ಕನ್ನಡಪ್ರಭ ವಾರ್ತೆ ಮಡಿಕೇರಿ

ಮಾನವೀಯ ಸ್ನೇಹಿತರ ಒಕ್ಕೂಟದ ವತಿಯಿಂದ ಜೀವನ ಸಂಕಷ್ಟದಲ್ಲಿರುವವರು, ವಿದ್ಯಾರ್ಥಿಗಳು, ವಿಶೇಷಚೇತನರು ಸೇರಿದಂತೆ 70 ಮಂದಿಗೆ 3 ಲಕ್ಷ ರು. ಮೌಲ್ಯದ ಸವಲತ್ತು ವಿತರಿಸಲಾಯಿತು.ನಗರದ ಅಂಬೇಡ್ಕರ್ ಭವನದಲ್ಲಿ ಮಾನವೀಯ ಸ್ನೇಹಿತರ ಒಕ್ಕೂಟದ ವತಿಯಿಂದ ಆಯೋಜಿತ ಜಿಲ್ಲಾ ಮಟ್ಟದ ವಾರ್ಷಿಕ ಕಾರುಣ್ಯ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ ಮಕ್ಕಳು, ಮಹಿಳೆಯರು ಸೇರಿದಂತೆ 70 ಅರ್ಹ ಫಲಾನುಭವಿಗಳು ಸವಲತ್ತು ಸಸ್ವೀಕರಿಸಿದರು.ಅದಾಯ ಮಾರ್ಗವಿಲ್ಲದೆ ಬಲುಕಷ್ಟ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದ ಕುಟುಂಬಗಳಿಗೆ ಉತ್ತಮ ದರ್ಜೆಯ ಆಹಾರದ ಕಿಟ್, ಅನಾರೋಗ್ಯದಿಂದ ಬಳಲುತ್ತಿರುವ ಮಂದಿಯ ಚಿಕಿತ್ಸೆಗೆ ತಲಾ 5 ಸಾವಿರ ರು. ಹಾಗೂ ವಿದ್ಯೆ ಕಲಿಯುವ ಬಡ ಕುಟುಂಬದ ಮಕ್ಕಳಿಗೆ ಪಠ್ಯ ಪರಿಕರ ಸೇರಿದಂತೆ ಒಟ್ಟು 70 ಮಂದಿಗೆ 3 ಲಕ್ಷ ರು. ವೆಚ್ಚದಲ್ಲಿ ಸವಲತ್ತುಗಳನ್ನು ವಿತರಿಸಲಾಯಿತು.

ಪತ್ರಕರ್ತ ಅನಿಲ್ ಎಚ್‌.ಟಿ. ಮಾತನಾಡಿ, ಒಕ್ಕೂಟದ ಜನೋಪಯೋಗಿ ಕೆಲಸ ಕಾರ್ಯಗಳು ಸಮಾಜದ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರಲ್ಲದೆ ಸಾರ್ವಜನಿಕರಿಂದ ದೇಣಿಗೆಯನ್ನು ಪಡೆಯದೆ ವಾಟ್ಸಾಪ್ ಗ್ರೂಪ್ ಮೂಲಕವೇ ಒಕ್ಕೂಟದ 190 ಸದಸ್ಯರ ಸಹಕಾರದೊಂದಿಗೆ ಮೂರು ಲಕ್ಷಕ್ಕೂ ಅಧಿಕ ಮೊತ್ತದ ಸವಲತ್ತು ವಿತರಣಾ ಕಾರ್ಯಕ್ರಮ ನಡೆಸಿರುವುದು ನಿಜಕ್ಕೂ ವಿಸ್ಮಯ ಎಂದು ಹೇಳಿದರು.

ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಮುಸ್ತಫ ಮಾದಾಪುರ ಒಕ್ಕೂಟದ ಮಾನವೀಯ ಚಟುವಟಿಕೆಗಳು ಮಾದರಿ ಕಾರ್ಯವಾಗಿದೆ ಎಂದರು.ಮಾನವೀಯ ಸ್ನೇಹಿತರ ಒಕ್ಕೂಟದ ವಕ್ತಾರ ಶಶಿಕುಮಾರ್ ಚೆಟ್ಟಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರುಣ್ಯ ಕಾರ್ಯಕ್ರಮದಲ್ಲಿ ಒಕ್ಕೂಟದ ಸ್ಥಾಪಕ ಅಡ್ಮಿನ್ ಅನಿಲ್ ರೈ, ಸದಸ್ಯರಾದ ಚೆಟ್ರಂಡ ಲೀಲಾ ಮೇದಪ್ಪ, ಅಸ್ಮತ್ ಮಡಿಕೇರಿ ಮಂಗಳೂರಿನ ಉದ್ಯಮಿ ಅಮಿತ್ ಡಿಸೋಜಾ, ಒಕ್ಕೂಟದ ಸೇವಾ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಅವರ ಧ್ಯೇಯ ಗೀತೆಯೊಂದಿಗೆ ಪ್ರಾರಂಭಗೊಂಡ ಸಮಾರಂಭದಲ್ಲಿ ಒಕ್ಕೂಟದ ವಕ್ತಾರ, ಪತ್ರಕರ್ತ ಎಂ.ಇ, ಮಹಮದ್ ವರದಿ ವಾಚಿಸಿದರು.ಒಕ್ಕೂಟದ ಇಂದಿರಾ ಎ.ಎಚ್. ಸ್ವಾಗತಿಸಿ, ಒಕ್ಕೂಟದ ಪೊನ್ನಂಪೇಟೆ ಪ್ರತಿನಿಧಿ ಟಿ.ಆರ್. ವಿನೋದ್ ವಂದಿಸಿ, ಬಾಳೆಯಡ ದಿವ್ಯಾ ಮಂದಪ್ಪ ನಿರೂಪಿಸಿದರು. ಅಡ್ಮಿನ್ ಗಳಾದ ಕವಿತಾ ರಮೇಶ್ ಲೀಲಾವತಿ, ಕವಿತಾ ರಮೇಶ್, ನಿಯಾಜ್ ಸುಂಟಿಕೊಪ್ಪ, ಕೆ.ಎಸ್. ಅನಿಲ್ ಕುಮಾರ್, ಹನೀಫ್ ಸೋನ, ದಶರಥ, ಚೀರಂಡಚಂಗಪ್ಪ, ಅಗ್ನಿ ಚೆನ್ನನಾಯಕ ಉಪಸ್ಥಿತರಿದ್ದರು. ಜಿಲ್ಲೆಯ ಒಕ್ಕೂಟದ ಪ್ರತಿನಿಧಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.