ಸಾರಾಂಶ
ನವಲಗುಂದ: ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗೆ ಅರಣ್ಯ ಇಲಾಖೆಯ ವನ್ಯಜೀವಿ ಮಂಡಳಿಯಿಂದ ಆದಷ್ಟು ಶೀಘ್ರದಲ್ಲಿ ಅನುಮತಿ ಕೊಡಿಸಲು ಪ್ರಯತ್ನಿಸುವುದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭರವಸೆ ನೀಡಿದರು.
ಸಮೀಪದ ಶಲವಡಿ ಗ್ರಾಮದಿಂದ ತಡಹಾಳ ರಸ್ತೆಯ ಮರು ಡಾಂಬರೀಕರಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ಈ ಯೋಜನೆಗೆ ವನ್ಯಜೀವಿ ಮಂಡಳಿಯಿಂದ ಅನುಮತಿ ನೀಡಬೇಕೆಂದು ಶಾಸಕ ಎನ್.ಎಚ್. ಕೋನರಡ್ಡಿ ಎರಡು ಬಾರಿ ಮನವಿ ಮಾಡಿದ್ದರು. ಈ ಕುರಿತು ಕೇಂದ್ರ ಅರಣ್ಯ ಇಲಾಖೆಯ ವನ್ಯಜೀವಿ ಮಂಡಳಿಯ ಸಭೆಯಲ್ಲಿಯೂ ಎರಡು ಬಾರಿ ಮಂಡನೆಯಾಗಿ ವಿಷಯವನ್ನು ಮುಂದೂಡಲಾಗಿದೆ. ಶೀಘ್ರದಲ್ಲಿಯೇ ಅನುಮತಿ ಕೊಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಮಳೆಗಾಲದಲ್ಲಿ ರಸ್ತೆ ಸಂಪೂರ್ಣವಾಗಿ ಹಾಳಾಗಿ ಸಂಚಾರಕ್ಕೆ ತೊಂದರೆಯಾಗಿತ್ತು. ರಾಜ್ಯ ಸರ್ಕಾರದಿಂದ ಶಾಸಕರು ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮೂಲಕ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ ಪ್ರಸ್ತಾವನೆಗೆ ₹6 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಈ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದೇನೆ ಎಂದರು.ಶಾಸಕ ಎನ್.ಎಚ್. ಕೋನರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಡಾ. ಆರ್.ಬಿ. ಶಿರಿಯಣ್ಣವರ, ದುಂಡಯ್ಯ ಹಿರೇಮಠ, ಸಿದ್ದಯ್ಯಶಾಸ್ತ್ರಿ ಹಿರೇಮಠ, ಗ್ರಾಪಂ ಅಧ್ಯಕ್ಷೆ ಮೋದಿನಬಿ ಬಾರಿಗಿಡದ, ಉಪಾಧ್ಯಕ್ಷೆ ರೇಣುಕಾ ಉಡಚಣ್ಣವರ ಮಾತನಾಡಿದರು.ಷಣ್ಮುಖ ಗುರಿಕಾರ, ಮಂಜುನಾಥ ಗಣಿ, ಎಂ.ಎಸ್. ರೋಣದ, ವಿ.ಸಿ. ಪಾಟೀಲ, ಡಿ.ಎಫ್. ರೋಣದ, ಸಿದ್ದನಗೌಡ ಪಾಟೀಲ, ಗಂಗಪ್ಪ ಮನವಿ, ಶ್ರೀಶೈಲ ಮೂಲಿಮನಿ, ದೇವಪ್ಪ ನೀರಲಗಿ, ಮಲ್ಲಿಕಾರ್ಜುನ ಹಳ್ಳಿ, ಸಿದ್ದಣ್ಣ ಕಿಟಗೇರಿ ಸೇರಿದಂತೆ ಹಲವರಿದ್ದರು.