ಕನ್ನಡಪ್ರಭ ವಾರ್ತೆ ವಿಜಯಪುರ

ನೂತನ ಸಂಪುಟದಲ್ಲಿ ಸಚಿವ ಸ್ಥಾನ ನೀಡಿದ್ದು ಹೈಕಮಾಂಡ್ ನಾಯಕರು. ಇದರಲ್ಲಿ ಉಸ್ತುವಾರಿ ಸಚಿವ ಎ.ಬಿ. ಪಾಟೀಲರ ಕೈವಾಡವಿಲ್ಲ. ಯಾರಿಗೆ ಸಚಿವ ಸ್ಥಾನ ನೀಡಬೇಕು ಹಾಗೂ ಯಾವ ಖಾತೆಯ ಸಚಿವರನ್ನಾಗಿಸಬೇಕು ಮತ್ತು ಯಾವ ಜಿಲ್ಲೆಯ ಉಸ್ತುವಾರಿ ನೀಡಬೇಕು ಎಂಬುದನ್ನು ಕೇಂದ್ರದ ನಾಯಕರು ನಿರ್ಧರಿಸುತ್ತಾರೆ. ಸಚಿವ ಸ್ಥಾನ ಸಿಗದವರೆಲ್ಲ ಎಂ.ಬಿ.ಪಾಟೀಲರ ಮೇಲೆ ದೂರುವುದು ಸರಿಯಲ್ಲ ಎಂದು ವಿಜಯಪುರ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸೈಯ್ಯದ ಜಮೀರಅಹಮ್ಮದ ಬಕ್ಷಿ ಅಸಮಾಧಾನ ಹೊರಹಾಕಿದರು.

ಈ‌ ಕುರಿತು ಪ್ರಕಟಣೆ ಹೊರಡಿಸಿದ ಅವರು, ಜಿಲ್ಲೆಯಲ್ಲಿನ ಆಕಾಂಕ್ಷಿಗಳಿಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಎಂ.ಬಿ.ಪಾಟೀಲರನ್ನು ದೂಷಿಸುವುದು ಸರಿಯಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು ಸಚಿವ ಸ್ಥಾನಕ್ಕೆ ಅರ್ಹರಾಗಿದ್ದಾರೆ. ಆದರೆ ಹೈ ಕಮಾಂಡ್ ನವರು ಜಿಲ್ಲಾವಾರು, ಸಮುದಾಯವಾರು ಹಾಗೂ ವಿವಿಧ ಮಾನದಂಡಗಳ ಮೇಲೆ ಕೆಲವರಿಗೆ ಮಾತ್ರ ಅವಕಾಶ ನೀಡಿದ್ದಾರೆ. ಆದರೆ ಜಿಲ್ಲೆಗೆ ಇನ್ನೊಂದು ಸಚಿವಸ್ಥಾನ ಕೊಡಬೇಕೆಂದು ಎಂ.ಬಿ.ಪಾಟೀಲರು ಸಹ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಉಳಿದವರಿಗೂ ಉತ್ತಮ ಸ್ಥಾನಮಾನ ಸಿಗಬಹುದು. ಆದರೆ ತಮಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಎಂ.ಬಿ.ಪಾಟೀಲರೇ ಕಾರಣ ಎಂದು ಆರೋಪಿಸುವುದು ಸರಿಯಲ್ಲ. ಒಂದು ವೇಳೆ ಇವರಿಗೆ ಸಚಿವ ಸ್ಥಾನ ಸಿಕ್ಕಿದ್ದರೆ, ನಾವು ಎಂ.ಬಿ.ಪಾಟೀಲರಿಂದಲೇ ಸಚಿವರಾದೆವು ಎಂದು ಹೇಳುತ್ತಿದ್ದರೆ ಎಂದು ಪ್ರಶ್ನಿಸಿದ್ದಾರೆ. ಸಚಿವ ಸ್ಥಾನ ಸಿಗದಿದ್ದಾಗ ಇದಕ್ಕೆ ಎಂ.ಬಿ.ಪಾಟೀಲರೇ ಕಾರಣ ಎಂದು ಹೇಳುವ ಇವರು ಈ ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಎಂ.ಬಿ.ಪಾಟೀಲರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆಗ ಎಂ.ಬಿ.ಪಾಟೀಲರು ಯಾರ ಮೇಲಾದರೂ ಆರೋಪಿಸಿದ್ದರೇ?. ಇದನ್ನು ಆಕಾಂಕ್ಷಿಗಳು ಅರಿತುಕೊಳ್ಳಬೇಕು ಎಂದು ಸೈಯ್ಯದ್‌ ಜಮೀರ್‌ಅಹಮ್ಮದ ಬಕ್ಷಿ ಸ್ಪಷ್ಟಪಡಿಸಿದರು.