ಮಾದಪ್ಪನ ದರ್ಶನ ಪಡೆದ ಸುತ್ತೂರು ಶ್ರೀ

| Published : Jan 31 2024, 02:16 AM IST

ಸಾರಾಂಶ

ತಾಲೂಕಿನ ಪ್ರಸಿದ್ದ ಯಾತ್ರಾ ಸ್ಥಳವಾದ ಮಹದೇಶ್ವರಬೆಟ್ಟದ ಮಾದಪ್ಪನ ಸನ್ನಿದಿಗೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಭೇಟಿ ನೀಡಿ ದರ್ಶನ ಪಡೆದರು.

ಹನೂರು: ತಾಲೂಕಿನ ಪ್ರಸಿದ್ದ ಯಾತ್ರಾ ಸ್ಥಳವಾದ ಮಹದೇಶ್ವರಬೆಟ್ಟದ ಮಾದಪ್ಪನ ಸನ್ನಿದಿಗೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಭೇಟಿ ನೀಡಿ ದರ್ಶನ ಪಡೆದರು. ಇದಕ್ಕೂ ಮುನ್ನ ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ಪೂರ್ಣಕುಂಭ ದೊಂದಿಗೆ ಆತ್ಮೀಯವಾಗಿ ಬರಮಾಡಿಕೂಳ್ಳಲಾಯಿತು. ಈ ವೇಳೆ ಮಾತನಾಡಿದ ಶ್ರೀಗಳು ಪ್ರತಿ ವರ್ಷವೂ ರಾಜ್ಯದ ವಿವಿಧ ಮೂಲೆ ಮೂಲೆಗಳಿಂದ ನೆರೆಯ ರಾಜ್ಯಗಳಿಂದಲೂ ಸಾಗಾರೋಪಾದಿಯಾಗಿ ಭಕ್ತರು ಶ್ರೀಸ್ವಾಮಿಯ ದರ್ಶನಕ್ಕೆ ಆಗಮಿಸುತ್ತಿದ್ದು, ಈ ಹಿನ್ನಲೆ ಪ್ರಸ್ತುತ ಮಹದೇಶ್ವರ ಬೆಟ್ಟದಲ್ಲಿ ಅಗತ್ಯ ಸೌಕರ್ಯಗಳನ್ನು ಹೆಚ್ಚಿನ ರೀತಿಯಲ್ಲಿ ಕಲ್ಪಿಸುವಲ್ಲಿ ಪ್ರಾಧಿಕಾರ ಮುಂದಾಗುವುದರ ಜೊತೆಗೆ ಶ್ರೀ ಕ್ಷೇತ್ರದಲ್ಲಿರುವ ದಾಸೋಹ ಭವನದ ಒಳಾಂಗಣದ ಅಭಿವೃದ್ದಿಗೆ ತಿರುಪತಿ, ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಾಲಯ ಹಾಗೂ ರಾಜ್ಯದ ವಿವಿದೆಡೆ ಪ್ರಸಿದ್ದಿ ಪಡೆದಿರುವ ದೇವಾಲಯಗಳಲ್ಲಿರುವ ದಾಸೋಹದ ರೀತಿ ವ್ಯವಸ್ಥಿತವಾಗಿ ದಾಸೋಹ ಭವನದ ಮಾದರಿ ನಿರ್ಮಾಣಕ್ಕೆ ಮುಂದಾಗುವಂತೆ ಮತ್ತು ದೀಪದಗಿರಿ ಒಡ್ಡುವಿನಲ್ಲಿ ನಿರ್ಮಿಸಿರುವ ಶ್ರೀ ಮಹದೇಶ್ವರ ಪ್ರತಿಮೆಯ ಸಂಪೂರ್ಣ ಕಾಮಗಾರಿಯನ್ನು ಪೂರ್ಣಗೊಳಿಸಿ ಭಕ್ತರ ವಿಕ್ಷಣೆಗೆ ಅವಕಾಶ ಕಲ್ಪಿಸಿ ಎಂದು ತಿಳಿಸಿದರು. ಪ್ರಾಧಿಕಾರದ ವತಿಯಿಂದ ಸಾಲೂರು ಮಠದಲ್ಲಿ ಸುಮಾರು ೪೬ ಲಕ್ಷ ರೂ ವೆಚ್ಚದಲ್ಲಿ ವೇದಾಗಮ ಶಾಲೆ ನಿರ್ಮಾಣಕ್ಕೆ ಸುತ್ತೂರು ಶ್ರೀಗಳು ಭೂಮಿಪೂಜೆಯನ್ನು ನೇರವೇರಿಸಿದರು. ಈ ಸಂದರ್ಭದಲ್ಲಿ ಸಾಲೂರು ಬೃಹನ್ಮಠ ಶಾಂತಮಲ್ಲಿಕಾರ್ಜುನಸ್ವಾಮಿ, ಶರತ್‌ ಚಂದ್ರ ಸ್ವಾಮೀಜಿ, ನೀಲಕಂಠಸ್ವಾಮೀಜಿ, ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ, ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಹಾಗೂ ಇನ್ನಿತರರು ಹಾಜರಿದ್ದರು.