ಸಾರಾಂಶ
ಲಕ್ಷ್ಮೇಶ್ವರ ಪಟ್ಟಣದ ಕಮಲ ವೆಂಕಪ್ಪ ಅಗಡಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಅಗಡಿ ಕನ್ನಡ ಹಬ್ಬ-೨೦೨೩ ಹಾಗೂ ೬೮ನೇ ಕನ್ನಡ ರಾಜ್ಯೋತ್ಸವ, ಕರ್ನಾಟಕ ಸಂಭ್ರಮ-೫೦ ಕಾರ್ಯಕ್ರಮವನ್ನು ಪ್ರೊ.ಅನಿಲ ವೈದ್ಯ ಉದ್ಘಾಟಿಸಿದರು.
ಕನ್ನಡ ರಾಜ್ಯೋತ್ಸವ, ಕರ್ನಾಟಕ ಸಂಭ್ರಮ-೫೦ ಕಾರ್ಯಕ್ರಮ
ಲಕ್ಷ್ಮೇಶ್ವರ: ಕನ್ನಡಿಯ ಮೇಲಿರುವ ಪ್ರೀತಿ ಕನ್ನಡದ ಮೇಲಿದ್ದಿದ್ದರೆ ಕನ್ನಡ ಸಿರಿಗನ್ನಡಂ ಗೆಲ್ಗೆ ಆಗುತ್ತಿತ್ತು. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಒಂದಿಲ್ಲೊಂದು ಜ್ಞಾನವಿದ್ದೇ ಇರುತ್ತದೆ. ನಾವೆಲ್ಲ ಕನ್ನಡವನ್ನು ಬಳಸಿದರೆ ಅದು ಉಳಿಯುತ್ತದೆ, ಬಳಸದಿದ್ದರೆ ಕನ್ನಡ ಉಳಿಯುವುದಿಲ್ಲ. ಕನ್ನಡದ ಮೇಲಿನ ಪ್ರೀತಿ ವಿಶಾಲವಾದದ್ದು, ಸಾಗರದಷ್ಟು ಆಳವಾಗಿದೆ ಎಂದು ಪ್ರೊ.ಅನಿಲ ವೈದ್ಯ ಹೇಳಿದರು.ಪಟ್ಟಣದ ಕಮಲ ವೆಂಕಪ್ಪ ಅಗಡಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಅಗಡಿ ಕನ್ನಡ ಹಬ್ಬ-೨೦೨೩ ಹಾಗೂ ೬೮ನೇ ಕನ್ನಡ ರಾಜ್ಯೋತ್ಸವ, ಕರ್ನಾಟಕ ಸಂಭ್ರಮ-೫೦ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಐಟಿ, ಬಿಟಿಗೆ ಹೋದರು, ನಿಮ್ಮದೇ ಆದಂತಹ ಸ್ವಂತ ಕಂಪನಿ ಪ್ರಾರಂಭಿಸಿದರೂ ಮೊದಲು ನೀವೆಲ್ಲ ಕನ್ನಡದಲ್ಲಿಯೇ ಮಾತನಾಡಿರಿ. ಮಹಾವಿದ್ಯಾಲಯದ ಒಳಗಡೆ ಎಲ್ಲಾ ನಾಮಫಲಕಗಳನ್ನು ಕನ್ನಡದಲ್ಲಿಯೇ ಹಾಕಿರಿ. ಕನ್ನಡ ಭಾಷೆಯನ್ನು ಸಮರ್ಥವಾಗಿ ಬಳಸಬೇಕು. ಕನ್ನಡವನ್ನು ಮಾತನಾಡುವಾಗ ಸ್ಪಷ್ಟವಾಗಿ ವಿಶ್ವಾಸ ಭರಿತವಾಗಿ ಮಾತನಾಡಿರಿ. ತಂದೆ ತಾಯಿ, ಗುರು ಹಿರಿಯರಿಗೆ ಗೌರವಿಸುವುದರ ಮೂಲಕ ಪ್ರೀತಿಯಿಂದ ನೋಡಿಕೊಳ್ಳಿರಿ. ವಯೋವೃದ್ಧ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಬೇಡಿ ಎಂದರು.ಅನುಷಾ ಹಿರೇಮಠ ಮಾತನಾಡಿ, ಕನ್ನಡ ಭಾಷೆಗೆ ಇರುವ ಗತ್ತು, ಗೌರವ, ಹಿರಿಮೆ, ಗರಿಮೆಯನ್ನು, ಕನ್ನಡ ನಾಡಿನ ಚರಿತ್ರೆ ಕನ್ನಡದ ಅಭಿಮಾನ ನಾಡಿನ ಎಲ್ಲ ಕವಿಗಳ ಕೃತಿಗಳ ಪರಿಚಯ ಜ್ಞಾನಪೀಠ ಪುರಸ್ಕೃತರ ನೆನಪು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಪಡೆದ ಕವಿಗಳ ಸವಿಸ್ತಾರ ಪರಿಚಯ, ಹಳಗನ್ನಡ ಕವಿಗಳ ಕುರಿತು ಅವರ ಬರೆದ ಕೃತಿಗಳ ಬಗ್ಗೆ ವಿವರಿಸಿದರು.
ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಪ್ಪಟ ಕನ್ನಡಿಗರ ವೇಷ ಭೂಷಣದಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ನೂರಾರು ಮಹಿಳೆಯರು ಕುಂಭ ಹೊತ್ತು ಮೆರವಣಿಗೆಯುದ್ಧಕ್ಕೂ ಸಾಗಿದ್ದು ವಿಶೇಷವಾಗಿತ್ತು. ಅಗಡಿ ಮಹಾವಿದ್ಯಾಲಯದ ಆವರಣದಲ್ಲಿ ಕನ್ನಡದ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು ಕಂಡು ಬಂದಿತು.ಈ ಸಂದರ್ಭದಲ್ಲಿ ಅಗಡಿ ಪಪೂ ಮಹಾವಿದ್ಯಾಲಯದ ಪ್ರಾ.ಡಾ. ಪರುಶುರಾಮ ಬಾರ್ಕಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಂ.ಮಹಾಪುರುಷ, ಡಾ. ಹಯವದನ, ಪ್ರೊ.ಸೋಮಶೇಖರ ಕೆರಿಮನಿ, ಪ್ರೊ. ಮಾಲತೇಶ ಸೂರಣಗಿ, ಸುಭಾಷ ಮೇಟಿ ಸೇರಿದಂತೆ ಮಹಾವಿದ್ಯಾಲಯದ ಎಲ್ಲಾ ವಿಭಾಗದ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.