ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಇತಿಹಾಸದ ಪರಂಪರೆಯಲ್ಲಿ ಮೌರ್ಯ ವಂಶದ ಮಗದ ದೊರೆ ಅಶೋಕ ಚಕ್ರವರ್ತಿ ದೂರದೃಷ್ಟಿಯುಳ್ಳ ರಾಜನಾಗಿದ್ದರು ಎಂದು ದಾವಣಗೆರೆಯ ನಿವೃತ್ತ ಪ್ರಾಧ್ಯಾಪಕರಾದ ಡಾ. ಮಲ್ಲಿಕಾರ್ಜುನ ಜವಳಿ ತಿಳಿಸಿದರು.ನಗರದ ಪಲ್ಲಾಗಟ್ಟಿ ಅಡವಪ್ಪ ಕಾಲೇಜಿನ ಇತಿಹಾಸ ವಿಭಾಗದ ವತಿಯಿಂದ ಆಯೋಜಿಸಿದ್ದ ಕರ್ನಾಟಕದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆ ಎಂಬ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ತಿಳಿಯದವರು, ಅರ್ಥೈಸಿಕೊಳ್ಳದವರು, ಇತಿಹಾಸವನ್ನು ಕಟ್ಟಲಾರರು, ಬನವಾಸಿಯ ಕದಂಬರ ಶಾಸನಗಳು, ಮೌರ್ಯ ಶಾಸನಗಳ ಉದ್ದೇಶವನ್ನು ತಿಳಿಸಿದರು. ಪಾರಂಪರಿಕ ರಾಜರ ದೃಷ್ಟಿಕೋನವನ್ನು ಸ್ಮರಿಸಿದರು. ಇತಿಹಾಸದ ಪರಂಪರೆಯಲ್ಲಿ ಅಶೋಕ ಸಾಮ್ರಾಟ ದೂರದೃಷ್ಟಿಯುಳ್ಳ ರಾಜನಾಗಿದ್ದ. ಪಶು ಪಕ್ಷಿಗಳ ಆರೋಗ್ಯವನ್ನು ಕಾಪಾಡುವುದು ಸುಖೀ ರಾಜ್ಯ ಕಲ್ಪನೆ, ಪ್ರಜೆಗಳ ಆಸಕ್ತಿಗಳನ್ನು ತಿಳಿದುಕೊಂಡು ನಡೆದುಕೊಳ್ಳುವುದು ಇವರಲ್ಲಿತ್ತು. ವಿದ್ಯಾರ್ಥಿಗಳಾದ ನೀವು ಈ ನಾಡಿನ ಇತಿಹಾಸ, ಸಂಸ್ಕೃತಿ ಪರಂಪರೆಯನ್ನು ಅರಿಯಬೇಕೆಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ವಿಜಯಕುಮಾರಿ ಮಾತನಾಡಿ ಇಂತಹ ಉಪನ್ಯಾಸಗಳು ಕಾಲೇಜಿನ ಶೈಕ್ಷಣಿಕ ಆಂತರಿಕ ಗುಣಮಟ್ಟವನ್ನು ಹೆಚ್ಚಿಸುತ್ತವೆ. ವಿದ್ಯಾರ್ಥಿಗಳಿಗೆ ಶ್ರೀಮಂತ ಪರಂಪರೆಯ ಅರಿವನ್ನು ಮೂಡಿಸುತ್ತವೆ ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಲೋಕೇಶ್ವರಯ್ಯ, ಮುಖ್ಯಸ್ಥರಾದ ಡಾ. ಲಲಾಟಾಕ್ಷ ಮೂರ್ತಿ, ಪ್ರಾಧ್ಯಾಪಕ ಸಿದ್ದಲಿಂಗ ಮೂರ್ತಿ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.