ಸಾರಾಂಶ
ದೊಡ್ಡಬಳ್ಳಾಪುರ: ಭಾನವಾರ ರಾತ್ರಿ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಭಾನುವಾರ ಸಂಜೆಯೇ ತಾಲೂಕಿನ ಪ್ರಸಿದ್ದ ಯಾತ್ರಾಸ್ಥಳ ಹಾಗೂ ರಾಜ್ಯದ ಪ್ರಮುಖ ನಾಗಾರಾಧನಾ ಕ್ಷೇತ್ರಗಳಲ್ಲಿ ಒಂದಾದ ಘಾಟಿ ಸುಬ್ರಹ್ಮಣ್ಯ ದೇವಾಲಯದ ಬಾಗಿಲು ಬಂದ್ ಮಾಡಲಾಗಿದೆ.
ಸಂಜೆ 4.30ಕ್ಕೆ ಸರಿಯಾಗಿ ದೇವಾಲಯದ ಸಿಬ್ಬಂದಿ ದೇಗುಲದ ಗರ್ಭಗುಡಿ, ಪ್ರವೇಶ ದ್ವಾರ ಹಾಗೂ ಮಹಾದ್ವಾರಗಳಿಗೆ ಬೀಗ ಹಾಕಿ, ಅರ್ಚಕರಿಗೆ ಬೀಗದ ಕೈಯನ್ನು ಹಸ್ತಾಂತರಿಸಿದರು.ದೇಶದಲ್ಲಿ ಚಂದ್ರಗ್ರಹಣ ಗೋಚರ ಹಿನ್ನೆಲೆಯಲ್ಲಿ ದೇಗುಲಗಳಲ್ಲಿ ಗ್ರಹಣ ವೇಳೆ ಪೂಜೆ ಹಾಗೂ ದರ್ಶನ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿದೆ. ರಾತ್ರಿ 9.57ಕ್ಕೆ ಆರಂಭವಾಗಲಿರುವ ಗ್ರಹಣ ಮಧ್ಯರಾತ್ರಿ 1.26 ನಿಮಿಷಕ್ಕೆ ಮೋಕ್ಷಗೊಳ್ಳಲಿದೆ.
ಗ್ರಹಣ ಮೋಕ್ಷವಾದ ಬಳಿಕ ಸೋಮವಾರ ನಸುಕಿನ ಜಾವ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯಗಳು ನಡೆಯಲಿದ್ದು, ನಂತರ ಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆಗಳು ನಡೆಯಲಿವೆ ಎಂದು ದೇಗುಲ ಸಿಬ್ಬಂದಿ ತಿಳಿಸಿದ್ದಾರೆ.ವಿವಿಧ ದೇವಾಲಯಗಳು ಬಂದ್:
ಗ್ರಹಣ ಹಿನ್ನಲೆ ದೊಡ್ಡಬಳ್ಳಾಪುರ ತಾಲೂಕಿನ ಪ್ರಮುಖ ದೇಗುಲಗಳಾದ ತೇರಿನಬೀದಿ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯ, ತೂಬಗೆರೆಯ ವೆಂಕಟರಮಣ ದೇವಾಲಯ, ಕಾಡನೂರು ಚನ್ನಕೇಶವ ದೇವಾಲಯ, ಚಿಕ್ಕಮಧುರೆ ಶನೇಶ್ವರ ದೇವಾಲಯ, ಹುಲುಕುಡಿ ವೀರಭದ್ರೇಶ್ವರ ದೇವಾಲಯ, ದೊಡ್ಡಬಳ್ಳಾಪುರ ನಗರದ ನೆಲದಾಂಜನೇಯಸ್ವಾಮಿ ದೇವಾಲಯ, ಮುತ್ಯಾಲಮ್ಮ ದೇವಾಲಯ, ನಗರೇಶ್ವರ ದೇವಾಲಯ, ಕಾಳಿಕ ಕಮಟೇಶ್ವರ ದೇಗುಲ, ಅರುಣಾಚಲೇಶ್ವರ ದೇವಾಲಯ ಸೇರಿದಂತೆ ವಿವಿಧ ದೇಗುಲಗಳ ಬಾಗಿಲು ಮುಚ್ಚಲಾಗಿತ್ತು.ವಿವಿಧೆಡೆ ರಾಹುಗ್ರಸ್ತ ಚಂದ್ರಗ್ರಹಣದ ಧಾರ್ಮಿಕ ಆಲೋಚನೆಗಳ ಅರಿವು ಮೂಡಿಸುವ ಪ್ರಯತ್ನಗಳು ನಡೆದವು. ಮತ್ತೊಂದೆಡೆ ಚಂದ್ರಗ್ರಹಣದ ವೈಜ್ಞಾನಿಕ ಆಲೋಚನೆಯ ಬಗ್ಗೆ ಜನಜಾಗೃತಿ ಮೂಡಿಸಿ, ರಕ್ತ ವರ್ಣದ ಚಂದ್ರನನ್ನು ಬರಿಗಣ್ಣಿನಿಂದಲೂ ನೋಡಬಹುದು ಎಂದು ಅರಿವು ಮೂಡಿಸಲಾಯಿತು. ಮೌಢ್ಯವನ್ನು ತೊಡೆದುಹಾಕುವ ಜಾಗೃತಿ ಕಾರ್ಯಕ್ರಮಗಳು ನಡೆದವು.
7ಕೆಡಿಬಿಪಿ5-ಚಂದ್ರಗ್ರಹಣ ಹಿನ್ನಲೆ ಘಾಟಿ ಸುಬ್ರಹ್ಮಣ್ಯ ದೇಗುಲ ದ್ವಾರಕ್ಕೆ ಬೀಗಮುದ್ರೆ.
7ಕೆಡಿಬಿಪಿ6-ಚಂದ್ರಗ್ರಹಣದ ಹಿನ್ನಲೆ ಘಾಟಿ ಸುಬ್ರಹ್ಮಣ್ಯ ದೇವಾಲಯದ ಮಹಾದ್ವಾರವನ್ನು ಮುಚ್ಚಲಾಗಿದೆ.