ಹಾವೇರಿಯಿಂದ ಬ್ಯಾಡಗಿಗೆ ಬಂದು ಕಳೆದ ಮೂರೂವರೆ ದಶಕಗಳ ಹೋರಾಟ ನಡೆಸಿ ವ್ಯಾಪಾರದಲ್ಲೂ ಧರ್ಮನಿಷ್ಠೆ ತೋರುವ ಮೂಲಕ ಮೆಣಸಿನಕಾಯಿ ವ್ಯಾಪಾರ ವಹಿವಾಟನ್ನು ಹಾವೇರಿಯಿಂದ ಹಾರ್ಬರ್ಗೆ (ಬಂದರು ಮೂಲಕ ವಿದೇಶಕ್ಕೆ) ತಲುಪಿಸಿದ್ದಲ್ಲದೇ, ಮೆಣಸಿನಕಾಯಿ ಉದ್ಯಮದ ಮೂಲಕ ನೂರಾರು ಜನ ಕೂಲಿ ಕಾರ್ಮಿಕರಿಗೆ ಬದುಕನ್ನು ಕಟ್ಟಿಕೊಟ್ಟ ರಾಜಣ್ಣ ಎಂದೇ ಚಿರಪರಿಚಿತರಾಗಿರುವ ರಾಜಶೇಖರ ಮಾಗನೂರ ಅವರಿಗೆ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ವರ್ತಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಶಿವಾನಂದ ಮಲ್ಲನಗೌಡ್ರ
ಕನ್ನಡಪ್ರಭ ವಾರ್ತೆ ಬ್ಯಾಡಗಿಹಾವೇರಿಯಿಂದ ಬ್ಯಾಡಗಿಗೆ ಬಂದು ಕಳೆದ ಮೂರೂವರೆ ದಶಕಗಳ ಹೋರಾಟ ನಡೆಸಿ ವ್ಯಾಪಾರದಲ್ಲೂ ಧರ್ಮನಿಷ್ಠೆ ತೋರುವ ಮೂಲಕ ಮೆಣಸಿನಕಾಯಿ ವ್ಯಾಪಾರ ವಹಿವಾಟನ್ನು ಹಾವೇರಿಯಿಂದ ಹಾರ್ಬರ್ಗೆ (ಬಂದರು ಮೂಲಕ ವಿದೇಶಕ್ಕೆ) ತಲುಪಿಸಿದ್ದಲ್ಲದೇ, ಮೆಣಸಿನಕಾಯಿ ಉದ್ಯಮದ ಮೂಲಕ ನೂರಾರು ಜನ ಕೂಲಿ ಕಾರ್ಮಿಕರಿಗೆ ಬದುಕನ್ನು ಕಟ್ಟಿಕೊಟ್ಟ ರಾಜಣ್ಣ ಎಂದೇ ಚಿರಪರಿಚಿತರಾಗಿರುವ ರಾಜಶೇಖರ ಮಾಗನೂರ ಅವರಿಗೆ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ವರ್ತಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ರಾಜಣ್ಣನನ್ನು ನೋಡಿದವರು ಇವರೊಬ್ಬ ಕೊಲ್ಲಾಪುರ ತಾಲೀಮ ಕುಸ್ತಿ ಪೈಲ್ವಾನ್ ಇರಬಹುದು ಎಂಬ ಅನುಮಾನ ಬರುತ್ತದೆ. ಆದರೆ ಅತ್ಯಂತ ಸರಳ ಜೀವಿ ಹಾಗೂ ಮೃದು ಸ್ವಭಾವ ಇವರದ್ದು, ಸ್ವಂತ ಊರು ಹಾವೇರಿ, ಶಿವಬಸಪ್ಪ ಮತ್ತು ರುದ್ರಮ್ಮ ಎಂಬುವರ ಉದರದಲ್ಲಿ ದ್ವಿತೀಯ ಪುತ್ರನಾಗಿ ಜನಿಸಿದರು. ಓದು ತಲೆಗೆ ಹತ್ತಲಿಲ್ಲ ಹಾವೇರಿ ಶಾ. ಪ್ರಾಗಮಲ್ ರಾಮಜಿ ಅವರ ಬಳಿ ಹತ್ತಿ ಅರಳಿ ವ್ಯಾಪಾರ ಕಲಿತರು. ಬಳಿಕ ಸಹೋದರರಾದ ಪ್ರಕಾಶ ಹಾಗೂ ಅಶೋಕ ಇವರ ಸಹಕಾರದೊಂದಿಗೆ 1991ರಲ್ಲಿ ಬ್ಯಾಡಗಿಯಲ್ಲಿ ಮೆಣಸಿನಕಾಯಿ ವ್ಯಾಪಾರ ಆರಂಭಿಸಿದರು. ಇದೀಗ ಇಡೀ ತಮ್ಮ ಕುಟುಂಬವೇ ವ್ಯಾಪಾರದಲ್ಲಿ ತೊಡಗುವಂತೆ ಮಾಡಿದ್ದಾರೆ. ಇದೀಗ ನೂರಾರು ಕುಟುಂಬಗಳಿಗೆ ಅನ್ನದ ಮಾರ್ಗಕ್ಕೆ ಆಸರೆಯಾಗಿದ್ದಾರೆ.ವರ್ತಕರ ಜೀವನವೂ ಆದರ್ಶ: ಒಬ್ಬ ವರ್ತಕ ಇನ್ನೊಬ್ಬ ವರ್ತಕನಿಗೆ ಆದರ್ಶಪ್ರಾಯನಾಗಬಲ್ಲ ಎಂಬುದಕ್ಕೆ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಸಾಕ್ಷಿ. ಬಹುಶಃ ಇಂತಹದ್ದೊಂದು ಪರಂಪರೆ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ನೆಲೆಯೂರಿದ್ದು ಇದಕ್ಕೆ ರಾಜಶೇಖರ ಮಾಗನೂರ ಅವರ ಹೆಸರು ಅತ್ಯಂತ ಸೂಕ್ತ, ವ್ಯಾಪಾರದಲ್ಲಿ ಸ್ಪರ್ಧೆಗಳನ್ನು ನೋಡಿದ್ದೇವೆ ಆದರೆ ರಾಜಣ್ಣನ ಬದುಕನ್ನೇ ಹಿಂಬಾಲಿಸಿದ ಅದೆಷ್ಟೋ ವರ್ತಕರು ವ್ಯಾಪಾರದಲ್ಲಿ ಉತ್ತುಂಗಕ್ಕೆ ಏರಿದ್ದಾರೆ ಎಂಬುದು ವಾಸ್ತವ.
ಶಿಕ್ಷಣ ಪ್ರೇಮಿ:ಬ್ಯಾಡಗಿ ವೀರಭದ್ರೇಶ್ವರ ಎಜ್ಯೂಕೇಶನ್ ಟ್ರಸ್ಟ್ ಅಧ್ಯಕ್ಷರಾಗಿ, ಹಾವೇರಿ ಹುಕ್ಕೇರಿಮಠ ಶಿವಬಸವ ಕಲ್ಯಾಣ ಮಂಟಪದ ನಿರ್ದೇಶಕರಾಗಿ ಇಂದಿಗೂ ಕೆಲಸ ನಿರ್ವಹಿಸುತ್ತಿದ್ದಾರೆ. ಸ್ವಂತ ಪರಿಶ್ರಮದಿಂದ ಶಿವಲಿಂಗೇಶ್ವರ ಪೌಡರ್ ಬೃಹತ್ ಫ್ಯಾಕ್ಟರಿ ಹೊಂದಿರುವ ಅವರು, ಆರ್.ಎಸ್.ಮಾಗನೂರ ಹಾಗೂ ಮಾಗನೂರ & ಕಂ. ಎಂಬ ಹೆಸರಿನಿಂದ ಭಾರತದೆಲ್ಲೆಡೆ ಪ್ರಸಿದ್ಧಿ ಪಡೆದು ಮೆಣಸಿನಕಾಯಿ ವ್ಯಾಪಾರ ನಡೆಸುತ್ತಿದ್ದಾರೆ.ಮಾಗನೂರ ರಾಜಣ್ಣ ಅಗತ್ಯ ಸಲಹೆ ನೀಡುವ ಮೂಲಕ ಬ್ಯಾಡಗಿ ಮಾರುಕಟ್ಟೆಗೆ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಪ್ರಸಕ್ತ ವರ್ಷದ ಪ್ರಶಸ್ತಿಗೆ ಭಾಜನರಾಗಿದ್ದು ಆಯ್ಕೆ ಅತ್ಯಂತ ಸೂಕ್ತ ಎಂದು ಬ್ಯಾಡಗಿ ವರ್ತಕರ ಸಂಘದ ಅಧ್ಯಕ್ಷ, ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಹೇಳಿದರು.