ಕಾಫಿ ಮಂಡಳಿಯ ಸೋಮವಾರಪೇಟೆ ವಿಸ್ತರಣಾ ವಿಭಾಗದ ವತಿಯಿಂದ ತಾಲೂಕಿನ ಮಾದಾಪುರದ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಇತ್ತೀಚೆಗೆ ಗುಣಮಟ್ಟದ ಕಾಫಿ ಉತ್ಪಾದನೆ ಬಗ್ಗೆ ಒಂದು ದಿನದ ಕಾರ್ಯಾಗಾರ ನಡೆಯಿತು.

ಸೋಮವಾರಪೇಟೆ: ಕಾಫಿ ಮಂಡಳಿಯ ಸೋಮವಾರಪೇಟೆ ವಿಸ್ತರಣಾ ವಿಭಾಗದ ವತಿಯಿಂದ ತಾಲೂಕಿನ ಮಾದಾಪುರದ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಇತ್ತೀಚೆಗೆ ಗುಣಮಟ್ಟದ ಕಾಫಿ ಉತ್ಪಾದನೆ ಬಗ್ಗೆ ಒಂದು ದಿನದ ಕಾರ್ಯಾಗಾರ ನಡೆಯಿತು.ಕೊಡಗು ಜಿಲ್ಲಾ ಕಾಫಿ ಮಂಡಳಿ ಉಪ ನಿರ್ದೇಶಕ ಡಾ. ವೆಂಕಟ ರೆಡ್ಡಿ ಮಾತನಾಡಿ, ಕಾಫಿ ಫಸಲಿಗೆ ಪ್ರಪಂಚದಲ್ಲಿ ಕಳೆದ ಎರಡು ವರ್ಷಗಳಿಂದ ಉತ್ತಮ ಬೆಲೆ ಸಿಗುತ್ತಿರುವುದು ಬೆಳೆಗಾರರಿಗೆ ಆಶಾದಾಯಕವಾಗಿದೆ. ಇದರಿಂದಾಗಿ ಕಾಫಿ ಬೆಳೆಯುವ ಕ್ಷೇತ್ರ ವಿಸ್ತರಣೆಯಾಗುತ್ತಿದ್ದು, ಉತ್ಪಾದನೆ ಹೆಚ್ಚಾಗುತ್ತಿದೆ ಎಂದರು.

ಕಾಫಿ ಫಸಲನ್ನು ದೇಶದ ಆಂತರಿಕವಾಗಿ ಸೇ. ೪೦ ರಷ್ಟನ್ನು ಮಾತ್ರ ಬಳಕೆ ಮಾಡಿಕೊಳ್ಳುತ್ತಿದ್ದು, ಉಳಿದ ಶೇ. ೬೦ರಷ್ಟು ರಪ್ತಾಗುತ್ತಿದೆ. ಹೊರ ದೇಶಕ್ಕೆ ರಫ್ತಾಗುವ ಕಾಫಿಯಲ್ಲಿ ಒಂದು ಚೀಲದ ಕಾಫಿಯಲ್ಲಿ ಕ್ರಿಮಿನಾಶಕ ಕಂಡುಬಂದರೆ ರಫ್ತಾದ ಕಾಫಿ ಹಿಂದಕ್ಕೆ ಬರುತ್ತದೆ. ಆದುದರಿಂದ ಗುಣಮಟ್ಟದ ಕಾಫಿ ಉತ್ಪಾದನೆಗೆ ಬೆಳೆಗಾರರು ಗಮನಹರಿಸಬೇಕು. ಅಕ್ಟೋಬರ್ ತಿಂಗಳ ನಂತರ ಕಾಫಿ ಗಿಡಗಳಿಗೆ ಕ್ರಿಮಿನಾಶಕ ಸಿಂಪಡಿಸುವುದನ್ನು ನಿಲ್ಲಿಸಬೇಕು. ತಂತ್ರಜ್ಞಾನ ಬಳಸಿಕೊಂಡು ಕೃಷಿ ಮಾಡಬೇಕೆಂದರು.ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿ ಉಪೇಂದ್ರ ಕುಮಾರ್ ಮಾತನಾಡಿ, ಕಾಫಿ ಮಂಡಳಿಯಿಂದ ನೂತನವಾಗಿ ಕಾಫಿ ತೋಟ ಮಾಡಲು, ಹಳೆ ತೋಟಕ್ಕೆ ಹೊಸದಾಗಿ ಸಾಲು ಹಿಡಿದು ಗಿಡ ನೆಡಲು, ನೀರಾವರಿಗಾಗಿ ಸ್ಪಿಂಕ್ಲರ್ ಸೇರಿದಂತೆ ಯಂತ್ರೋಪಕರಣಗಳ ಖರೀದಿಗೆ ಶೇ. ೪೦ ಸಹಾಯಧನ ನೀಡಲಾಗುತ್ತಿದೆ. ಇದನ್ನು ಎಲ್ಲ ಬೆಳೆಗಾರರು ಸಧುಪಯೋಗಪಡಿಸಿಕೊಳ್ಳಬೇಕು ಎಂದರು.ಕಾಫಿ ಮಂಡಳಿ ವಿಸ್ತರಣಾಧಿಕಾರಿ ಸಂಗೀತ ಮಾತನಾಡಿ, ಬೆಳೆಗಾರರ ಅಭಿವೃದ್ಧಿಯಲ್ಲಿ ದೇಶದ ಸಂಪತ್ತು ಎಂಬುದು ಧ್ಯೇಯವಾಕ್ಯದೊಂದಿಗೆ ಮಂಡಳಿ ಕೆಲಸ ಮಾಡುತ್ತಿದೆ. ಎಲ್ಲ ಕಾಫಿ ಬೆಳೆಗಾರರು ಕಚೇರಿಯೊಂದಿಗೆ ನಿಕಟ ಸಂಪರ್ಕವನ್ನಿರಿಸಿಕೊಂಡು ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಬೇಕು ಎಂದರು.

ಕಾಫಿ ಬೆಳೆಗಾರರಾದ ಮಾಳೆಯಂಡ ಜೋಯಪ್ಪ, ಬಾಚಿನಾಡಂಡ ಗಾಂಧಿ ಇದ್ದರು.