ಸಾರಾಂಶ
ಮಾಗಡಿ: ಪ್ರತಿಯೊಬ್ಬರಿಗೂ ಆರೋಗ್ಯ ತುಂಬಾ ಮುಖ್ಯ. ಗುಣಮಟ್ಟದ ಚಿಕಿತ್ಸೆ ನೀಡುವುದು ಅಗತ್ಯವಾಗಿ ಬೇಕಾಗಿದ್ದು ಬಡವರಿಗಾಗಿ ಕೇವಲ ಹತ್ತು ರುಪಾಯಿಗೆ ಶ್ವಾಸಕೋಶ ಚಿಕಿತ್ಸೆ ದೊರೆಯಲಿದ್ದು, ಗ್ರಾಮೀಣ ಪ್ರದೇಶದ ಬಡವರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಧರ್ಮಸ್ಥಳ ಮಂಜುನಾಥ ಆಸ್ಪತ್ರೆ ವೈದ್ಯಾಧಿಕಾರಿ ಡಾ.ರಾಘವನ್ ಹೇಳಿದರು.
ಮಾಗಡಿ: ಪ್ರತಿಯೊಬ್ಬರಿಗೂ ಆರೋಗ್ಯ ತುಂಬಾ ಮುಖ್ಯ. ಗುಣಮಟ್ಟದ ಚಿಕಿತ್ಸೆ ನೀಡುವುದು ಅಗತ್ಯವಾಗಿ ಬೇಕಾಗಿದ್ದು ಬಡವರಿಗಾಗಿ ಕೇವಲ ಹತ್ತು ರುಪಾಯಿಗೆ ಶ್ವಾಸಕೋಶ ಚಿಕಿತ್ಸೆ ದೊರೆಯಲಿದ್ದು, ಗ್ರಾಮೀಣ ಪ್ರದೇಶದ ಬಡವರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಧರ್ಮಸ್ಥಳ ಮಂಜುನಾಥ ಆಸ್ಪತ್ರೆ ವೈದ್ಯಾಧಿಕಾರಿ ಡಾ.ರಾಘವನ್ ಹೇಳಿದರು.
ಪಟ್ಟಣದ ಧರ್ಮಸ್ಥಳ ಮಂಜುನಾಥ ಆಸ್ಪತ್ರೆಯಲ್ಲಿ ಮಾತನಾಡಿದ ಅವರು, ತಜ್ಞರಾದ ಡಾ.ಗಣೇಶ್ ಪ್ರತಾಪ್ ಅವರು ಬಡವರಿಗಾಗಿ ಕಡಿಮೆ ವೆಚ್ಚದಲ್ಲಿ ಶ್ವಾಸಕೋಶ ಚಿಕಿತ್ಸೆ ನೀಡಲು ಮುಂದೆ ಬಂದಿದ್ದು, ಕೇವಲ 10 ರುಪಾಯಿಗೆ ಚಿಕಿತ್ಸೆ ನೀಡಲಿದ್ದಾರೆ. ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯ ಸಹಯೋಗದಲ್ಲಿ ಕೆಮ್ಮು, ಕಫ, ಗೊರಕೆ, ವೀಜಿಂಗ್, ಎದೆ ನೋವು, ಅಲರ್ಜಿ, ಶೀತ, ಅಸ್ತಮಾ ಹಾಗೂ ಚಿಕ್ಕ ಮಕ್ಕಳಲ್ಲಿ ಪದೇ ಪದೇ ಕಾಣುವ ಉಸಿರಾಟದ ಸಮಸ್ಯೆಗಳಿಗೆ ಕೇವಲ ಹತ್ತು ರುಪಾಯಿಯಲ್ಲಿ ಚಿಕಿತ್ಸೆ ಪಡೆಯಬಹುದು. ಆ.15ರಿಂದ ಪ್ರತಿ ತಿಂಗಳ 3ನೇ ಬುಧವಾರ ಡಾ.ಗಣೇಶ್ ಪ್ರತಾಪ್ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಿದ್ದಾರೆ. ತಪಾಸಣೆ ವೇಳೆ ಚಿಕಿತ್ಸೆಗೆ ಒಳಪಟ್ಟವರಿಗೆ ನಮ್ಮಲ್ಲೇ ರಿಯಾಯಿತಿ ದರದಲ್ಲಿ ಔಷಧಿಯನ್ನೂ ನೀಡಲಾಗುವುದು ಎಂದು ಹೇಳಿದರು.ಡಾ.ಗಣೇಶ್ ಪ್ರತಾಪ್ ಮಾತನಾಡಿ, ಗ್ರಾಮೀಣ ಭಾಗದ ಜನತೆಯ ಆರೋಗ್ಯ ಸಮಸ್ಯೆಗಳನ್ನು ಸಣ್ಣ ವಯಸ್ಸಿನಿಂದಲೂ ಬಹಳ ಹತ್ತಿರದಿಂದ ಕಂಡಿದ್ದೇನೆ. ಬಡವರ ಕಷ್ಟಕ್ಕೆ ಸ್ಪಂದಿಸುವ ಮನೋಭಾವದಿಂದ ಕೇವಲ ಹತ್ತು ರುಪಾಯಿಗೆ ಚಿಕಿತ್ಸೆ ನೀಡಲಾಗುವುದು. ಇದರಲ್ಲಿ ಯಾವುದೇ ವ್ಯಾವಹಾರಿಕ ಉದ್ದೇಶವಿಲ್ಲ. ಕೇವಲ ಸೇವಾ ಮನೋಭಾವ ಮಾತ್ರ. ಧರ್ಮಸ್ಥಳ ಮಂಜುನಾಥ ಆಸ್ಪತ್ರೆ ಮತ್ತು ಸ್ಪರ್ಶ ಆಸ್ಪತ್ರೆ ಜಂಟಿಯಾಗಿ ರಿಯಾಯಿತಿ ದರದಲ್ಲಿ ಚಿಕಿತ್ಸೆಗೆ ಅವಕಾಶ ಕಲ್ಪಿಸಿರುವ ಉತ್ತಮ ಕೆಲಸ ಎಂದು ಹೇಳಿದರು.
ಇದೇ ವೇಳೆ ಆಸ್ಪತ್ರೆಯ ಡಾ.ವಿದ್ಯಾರಾಘವನ್, ಉಮಾಶಂಕರ್ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.