ಇಲ್ಲಿನ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಫೆ.೧೦ ರಂದು ನಡೆಯಲಿದ್ದು, ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್‌ ನಾಯಕರು ಹಾಗೂ ಪುರಸಭೆ ಸದಸ್ಯರ ಸಭೆಯಲ್ಲಿ ಉಳಿದ ಅವಧಿಯಲ್ಲಿ ಮೊದಲು ಮಧುಸೂಧನ್‌, ೨ನೇ ಅವಧಿಗೆ ಪಿ.ಶಶಿಧರ್‌ (ದೀಪು)ಗೆ ಅವಕಾಶ ಕಲ್ಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಇಲ್ಲಿನ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಫೆ.೧೦ ರಂದು ನಡೆಯಲಿದ್ದು, ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್‌ ನಾಯಕರು ಹಾಗೂ ಪುರಸಭೆ ಸದಸ್ಯರ ಸಭೆಯಲ್ಲಿ ಉಳಿದ ಅವಧಿಯಲ್ಲಿ ಮೊದಲು ಮಧುಸೂಧನ್‌, ೨ನೇ ಅವಧಿಗೆ ಪಿ.ಶಶಿಧರ್‌ (ದೀಪು)ಗೆ ಅವಕಾಶ ಕಲ್ಪಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಬಿ.ರಾಜಶೇಖರ್‌, ಬಿ.ಎಂ.ಮುನಿರಾಜು, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್‌ ಸೇರಿದಂತೆ ಇನ್ನಿತರ ಮುಖಂಡರೊಂದಿಗೆ ಪುರಸಭೆ ಸದಸ್ಯರು ಇದ್ದ ಸಭೆಯಲ್ಲಿ ಅಧ್ಯಕ್ಷರ ಅವಧಿ ಹಂಚಿ, ಮೊದಲು ಮಧುಸೂಧನ್‌, ನಂತರ ಪಿ.ಶಶಿಧರ್‌ (ದೀಪು) ಎಂಬ ಘೋಷಣೆ ಹೊರಬಿದ್ದಿದೆ.

ಉಪಾಧ್ಯಕ್ಷ ಸ್ಥಾನಕ್ಕೆ ಪುರಸಭೆ ಹಿರಿಯ ಸದಸ್ಯ ಅಣ್ಣಯ್ಯಸ್ವಾಮಿ ಮೊದಲ ಅವಧಿಗೆ, ಎರಡನೇ ಅವಧಿಗೆ ಪುರಸಭೆ ಮಾಜಿ ಉಪಾಧ್ಯಕ್ಷ ಕಾರ್ಗಳ್ಳಿ ಸುರೇಶ್‌ ಪತ್ನಿ ಹಾಗೂ ಪುರಸಭೆ ಸದಸ್ಯ ಎನ್.ಕುಮಾರ್‌ ಬೇಡಿಕೆ ಇಟ್ಟಿದ್ದಾರೆ. ಸುರೇಶ್‌ ಪತ್ನಿ ಹಾಗೂ ಎನ್.ಕುಮಾರ್‌ ಇಬ್ಬರು ಮಾತನಾಡಿಕೊಂಡು ಬನ್ನಿ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದ್ದಾರೆ ಎನ್ನಲಾಗಿದೆ. ಬಿಜೆಪಿಯಿಂದ ಬಂದು ಪುರಸಭೆ ಅಧ್ಯಕ್ಷರಾಗಿದ್ದ ಕಿರಣ್‌ ಗೌಡ, ಉಪಾಧ್ಯಕ್ಷ ಹೀನಾ ಕೌಸರ್‌ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬರುವ ಫೆ.೧೦ ರಂದು ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಚುನಾವಣೆ ನಿಗದಿಗೊಂಡಿದೆ.