ಸಾರಾಂಶ
ಹಲಸಂಗಿಯ ಮಧುರ ಚೆನ್ನರ ಗೆಳೆಯರ ಬಳಗವು ನಗರದ ಮಣ್ಣಿನ ಸೊಗಡು, ಮಾನವೀಯತೆಗಾಗಿ ಮಿಡಿಯುವ ಹಾಗೂ ಸಾಮಾಜಿಕ ಕಾಳಜಿಯನ್ನು ಹೊಂದಿದ ಜಾನಪದ ಸಾಹಿತ್ಯವನ್ನು ನಾಡಿಗೆ ನೀಡಿರುವುದು ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಸಂಗತಿಯಾಗಿದೆ ಎಂದು ಸಾಹಿತಿ ಗುರುರಾಜ ಲೂತಿ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಹಲಸಂಗಿಯ ಮಧುರ ಚೆನ್ನರ ಗೆಳೆಯರ ಬಳಗವು ನಗರದ ಮಣ್ಣಿನ ಸೊಗಡು, ಮಾನವೀಯತೆಗಾಗಿ ಮಿಡಿಯುವ ಹಾಗೂ ಸಾಮಾಜಿಕ ಕಾಳಜಿಯನ್ನು ಹೊಂದಿದ ಜಾನಪದ ಸಾಹಿತ್ಯವನ್ನು ನಾಡಿಗೆ ನೀಡಿರುವುದು ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಸಂಗತಿಯಾಗಿದೆ ಎಂದು ಸಾಹಿತಿ ಗುರುರಾಜ ಲೂತಿ ಹೇಳಿದರು.ನಗರದ ಕುಮಾರಿ ಮೋನಿಕಾ ಬಸವರಾಜ ಕಣ್ಣಿ ಬಿ.ಇಡಿ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಹಮ್ಮಿಕೊಂಡ ಚಕೋರ ಸಾಹಿತ್ಯ ವೇದಿಕೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ನವೋದಯ ಕಾವ್ಯದ ಕೇಂದ್ರ ಹಲಸಂಗಿ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ಹಲಸಂಗಿ ಗೆಳೆಯರ ಬಳಗ ಜನಸಾಮಾನ್ಯರಿಂದ ಹಿಡಿದು ಸಮಾಜದ ಎಲ್ಲ ಸ್ಥರದ ಜನರ ಬದುಕಿನ ನೈಜ ಚಿತ್ರಣವನ್ನು ವೈವಿಧ್ಯಮಯವಾಗಿ ನಾಡಿಗೆ ಪರಿಚಯಿಸುವ ಮಹತ್ತರ ಕೆಲಸವನ್ನು ಮಾಡಿದೆ. ನವೋದಯ ಸಾಹಿತ್ಯಕ್ಕೆ ಅಪಾರವಾದ ಶ್ರೇಷ್ಠತೆಯನ್ನು ತಂದುಕೊಟ್ಟಿದೆ. ಇದರ ಶ್ರೇಯಸ್ಸು ಹಲಸಂಗಿ ಗೆಳೆಯರ ಬಳಗಕ್ಕೆ ಸಲ್ಲುತ್ತದೆ ಎಂದರು.ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಮಹಾದೇವ ಬಸರಕೋಡ ಮಾತನಾಡಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ರಾಜ್ಯಾದ್ಯಂತ ಸಾಹಿತ್ಯಕವಾದ ವಿಭಿನ್ನ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತ ಕನ್ನಡ ನಾಡಿನ ಮೂಲೆ ಮೂಲೆಗೂ ಸಾಹಿತ್ಯದ ಕಂಪನ್ನು ಪಸರಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಹಿರಿಯ ಸಾಹಿತಿ ಡಿ.ಬಿ.ಐಹೊಳ್ಳಿ ಉದ್ಘಾಟಿಸಿದರು. ಬಸವರಾಜ ಕಣ್ಣಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜನಪದ ತಜ್ಞ ಶಂಕರ ಬೈಚಬಾಳ, ಬೆರಗು ಪ್ರಕಾಶನದ ವಿಜಯಲಕ್ಷ್ಮಿ ಕತ್ತಿ, ಶಿವಕುಮಾರ ಕಣ್ಣಿ, ರಾಮಚಂದ್ರ ಮೋರೆ, ಮೋಹನ ಕಟ್ಟಿಮನಿ, ಎಂ.ಎಸ್.ಖೋದ್ನಾಪುರ, ರಮೇಶ ಕತ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.