ಕನ್ನಡಪ್ರಭ ವಾತೆ ಶಿರಾ ಮನುಷ್ಯ, ಮನುಷ್ಯನಲ್ಲಿ ದ್ವೇಷ ಅಸೂಯೆ ಹೆಚ್ಚಾಗುತ್ತಿರುವ ಪ್ರಸಕ್ತ ಸ್ಥಿತಿಯಲ್ಲಿ, ಜಾತ್ರೆ ದೇವತಾ ಉತ್ಸವಗಳು ಪರಸ್ಪರ ಪ್ರೀತಿ ಬಾಂಧವ್ಯವನ್ನು ಬೆಸೆಯುವಲ್ಲಿ ಎಲ್ಲರನ್ನೂ ಪ್ರೀತಿಯಿಂದ ಕಾಣುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿ ಸಂಬಂಧಗಳನ್ನು ಬೆಸೆಯುತ್ತವೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.ಅವರು ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಬೊಮ್ಮಗಾನಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ಭೂತರಾಯ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ದೇವತಾ ಉತ್ಸವಗಳು ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಯ ಪ್ರತೀಕವಾಗಿವೆ. ನಮ್ಮ ಸಂಸ್ಕೃತಿ ಎಲ್ಲರನ್ನು ಪ್ರೀತಿಸುವಂತಹ, ಸ್ನೇಹದಿಂದ ಕಾಣುವಂತಹ ಸ್ಥಿತಿಯನ್ನು ನಿರ್ಮಾಣ ಮಾಡುತ್ತವೆ. ಕಳೆದ ವರ್ಷ ಮಳೆ ಬರಲಿಲ್ಲ ಈ ವರ್ಷವಾದರೂ ಉತ್ತಮ ಮಳೆ ಬೆಳೆಯಾಗಿ ರೈತರು, ಜನಸಾಮಾನ್ಯರು ಸುಭಿಕ್ಷೆ ಕಾಣಲಿ ಎಂದು ಶ್ರೀ ಭೂತರಾಯ ಸ್ವಾಮಿಯಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ ಗೌಡ, ಶಿರಾ ಜೆಡಿಎಸ್ ಮುಖಂಡ ಆರ್.ಉಗ್ರೇಶ್, ಕನಕ ಬ್ಯಾಂಕ್ ಅಧ್ಯಕ್ಷ ಬಿ.ಕೆ. ಮಂಜುನಾಥ್, ಸಮಾಜ ಸೇವಕ ಕಲ್ಕೆರೆ ರವಿಕುಮಾರ್, ರಾಜ್ಯ ಹಳ್ಳಿಕಾರ ಸಮುದಾಯದ ಹಿರಿಯ ಮುಖಂಡ ಕೆ.ಎಂ.ನಾಗರಾಜು, ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಚಂಗಾವರ ಮಾರಣ್ಣ, ತಾಲೂಕು ಪಂಚಾಯತಿ ಮಾಜಿ ಸದಸ್ಯ ಸುದರ್ಶನ, ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ, ವೈದ್ಯರಾದ ಡಾ.ಡಿ.ಎಂ. ಗೌಡ, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಪುನೀತ್ ಗೌಡ, ಅಭಿಯಂತರ ತಿಮ್ಮಣ್ಣ, ಮುಖಂಡರಾದ ರವಿ ಸೇರಿದಂತೆ ಹಲವರು ಹಾಜರಿದ್ದರು.