ಸಾರಾಂಶ
ಹಾನಗಲ್ಲ: ಬೆಳ್ಳಂಬೆಳಗ್ಗೆ ಹಾನಗಲ್ಲಿನ ಚಿದಂಬರ ನಗರ ಹಾಗೂ ಕುಮಾರೇಶ್ವರ ನಗರದಲ್ಲಿ ದಾಳಿ ಮಾಡಿದ ಹುಚ್ಚು ನಾಯಿ ಕೇವಲ 2 ಗಂಟೆಯ ಅವಧಿಯಲ್ಲಿ 12 ಜನರಿಗೆ ಕಚ್ಚಿ ಗಾಯಗೊಳಿಸಿದ್ದು, ಹಾನಗಲ್ಲ ಹಾಗೂ ಹಾವೇರಿ ಸರ್ಕಾರಿ ಆಸ್ಪತ್ರೆಯಲ್ಲಿ ನಾಯಿ ಕಚ್ಚಿಸಿಕೊಂಡವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಶುಕ್ರವಾರ ಬೆಳಗ್ಗೆ 8 ಗಂಟೆಯ ಹೊತ್ತಿಗೆ ಚಿದಂಬರ ನಗರದಲ್ಲಿ ರಂಗೋಲಿ ಹಾಕುತ್ತಿದ್ದ ಮಹಿಳೆಗೆ ಬೆನ್ನಟ್ಟಿ ಕಚ್ಚಿದ್ದನ್ನು ಕಂಡು ಸಾರ್ವಜನಿಕರು ಹೊರಗೆ ಬಂದು ನಾಯಿ ಓಡಿಸಲು ಮಾಡಿದ ಯತ್ನವೂ ವಿಫಲವಾಗಿದೆ. ಅಲ್ಲಿಯೇ ಸ್ವಲ್ಪ ದೂರದಲ್ಲಿ ಮನೆ ಕಟ್ಟಡ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬನಿಗೆ ಇದೇ ಹುಚ್ಚುನಾಯಿ ಕಡಿದು ಗಾಯ ಮಾಡಿದೆ. ನಂತರ ಕುಮಾರೇಶ್ವರ ನಗರದತ್ತ ಓಡಿದ ನಾಯಿ ಒಟ್ಟು 12 ಜನರಿಗೆ ಕಡಿದ ಬಗ್ಗೆ ಹಾನಗಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದೆ.ಇಲ್ಲಿನ ವೈದ್ಯರು 8 ಜನರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹಾವೇರಿ ಸರ್ಕಾರಿ ಆಸ್ಪತ್ರೆಗೆ ಕಳಿಸಿಕೊಟ್ಟಿದ್ದು, ಇನ್ನು ನಾಲ್ವರಿಗೆ ಇದೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಹುಚ್ಚುನಾಯಿ ಕಡಿತಕ್ಕೆ ಬೇಕಾದ ಔಷಧಿ ಕೊರತೆ ಇಲ್ಲ. ಎಲ್ಲ ಚಿಕಿತ್ಸೆ ಇಲ್ಲಿಯೇ ಕೊಡುತ್ತಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.ಸಾಲಗಾರರ ಕಾಟ: ಆತ್ಮಹತ್ಯೆಗೆ ಯತ್ನಿಸಿದ ಯುವಕ
ರಾಣಿಬೆನ್ನೂರು: ಸಾಲಗಾರರ ಕಾಟಕ್ಕೆ ಬೇಸತ್ತು ಯುವಕನೊರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ನಗರದ ಹೊರವಲಯದಲ್ಲಿ ನಡೆದಿದೆ.ಇಲ್ಲಿನ (ಮೂಲತಃ ಶಿವಮೊಗ್ಗ ಜಿಲ್ಲೆಯ ನಿವಾಸಿ) ಬೀರಲಿಂಗೇಶ್ವರ ನಗರದ ವಿಕಾಸ್ (25) ಆತ್ಮಹತ್ಯೆಗೆ ಯತ್ನಿಸಿದ ಯುವಕ.ವಿಕಾಸ್ ಅವರು ನಗರದಲ್ಲಿ ಫ್ರೆಂಡ್ ಕಾರ್ ಕೇರ್ ಎಂಬ ಅಂಗಡಿ ಇಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದರು. ಇವರು ವ್ಯವಹಾರದ ಸಲುವಾಗಿ ನಗರದ ವಿವಿಧ ಜನರ ಹತ್ತಿರ ಸಾಲವನ್ನು ಪಡೆದಿದ್ದರು. ಇದಲ್ಲದೆ ತನ್ನ ಸ್ನೇಹಿತ ಶ್ರೇಯಸ್ನಿಗೆ ತಾನು ಸಾಲ ಪಡೆದಿದ್ದ ಸಾಲಗಾರರ ಹತ್ತಿರ ಬಡ್ಡಿ ರೂಪದಲ್ಲಿ ಸಾಲ ಕೊಡಿಸಿದ್ದ. ಸಾಲ ನೀಡಿದವರು ಶ್ರೇಯಸ್ನಿಂದ ಸಾಲದ ಬಡ್ಡಿ ಕೊಡಿಸುವಂತೆ ವಿಕಾಸ್ನಿಗೆ ಕಿರುಕುಳ ನೀಡಿದ್ದಾರೆ. ಹೀಗಾಗಿ ವಿಕಾಸ ತನ್ನ ಸ್ನೇಹಿತ ಶ್ರೇಯಸ್ ಮನೆಗೆ ತೆರಳಿ ಸಾಲ ಕಟ್ಟುವಂತೆ ಮನವಿ ಮಾಡಿದ್ದಾನೆ. ಆದರೆ ಶ್ರೇಯಸ್ ಹಾಗೂ ಆತನ ತಾಯಿ ಪ್ರೇಮಾ ಹಣ ಕಟ್ಟಲ್ಲವೆಂದು ವಿಕಾಸ್ನಿಗೆ ಬೈದು ಕಳಿಸಿದ್ದರು. ಇದರಿಂದ ಮನನೊಂದ ವಿಕಾಸ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಅವರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.