ಮಾದೇವ ನಾಯ್ಕ ದಂಪತಿಯಿಂದ ಶಾಲೆಗೆ 4 ಗುಂಟೆ ಜಾಗ ದಾನ

| Published : Jun 26 2024, 12:37 AM IST

ಸಾರಾಂಶ

ತಾಲೂಕಿನ ಬೆಳಕೆ ಕಲಬಂಡಿಯ ಮಾದೇವ ನಾಯ್ಕ ದಂಪತಿ ಇತ್ತೀಚೆಗೆ ಜಾಗವೊಂದನ್ನು ಖರೀದಿ ಮಾಡಿದ್ದರು. ತಾವು ಖರೀದಿಸಿದ ಸ್ಥಳದಲ್ಲಿ ಹೇರಬುಡಕಿ ಸರ್ಕಾರಿ ಕಿರಿಯ ಪ್ರಾಥಮಿ ಶಾಲೆ ಇರುವುದನ್ನು ಮನಗಂಡ ಅವರು ಶಾಲೆ ಇರುವ ನಾಲ್ಕು ಗುಂಟೆ ಸ್ಥಳವನ್ನು ದಾನವಾಗಿ ನೀಡಲು ನಿರ್ಧರಿಸಿ ಅಗತ್ಯದ ಕಾಗಪತ್ರಗಳನ್ನು ತಾವೇ ತಯಾರಿಸಿ ಶಾಲೆಗೆ ಹಸ್ತಾಂತರಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಭಟ್ಕಳ: ಬೆಳಕೆಯ ಉದ್ಯಮಿ ಹಾಗೂ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಮಾದೇವ ನಾಯ್ಕರು ತಾವು ಖರೀಧಿಸಿದ ಜಾಗದಲ್ಲಿ ಶಾಲೆ ಇರುವುದನ್ನು ಮನಗಂಡು ನಾಲ್ಕು ಗುಂಟೆ ಜಾಗವನ್ನು ಶಾಲೆಗೆ ದಾನವಾಗಿ ನೀಡಿ ಮಾದರಿಯಾಗಿದ್ದಾರೆ.

ತಾಲೂಕಿನ ಬೆಳಕೆ ಕಲಬಂಡಿಯ ಮಾದೇವ ನಾಯ್ಕ ದಂಪತಿ ಇತ್ತೀಚೆಗೆ ಜಾಗವೊಂದನ್ನು ಖರೀದಿ ಮಾಡಿದ್ದರು. ತಾವು ಖರೀದಿಸಿದ ಸ್ಥಳದಲ್ಲಿ ಹೇರಬುಡಕಿ ಸರ್ಕಾರಿ ಕಿರಿಯ ಪ್ರಾಥಮಿ ಶಾಲೆ ಇರುವುದನ್ನು ಮನಗಂಡ ಅವರು ಶಾಲೆ ಇರುವ ನಾಲ್ಕು ಗುಂಟೆ ಸ್ಥಳವನ್ನು ದಾನವಾಗಿ ನೀಡಲು ನಿರ್ಧರಿಸಿ ಅಗತ್ಯದ ಕಾಗಪತ್ರಗಳನ್ನು ತಾವೇ ತಯಾರಿಸಿ ಶಾಲೆಗೆ ಹಸ್ತಾಂತರಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ತಾಲೂಕಿನ ಬೆಳಕೆ ನೂಜ ಮಜಿರೆಯ ಹೆರ್ಬುಡ್ಕಿ ಸರ್ಕಾರಿ ಕಿರಿಯ ಪ್ರಾಥಮಿ ಶಾಲೆಯು ೧೯೯೨ರಿಂದಲೂ ಖಾಸಗಿ ಜಾಗದಲ್ಲಿ ನಡೆಯುತ್ತಿತ್ತು. ಅಂದಿನಿಂದಲೇ ಜಾಗವನ್ನು ಶಾಲೆಗೆ ಹಸ್ತಾಂತರ ಮಾಡಿಕೊಳ್ಳುವಲ್ಲಿ ಪ್ರಯತ್ನಗಳೂ ನಡೆಯುತ್ತಿದ್ದರೂ ಫಲಪ್ರದವಾಗಿರಲಿಲ್ಲ.

ಗ್ರಾಮೀಣ ಭಾಗದ ಶಾಲೆಯಾದ್ದರಿಂದ ಇಲ್ಲಿಗೆ ಬರುವ ಮಕ್ಕಳೂ ಗ್ರಾಮೀಣ ಭಾಗದಿಂದಲೇ ಬರುವವರಾಗಿದ್ದು, ಅವರಿಗೆ ಯಾವುದೇ ತೊಂದರೆಯಾಗಬಾರದು, ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಬೇಕು ಎನ್ನುವುದು ಮಾದೇವ ನಾಯ್ಕ ದಂಪತಿಗಳ ಮುಖ್ಯ ಉದ್ದೇಶವಾಗಿತ್ತು.

ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಮಾದೇವ ನಾಯ್ಕ ಅವರು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹಾಗೂ ಯಾವುದೇ ಶಾಲೆಗೆ ಸರ್ಕಾರಿ ಸೌಲಭ್ಯ ಬರುವಲ್ಲಿ ಶಾಲೆಯು ಸ್ವಂತ ಜಾಗದಲ್ಲಿ ಇರಬೇಕಾಗುತ್ತದೆ ಎನ್ನುವ ಕಲ್ಪನೆಯಲ್ಲಿ ಜಾಗವನ್ನು ದಾನವಾಗಿ ಕೊಟ್ಟು ಅಗತ್ಯದ ಕಾಗದ ಪತ್ರಗಳನ್ನು ಮಾಡಿಸಿಕೊಟ್ಟಿದ್ದಾರೆ.

ಶಾಲೆಯಲ್ಲಿ ೨೦೨೩- ೨೦೨೪ನೇ ಶೈಕ್ಷಣಿಕ ಸಾಲಿನಲ್ಲಿ ೧ನೇ ತರಗತಿಯಿಂದ ೫ನೇ ತರಗತಿಯ ತನಕ ಒಟ್ಟೂ ೨೫ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಗ್ರಾಮೀಣ ಭಾಗದ ಈ ಶಾಲೆಯ ಮೂಲ ಸೌಲಭ್ಯವನ್ನು ಒದಗಿಸುವಲ್ಲಿ ಸಹಕಾರಿಯಾಗಲಿ ಎಂದು ಮಾದೇವ ನಾಯ್ಕ ದಂಪತಿ ಹಾರೈಸಿದ್ದಾರೆ.

ಇತ್ತೀಚೆಗೆ ಶಾಲೆಗೆ ತೆರಳಿದ್ದ ಮಾದೇವ ನಾಯ್ಕ ದಂಪತಿ ಶಾಲೆಯ ಪಹಣಿ ಪತ್ರಿಕೆಯನ್ನು ಶಾಲಾ ಮುಖ್ಯಸ್ಥರಿಗೆ ಹಸ್ತಾಂತರಿಸಿದರು. ಇವರ ಕಾರ್ಯವನ್ನು ಮುಖ್ಯ ಶಿಕ್ಷಕಿ ಆಫ್ರಿನ್ ಶೇಖ, ಸಹ ಶಿಕ್ಷಕಿ ಸವಿತಾ ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಶ್ಲಾಘಿಸಿದ್ದಾರೆ.