ಪ್ರವಾಹದಲ್ಲಿ ಹುಚ್ಚಾಟ: ಬೈಕ್‌ ಸಮೇತ ಕೊಚ್ಚಿ ಹೋದ ಯುವಕರು ಪಾರು

| Published : Jun 17 2025, 01:06 AM IST

ಪ್ರವಾಹದಲ್ಲಿ ಹುಚ್ಚಾಟ: ಬೈಕ್‌ ಸಮೇತ ಕೊಚ್ಚಿ ಹೋದ ಯುವಕರು ಪಾರು
Share this Article
  • FB
  • TW
  • Linkdin
  • Email

ಸಾರಾಂಶ

ಭಾನುವಾರದಿಂದ‌ ಧಾರಾಕಾರವಾಗಿ ಸುರಿದ ಮಳೆಗೆ ಕುಂದಾಪುರ ತಾಲೂಕು ನಾವುಂದ- ಬಡಾಕೆರೆ ಸಂಪರ್ಕ‌ ರಸ್ತೆ ಜಲಾವೃತಗೊಂಡಿದ್ದು, ಯುವಕರಿಬ್ಬರು ಬೈಕ್ ಸಮೇತ ನೆರೆ ನೀರಿನಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಕುಂದಾಪುರ

ಭಾನುವಾರದಿಂದ‌ ಧಾರಾಕಾರವಾಗಿ ಸುರಿದ ಮಳೆಗೆ ಕುಂದಾಪುರ ತಾಲೂಕು ನಾವುಂದ- ಬಡಾಕೆರೆ ಸಂಪರ್ಕ‌ ರಸ್ತೆ ಜಲಾವೃತಗೊಂಡಿದ್ದು, ಯುವಕರಿಬ್ಬರು ಬೈಕ್ ಸಮೇತ ನೆರೆ ನೀರಿನಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ.

ನಾವುಂದದಿಂದ ಬಡಾಕೆರೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ನೆರೆ‌ ನೀರು ರಭಸವಾಗಿ ಹರಿಯುತ್ತಿರುವುದರಿಂದ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿತ್ತು. ಮಾಧ್ಯಮ ಪ್ರತಿನಿಧಿಗಳು ಸೋಮವಾರ ಮಧ್ಯಾಹ್ನ ನಾವುಂದ-ಬಡಾಕೆರೆ‌ ನೆರೆಪೀಡಿತ‌ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿಯೂ ಕೆಲ ಯುವಕರು ನೀರಿನ ರಭಸವನ್ನು ಲೆಕ್ಕಿಸದೆ ತಮ್ಮ ಬೈಕ್ ಗಳ ಮೂಲಕ ಸಂಚಾರ ನಡೆಸುತ್ತಿರುವ ದೃಶ್ಯ ಕಂಡುಬಂದಿತು.

ಸಂಜೆ ವೇಳೆ ನಾವುಂದದಿಂದ ಪ್ಯಾಶನ್ ಪ್ರೊ ಬೈಕಿನಲ್ಲಿ ಬಂದಿದ್ದ ಇಬ್ಬರು ಯುವಕರು ನೀರಿನ ಸೆಳೆತವನ್ನು ಲೆಕ್ಕಿಸದೆ ಬೈಕ್‌ ಅನ್ನು ದಾಟಿಸಲು ಮುಂದಾದ ವೇಳೆ ನೀರಿನ ಸೆಳೆತಕ್ಕೆ ಬೈಕ್‌ ಸಮೇತ‌ ಕೊಚ್ಚಿ ಹೋಗಿದ್ದಾರೆ. ಈಜಲು ಬರುತ್ತಿರುವುದರಿಂದ ಇಬ್ಬರು ಯುವಕರು ಪ್ರಾಣಾಪಾಯದಿಂದ‌ ಪಾರಾಗಿದ್ದಾರೆ. ಬೈಕ್ ನೀರುಪಾಲಾಗಿದೆ.

ನೆಟ್ಟಿಗರ ಆಕ್ರೋಶ:ಯುವಕರಿಬ್ಬರು ಬೈಕಿನೊಂದಿಗೆ ಕೊಚ್ಚಿಕೊಂಡು ಹೋಗುತ್ತಿರುವ‌ ವಿಡಿಯೋ ದೃಶ್ಯಾವಳಿಗಳು ವೈರಲ್ ಆಗುತ್ತಿದ್ದು, ನೆಟ್ಟಿಗರು ಯುವಕರ ಹುಚ್ಚಾಟಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ‌.ಎಚ್ಚೆತ್ತುಕೊಳ್ಳದ ಆಡಳಿತ!ಈ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಅದೇ ಪ್ರದೇಶದಲ್ಲಿ ಮತ್ತೆರಡು ಬೈಕ್ ಗಳು ನೀರುಪಾಲಾಗಿವೆ. ಬೈಕ್ ಸವಾರರು ಅಪಾಯದಿಂದ‌ ಪಾರಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಸವಾರರನ್ನು ರಕ್ಷಿಸಿದ್ದಾರೆ. ಘಟನೆಗಳು ಒಂದರ ಹಿಂದೆ ಒಂದರಂತೆ ಸಂಭವಿಸಿದರೂ ತಾಲೂಕು ಆಡಳಿತ ಮಾತ್ರ ಬ್ಯಾರಿಕೇಡ್ ಅಳವಡಿಸಿ ರಸ್ತೆ ಸಂಪೂರ್ಣ ಬಂದ್‌ ಮಾಡಲು ಮುಂದಾಗದೇ ಇರುವುದು ಸಾಕಷ್ಟು ಆತಂಕಗಳಿಗೆ ಕಾರಣವಾಗಿದೆ.