ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಜನ್ಮ ನೀಡಿದ ತಂದೆ-ತಾಯಿ, ಜ್ಞಾನ ನೀಡಿದ ಗುರುಗಳ ಋಣವನ್ನು ಯಾವತ್ತೂ ತೀರಿಸಲು ಸಾಧ್ಯವಿಲ್ಲ ಎಂದು ಆರ್ಟ್ ಆಫ್ ಲೀವಿಂಗ್ ಡಾ.ಬಿ.ಎಂ.ಪಾಟೀಲ ಗುರೂಜಿ ಹೇಳಿದರು.ನಗರದ ಕೃಷಿ ಮಹಾವಿದ್ಯಾಲಯದಲ್ಲಿ ಅಧ್ಯಯನ ನಿರತ ಹಿರಿಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗುರು ಬ್ರಹ್ಮ, ಗುರು ವಿಷ್ಣು, ಗುರು ಸಾಕ್ಷಾತ್ ಮಹೇಶ್ವರ ಎಂಬಂತೆ ಗುರುವಿಗೆ ಶ್ರೇಷ್ಠ ಸ್ಥಾನವಿದ್ದು, ತಾವೆಲ್ಲ ತಮಗೆ ಕಲಿಸಿದ ಗುರುಗಳನ್ನು ಸದಾ ನೆನೆಯಬೇಕು. ಅವರು ಎರೆದ ಜ್ಞಾನಧಾರೆಯ ಫಲವಾಗಿಯೇ ವಿದ್ಯಾರ್ಥಿಗಳ ಭವಿಷ್ಯ ಸುಂದರವಾಗಿ ರೂಪುಗೊಳ್ಳುತ್ತದೆ. ತಂದೆ-ತಾಯಿ ಹಾಗೂ ವಿದ್ಯೆ ಕಲಿಸಿದ ಗುರುಗಳಿಗೆ ಸಮಾಜದಲ್ಲಿ ಉನ್ನತ ಸ್ಥಾನವಿದೆ ಎಂದರು.ಸ್ಪರ್ಧಾತ್ಮಕ ಜಗತ್ತಿನಲ್ಲಿಂದು ಬಹುತೇಕ ಯುವಜನತೆ ಸ್ವಚ್ಛಂದ ಜೀವನದ ವ್ಯಾಮೋಹಕ್ಕೆ ಒಲವು ತೋರುವಾಗ ಇಲ್ಲಿ ಹಳೆ ವಿದ್ಯಾರ್ಥಿಗಳು ಗುರು ಪ್ರೇಮ-ಗೌರವ ಭಾವ ತೋರಿದ್ದು ಸಂಸ್ಕೃತಿಯ ಪ್ರತೀಕ ಎಂದು ಬಣ್ಣಿಸಿದರು. ನಮ್ಮ ಶೈಕ್ಷಣಿಕ ಪ್ರಗತಿ, ಸರ್ವತೋಮುಖ ಬೆಳವಣಿಗೆಗೆ ಗುರುಗಳು ಕಲಿಸಿದ ಅಕ್ಷರ ಫಲ ಸದ್ವಿನಿಯೋಗವಾಗಿದೆ. ನಮ್ಮ ಜೀವನ ರೂಪಕ್ಕೆ ಕಾರಣವಾಗಿದೆ. ಆ ಹಿನ್ನೆಲೆಯಲ್ಲಿ ಗುರುಗಳನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಶಿಷ್ಯರು ಅಭಿಮಾನದಿಂದ ಹೇಳಿದರು.ಡಾ.ಸುರೇಶ ಪಾಟೀಲ, ಡಾ.ಕೆ.ಎಚ್.ಮುಂಬಾರೆಡ್ಡಿ, ಡಾ.ರವೀಂದ್ರ ಬೆಳ್ಳಿ, ತಾವು ಕಲಿಸಿದ ವಿದ್ಯಾರ್ಥಿಗಳ ಕಾರ್ಯಗಳನ್ನು ಮೆಲುಕು ಹಾಕಿದರು. ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ರಾಮನಗೌಡ ಕನ್ನೋಳ್ಳಿ ಮಾತನಾಡಿದರು. ಬಸವಂತ ಚವ್ಹಾಣ, ಗುರುಪ್ರಸಾದ, ಶಿವು ಭಾವಿಕಟ್ಟಿ, ಹೇಮಂತಕುಮಾರ, ರವಿಕುಮಾರ ಮುಂತಾದವರು ಉಪಸ್ಥಿತರಿದ್ದರು. ಕೃಷಿ ಪದವಿ ಪಡೆದು ಇಂದು ರಾಜ್ಯದ ಕೃಷಿ ಇಲಾಖೆಯ ನಿರ್ದೇಶಕರಾಗಿರುವ ಡಾ.ವೆಂಕಟರಮಣರೆಡ್ಡಿ ಪಾಟೀಲ, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಹುದ್ದೆಗೆ ಪದೋನ್ನತಿ ಹೊಂದಿದ ಡಾ.ಪ್ರಕಾಶ ಚವ್ಹಾಣರನ್ನು ಸನ್ಮಾನಿಸಲಾಯಿತು. ಈ ಸಮಾರಂಭದಲ್ಲಿ ಶಿಕ್ಷಕರಾದ ಡಾ.ಎಚ್.ಬಿ.ಪಾಟೀಲ, ಡಾ.ಎಸ್.ಬಿ.ದೇವರನಾವದಗಿ, ಡಾ.ಎಸ್.ಐ.ತೋಳನೂರ, ಡಾ.ಆರ್.ಎ.ಬಾಳಿಕಾಯಿ, ಡಾ.ಎಸ್.ವ್ಹಿ.ನಾಡಗೌಡ, ಡಾ.ಅಶೋಕ ಸಜ್ಜನ, ಡಾ.ಆರ್.ವಿ.ಪಾಟೀಲ, ಡಾ.ರಾಜೇಂದ್ರ ಪೋದ್ದಾರ, ಡಾ.ಎಸ್.ಎ.ಗದ್ದನಕೇರಿ, ಡಾ.ಜಗದೀಶ ಹೊಸಮಠ, ಡಾ.ಎಸ್.ಚಂದ್ರಶೇಖರ, ಡಾ.ರಾಜು ತೆಗ್ಗಿಹಳ್ಳಿ ಅವರಿಗೆ ಪಾದಪೂಜೆ ಮೂಲಕ ಪುಷ್ಪಾರ್ಚಣೆ ಮಾಡಿ ಗೌರವ ಸಮರ್ಪಿಸಿದರು.ಡಾ.ಎಂ.ಆರ್ ಮೈದರಗಿ ಕಾರ್ಯಕ್ರಮ ನಿರೂಪಿಸಿದರು. ಡಾ.ಲಿಂಗರಾಜ ತಾಳಿಕೋಟಿ ವಂದಿಸಿದರು.