ಕನ್ನಡಪ್ರಭ ವಾರ್ತೆ, ಕಡೂರು
ಮೂರು ದಶಕಗಳಿಂದ ಹೋರಾಟ ನಡೆಸಿದರೂ ಮಾದಿಗ ಸಮಾಜದ ಒಳಮೀಸಲಾತಿ ವರ್ಗೀಕರಣ ಹುದ್ದೆ ಭರ್ತಿಯಲ್ಲಿ ಅನ್ಯಾಯವಾಗುತ್ತಿರುವ ಬಗ್ಗೆ ಸದನದಲ್ಲಿ ಧ್ವನಿ ಎತ್ತಿ ಸಮಾಜದ ಹಿತ ಕಾಪಾಡಬೇಕು ಎಂದು ಒತ್ತಾಯಿಸಿ ಮಾದಿಗ ಸಮಾಜದ ಮುಖಂಡರು ಗುರುವಾರ ಶಾಸಕ ಕೆ.ಎಸ್. ಆನಂದ್ ಅವರ ಮನೆಗೆ ಬಳಿ ಮುತ್ತಿಗೆ ಹಾಕಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.ರಾಜ್ಯ ಮಾದಿಗ ಮೀಸಲಾತಿ ಹೋರಾಟ ಸಮಿತಿ ಕಾರ್ಯದರ್ಶಿ ಬಿ.ಟಿ.ಚಂದ್ರಶೇಖರ್ ಮಾತನಾಡಿ, ಕಳೆದ 35 ವರ್ಷ ಗಳಿಂದಲೂ ಮಾದಿಗರಿಗೆ ಮೀಸಲಾತಿಯಲ್ಲಿ ಅನ್ಯಾಯವಾಗುತ್ತಿದೆ. ಅದನ್ನು ಸರಿಪಡಿಸಿ ರಾಜ್ಯ ಸರ್ಕಾರ ಒಳಮೀಸಲಾತಿ ನೀಡುವಂತೆ ಒತ್ತಾಯಿಸಿದ ಪರಿಣಾಮ ಸುಪ್ರಿಂಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರ ಮಾದಿಗರಿಗೆ ಶೇ.6ರಷ್ಟು ಒಳ ಮೀಸಲಾತಿ ನೀಡಿದೆ.ಈ ಕಡತಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಆದರೆ ರಾಜ್ಯ ಸರ್ಕಾರ ಪರಿಶಿಷ್ಟರಿಗೆ ನೀಡಿದ ಶೇ.17 ರಲ್ಲಿ ಕಾನೂನು ತೊಡಕಾಗುತ್ತದೆ ಎಂಬ ನೆಪವೊಡ್ಡಿ ಶೇ.15 ಕ್ಕೆ ಇಳಿಸಿ 56 ಸಾವಿರ ಹುದ್ದೆ ಭರ್ತಿ ಮಾಡಲು ಹೊರಟಿರುವುದು ಮಾದಿಗ ಸಮುದಾಯಕ್ಕೆ ಮಾಡಿದ ಅನ್ಯಾಯ. ರಾಜ್ಯದ ಬಜೆಟ್ ಅಧಿವೇಶನದಲ್ಲಿ ಶಾಸಕರು ಚರ್ಚಿಸಿ ಸಮುದಾಯದ ಧ್ವನಿಯಾಗಿ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಬೇಕೆಂದು ಮನವಿ ಮಾಡಿದರು.
ಕರ್ನಾಟಕ ಬ್ಲೂ ಆರ್ಮಿ ಮಾದಿಗರ ಧ್ವನಿ ಸಂಘಟನೆ ರಾಜ್ಯಾಧ್ಯಕ್ಷ ಶೂದ್ರ ಶ್ರೀನಿವಾಸ್ ಮಾತನಾಡಿ, ಸರ್ಕಾರ ಖಾಲಿ ಹುದ್ದೆ ಗಳನ್ನು ಭರ್ತಿಗೆ ಮುಂದಾದರೆ ಇತರೆ ಸಮಾಜಕ್ಕಿಂತ ಮಾದಿಗ ಸಮಾಜಕ್ಕೆ ಸಾಕಷ್ಟು ಅನ್ಯಾಯವಾಗಲಿದೆ. ಶೇ.15 ರ ಮೀಸಲಾತಿ ಯಲ್ಲಿ ಎಡಗೈ- ಬಲಗೈ ಸಮುದಾಯಕ್ಕೆ ಶೇ 5:5ರ ಅನುಪಾತದಲ್ಲಿ ನೀಡಿದರೆ ಮಾದಿಗ ಸಮಾಜದ 3 ಸಾವಿರ ಯುವಕರಿಗೆ ಸರ್ಕಾರಿ ನೌಕರಿ ದೊರೆಯುತ್ತದೆ ಈ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿಗೊಳಿಸದೇ ವಿವಿಧ ಇಲಾಖೆ ಗಳಲ್ಲಿ ಖಾಲಿ ಇರುವ ಹುದ್ದೆ ಭರ್ತಿ ನಿರ್ಧಾರ ರಾಜ್ಯ ಸರಕಾರ ಕೈ ಬಿಡಬೇಕು ಎಂದು ಒತ್ತಾಯಿಸಿದರು.ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಮೀಸಲಾತಿಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಬೆಳಗಾವಿ ಅಧಿವೇಶನದಲ್ಲಿ ಅಂತಿಮ ವಿಧೇಯಕ ಮಂಡಿಸಿದೆ. ಧಾರವಾಡದಲ್ಲಿ ನಡೆದ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ಮೀಸಲಾತಿ ಅನುಪಾತದಲ್ಲಿ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಕಳೆದ 6-7 ವರ್ಷಗಳಿಂದ ಉದ್ಯೋಗಾಕಾಂಕ್ಷಿಗಳ ಖಾಲಿ ಹುದ್ದೆ ಭರ್ತಿಗೆ ಹಿಂದಿನ ಸರ್ಕಾರಗಳು ಕ್ರಮ ಕೈಗೊಂಡಿಲ್ಲ. ಇದರಿಂದ ವಿದ್ಯಾವಂತರಿಗೆ ಅನ್ಯಾಯವಾಗಿದೆ. ಈ ಪರಿಸ್ಥಿತಿ ಸರ್ಕಾರಕ್ಕೆ ಮನವರಿಕೆ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಮಾದಿಗ ಸಮಾಜದ ಅಧ್ಯಕ್ಷ ಜಗದೀ ಶ್, ಮುಖಂಡರಾದ ವೈ.ಟಿ.ಗೋವಿಂದಪ್ಪ, ಬೀರೂರು ಎನ್.ಗಿರೀಶ್, ಹುಲ್ಲೇಹಳ್ಳಿ ಲಕ್ಷ್ಮಣ್, ಕೃಷ್ಣಪ್ಪ, ಚಿಕ್ಕಂಗಳ ಲಕ್ಷ್ಮಣ್, ಟಿ. ಮಂಜಪ್ಪ, ಸುರೇಶ್, ವಾಸು, ತಮ್ಮಯ್ಯ, ಸಗುನಪ್ಪ, ನಾರಾಯಣ್, ರಾಘವೇಂದ್ರ ಮತ್ತಿತರಿದ್ದರು.
5ಕೆಕೆಡಿಯು2.
ಒಳಮೀಸಲಾತಿ ವರ್ಗೀಕರಣ ಹುದ್ದೆ ಭರ್ತಿ ವಿಚಾರದಲ್ಲಿ ಸಮಾಜದ ಹಿತಕಾಪಾಡಲು ಆಗ್ರಹಿಸಿ ಮಾದಿಗ ಸಮಾಜದ ಮುಖಂಡರು ಶಾಸಕ ಕೆ.ಎಸ್. ಆನಂದ್ ಮನೆಗೆ ಮುತ್ತಿಗೆ ಹಾಕಿ ಸಾಂಕೇತಿಕ ಪ್ರತಿಭಟನೆ ನಡೆಸಿ ಮನವಿ ಅರ್ಪಿಸಿದರು.