ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಅನುಭವ ಮಂಟಪದಲ್ಲಿ ಅತ್ಯಂತ ಮೌಲ್ಯಯುತ ವಚನಗಳನ್ನು ರಚಿಸಿ ಇಡೀ ಸಮಾಜಕ್ಕೆ ಕಾಯಕದ ಅರಿವು ಮೂಡಿಸಿದವರು ಮಡಿವಾಳ ಮಾಚಿದೇವ ಎಂದು ಅಧ್ಯಾಪಕ ಪಿ. ಗೋವಿಂದರಾಜು ತಿಳಿಸಿದರು.ನಗರದ ವರನಟ ಡಾ. ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೃತ್ತಿಯಲ್ಲಿ ಸೈನಿಕರಾಗಿದ್ದ ಮಾಚಿದೇವ,ಬಸವಣ್ಣನವರ ವಚನಗಳಿಂದ ಪ್ರಭಾವಿತರಾಗಿ ಅನುಭವ ಮಂಟಪ ಸೇರಿದರು. ಅನುಭವ ಮಂಟಪದಲ್ಲಿದ್ದ ಶಿವಶರಣರ ಬಟ್ಟೆಗಳನ್ನು ಶುದ್ಧಿಕರಿಸುವ ಮೂಲಕ ಜನಸಾಮಾನ್ಯರಿಗೆ ಕಾಯಕದ ಮಹತ್ವವನ್ನು ಸಾರಿದರು. ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಮಾಚಿದೇವನ ವಚನಗಳ ಕೊಡುಗೆ ಅಪಾರ ಎಂದರು.ಸಾಕಷ್ಟು ವಚನಗಳನ್ನು ರಚಿಸುವ ಮೂಲಕ ಅಂದಿನ ಕಾಲಘಟ್ಟದಲ್ಲಿ ಸಾಮಾಜಿಕ ಅಸಮಾನತೆ, ಸ್ತ್ರೀಶೋಷಣೆ, ಮೂಢನಂಬಿಕೆ, ಕಂದಚಾರಗಳ ವಿರುದ್ಧ ಜನರನ್ನು ಎಚ್ಚರಿಸಿದರು. ಮಾಚಿದೇವರ ಕಾಯಕಕ್ಕೆ ಮಾರುಹೋದ ಬಸವಣ್ಣನವರು ಎನ್ನ ಮನವ ಶುದ್ಧಿ ಮಾಡಿದವ, ಎನ್ನ ಅಂತರಂಗವ ಶುದ್ಧಿ ಮಾಡಿದವ ಮಾಚಿದೇವ ಎಂದಿದ್ದಾರೆ. ಅನುಭವ ಮಂಟಪದ ಪ್ರಾಮುಖ್ಯತೆಗೆ ಮಾಚಿದೇವ ಕಾರಣೀಪುರುಷರಾಗಿದ್ದಾರೆ ಎಂದು ತಿಳಿಸಿದರು.
ಸಮುದಾಯವು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣವನ್ನು ಕೊಡಿಸಬೇಕು. ಉನ್ನತ ಹುದ್ದೆಗಳನ್ನು ಪಡೆದು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು. ಸಮುದಾಯವು ರಚನಾತ್ಮಕ ಕೆಲಸಗಳಲ್ಲಿ ತೊಡಗಬೇಕು. ಮಾಚಿದೇವರ ಕಾಯಕದ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಸುಶಿಕ್ಷಿತರಾಗಬೇಕು. ಆಗಲೇ ಮಡಿವಾಳ ಮಾಚಿದೇವರಿಗೆ ಗೌರವ ಸಲ್ಲಿಸಿದಂತಾಗಲಿದೆ ಎಂದು ಅವರು ತಿಳಿಸಿದರು.ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ್, ಸಮುದಾಯವು ಸರ್ಕಾರದ ಸೌಲಭ್ಯ, ಸವಲತ್ತುಗಳನ್ನು ಬಳಸಿಕೊಂಡು ಸಾಮಾಜಿಕ, ಅರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಪ್ರಬುದ್ಧತೆ ಹೊಂದಬೇಕು. ಜಿಲ್ಲೆಯಲ್ಲಿ ಸಮುದಾಯದ ಅಭಿವೃದ್ಧಿಗೆ ಅವಶ್ಯವಾಗಿರುವ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ಮಡಿವಾಳ ಸಮುದಾಯ ಸಂಘಟನೆಯ ರಾಜ್ಯಾಧ್ಯಕ್ಷ ನಂಜಪ್ಪ ಹಾಗೂ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಗೋಪಾಲ್ ಮಾಚಿದೇವರ ಅದರ್ಶ ನಡೆ-ನುಡಿಗಳು ಹಾಗೂ ಸಮುದಾಯದ ಪ್ರಗತಿಗೆ ಅಗತ್ಯವಾಗಿರುವ ವಿಚಾರಗಳ ಬಗ್ಗೆ ಮಾತನಾಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಸಮಾಜದ ಮುಖಂಡರು ಹಾಗೂ ಎಲ್ಲಾ ತಾಲೂಕು ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಇದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರವಾಸಿ ಮಂದಿರದಲ್ಲಿ ಶಾಸಕ ಸಿ. ಪುಟ್ಟರಂಗಶೆಟ್ಟಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.