭಗವಾನ್ ಶ್ರೀಕೃಷ್ಣ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ಜಿಲ್ಲಾಡಳಿತದಿಂದ ನಗರದ ಕುವೆಂಪು ಕಲಾ ಮಂದಿರದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಶ್ರೀಕೃಷ್ಣ ಜಯಂತಿ ಉದ್ಘಾಟಿಸಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ವಸುದೇವ-ದೇವಕಿ ಪುತ್ರನಾಗಿ ಜನಿಸಿದ ಶ್ರೀಕೃಷ್ಣ ಮುಂದೆ ನಂದ ಗೋಕುಲದಲ್ಲಿ ಬೆಳೆದು ಯಶೋಧೆ ಮಗನಾಗಿಯೂ ಗಮನ ಸೆಳೆದ ಶ್ರೀಕೃಷ್ಣ ಬಾಲ್ಯದಲ್ಲಿ ತುಂಟತನದ ವಿಶೇಷವಾಗಿ ಗೋಚರಿಸುತ್ತಾನೆ ಎಂದರು.ಭಗವದ್ಗೀತೆಯಲ್ಲಿ ನೀಡಿದ ಉಪದೇಶ ಶ್ರೀಕೃಷ್ಣನ ಜೀವನಾನುಭವ ಎಂದರೆ ತಪ್ಪಾಗದು. ಮಹಾಭಾರತ ಯುದ್ಧದಲ್ಲಿ ಅರ್ಜುನನ ಸಾರಥಿಯಾಗಿದ್ದ ಶ್ರೀಕೃಷ್ಣ ಪಾಂಡವರ ಪಕ್ಷಪಾತಿಯಾದರೂ ಧರ್ಮ ಪರಿಪಾಲಕನಾಗಿ ಗುರುತಿಸಿ ಕೊಳ್ಳುವ ಪರಿ ಅನನ್ಯ. ಅರ್ಜುನನಿಗೆ ಗೀತೋಪದೇಶದ ಮೂಲಕ ಸತ್ಯದ ಅರಿವು ಮೂಡಿಸಿದ ಶ್ರೀಕೃಷ್ಣನ ಆದರ್ಶ ಸೇರಿದಂತೆ ಆತನ ಬದುಕಿನ ಹಲವಾರು ಮಹತ್ವದ ಘಟ್ಟಗಳನ್ನು ನಾವು ಅರಿಯುವುದು ಅಗತ್ಯ. ನಮ್ಮೆಲ್ಲರ ಜೀವನೋತ್ಸಾಹದ ಸಂಕೇತ ಶ್ರೀಕೃಷ್ಣನ ಪ್ರಬುದ್ಧತೆ ಇಂದಿನ ಕಾಲಘಟ್ಟಕ್ಕೂ ಮಾದರಿಯಾಗಿ ನಿಲ್ಲುತ್ತದೆ ಎಂದು ಹೇಳಿದರು. ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಚಟ್ನಹಳ್ಳಿ ಮಹೇಶ್ ಧರ್ಮದ ಏಕಮೇವ ಉದ್ಧಾರವೇ ಶ್ರೀಕೃಷ್ಣನ ಜನ್ಮಕ್ಕೆ ಕಾರಣ. ಜಗತ್ತಿನ ಸಂರಕ್ಷಕ ಶ್ರೀಕೃಷ್ಣನ ವಿಶೇಷ ಗುಣಗಳು ಗಮನ ಸೆಳೆಯುತ್ತವೆ. ಇಂದಿಗೂ ಶ್ರೀಕೃಷ್ಣನ ವ್ಯಕ್ತಿತ್ವ ಮಾದರಿ ಯಾಗಿದೆ ಎಂದರು. ಶ್ರೀಕೃಷ್ಣ ಉತ್ತಮ ರಾಜನೀತಿಜ್ಞ, ಸಹನೆ, ತಾಳ್ಮೆಯಂತಹ ಗುಣಗಳಿಂದ ವಿಶಿಷ್ಟವಾಗಿ ನಿಲ್ಲುತ್ತಾನೆ. ಕಲಿಯುಗದಲ್ಲಿ ನಡೆಯ ಬಹುದಾದ ವಿದ್ಯಮಾನಗಳ ಬಗ್ಗೆ ದ್ವಾಪರ ಯುಗದಲ್ಲೆ ತಿಳಿಸಿ ಧರ್ಮ, ಪರಂಪರೆ, ಸಾತ್ವಿಕತೆ ರಕ್ಷಣೆಗೆ ಶ್ರೀಕೃಷ್ಣ ಕಾರಣನಾದ. ಅವರ ಸಂದೇಶ ಮನುಷ್ಯ ತಿಳಿದುಕೊಂಡರೆ ಅಧಿಕಾರದ ಲಾಲಸೆ. ತಪ್ಪು ಕಲ್ಪನೆ. ಅಹಂಕಾರ. ಭಿನ್ನಾಭಿಪ್ರಾಯ ತೊರೆದು ಸರಳ ಜೀವನ ಕಂಡುಕೊಳ್ಳಬಹುದು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಸ್. ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಶ್ರೀಕೃಷ್ಣ ಹಾಗೂ ರಾಧೆ ವೇಷಧಾರಿಗಳ ಸ್ಪರ್ಧೆಗೆ ಮೆರುಗು ತಂದ ಚಿಕ್ಕ ಮಕ್ಕಳಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಉಪ ತಹಸೀಲ್ದಾರ್ ರಾಮ್‌ರಾವ್ ದೇಸಾಯಿ ಜಿಲ್ಲಾ ಯಾದವ ಸಂಘದ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ತಿಪ್ಪೇಸ್ವಾಮಿ, ಹಳ್ಳಿಕಾರ್ ಸಂಘದ ಜಿಲ್ಲಾ ಅಧ್ಯಕ್ಷ ಕೋಟೆ ಸೋಮಣ್ಣ, ಬಸವರಾಜ್ ಉಪಸ್ಥಿತರಿದ್ದರು.

- ಬಾಕ್ಸ್- ರಾಧಾ ಕೃಷ್ಣ ವೇಷ ಸ್ಪರ್ಧೆಚಿಕ್ಕಮಗಳೂರು: ನಗರದ ವಿಜಯಪುರದ ಒಕ್ಕಲಿಗರ ಸಮುದಾಯ ಭವನದಲ್ಲಿ ಜೆವಿಎಸ್‌ ಶಾಲೆ ವಿದ್ಯಾರ್ಥಿಗಳಿಗೆ ಶ್ರೀ ಕೃಷ್ಣ ಜನ್ಮಾಷ್ಠಮಿ ಹಬ್ಬದ ಅಂಗವಾಗಿ ಶನಿವಾರ ವೇಷಭೂಷಣ ರಾಧಾ ಕೃಷ್ಣ ಸ್ಪರ್ಧೆ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್‌, ಕೃಷ್ಣ ಜನ್ಮಾಷ್ಠಮಿ ಪವಿತ್ರ ಹಬ್ಬದಂದು ಕೃಷ್ಣ, ರಾಧೆಯಾಗಿ ವೇಷ ಧರಿಸಿ ಬಂದಿರುವ ನಮ್ಮ ಎಲ್ಲಾ ಪುಟಾಣಿ ಮಕ್ಕಳು ಜೀವನದಲ್ಲಿ ಕೃಷ್ಣನ ರೀತಿ ಯಶಸ್ಸನ್ನು ಕಾಣಲಿ ಎಂದು ಶುಭ ಹಾರೈಸಿದರು. ಕೃಷ್ಣನ ಇರುವಿಕೆಯನ್ನು ಮಹಾ ಭಾರತದ ಪುಸ್ತಕದಲ್ಲಿ ನೋಡುತ್ತೇವೆ. ವೇಷಭೂಷಣ ಸ್ಪರ್ಧೆ ಮಕ್ಕಳಲ್ಲಿ ಸಂಸ್ಕೃತಿ ಬಿಂಬಿಸಲು ಪೂರಕ ಎಂದರು.

ಈ ಸಂದರ್ಭದಲ್ಲಿ ಸಹ ಕಾರ್ಯದರ್ಶಿ ರತೀಶ್‌ ಕುಮಾರ್, ಪಿ. ರಾಜು, ಅಶೋಕ್, ಮುಖ್ಯ ಶಿಕ್ಷಕ ವಿಜಿತ್‌ ವ್ಯವಸ್ಥಾಪಕರಾದ ತೇಜಸ್ ಮೂರ್ತಿ, ಅಭಿಷೇಕ್ ಹಾಜರಿದ್ದರು.

16 ಕೆಸಿಕೆಎಂ 2ಚಿಕ್ಕಮಗಳೂರಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಜೆವಿಎಸ್‌ ಶಾಲೆ ವಿದ್ಯಾರ್ಥಿಗಳಿಗೆ ಶ್ರೀ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಶನಿವಾರ ವೇಷಭೂಷಣ ರಾಧಾ ಕೃಷ್ಣ ಸ್ಪರ್ಧೆ ಏರ್ಪಡಿಸಲಾಗಿತ್ತು.