ಮಹರ್ಷಿ ವಾಲ್ಮೀಕಿ ಮನುಕುಲದ ಆದರ್ಶ ಪುರುಷ: ಶಾಸಕ ಕೃಷ್ಣನಾಯ್ಕ

| Published : Oct 18 2024, 12:09 AM IST

ಮಹರ್ಷಿ ವಾಲ್ಮೀಕಿ ಮನುಕುಲದ ಆದರ್ಶ ಪುರುಷ: ಶಾಸಕ ಕೃಷ್ಣನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಹೂವಿನಹಡಗಲಿ ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ‌ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಹೂವಿನಹಡಗಲಿ: ಮಹರ್ಷಿ ವಾಲ್ಮೀಕಿ ರಾಮಾಯಣ ಎಂಬ ಶ್ರೇಷ್ಠ ಕೃತಿ ರಚಿಸಿ ದೇಶದ ಸಂಸ್ಕೃತಿಯನ್ನು ಉಳಿಸಿದ್ದಾರೆ. ಅವರು ಮನುಕುಲದ ಆದರ್ಶ ಪುರುಷರಾಗಿದ್ದಾರೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ತಾಲೂಕು ಆಡಳಿತ ಹಾಗೂ ವಾಲ್ಮೀಕಿ ಸಮಾಜದ ಸಹಯೋಗದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಹರ್ಷಿ ವಾಲ್ಮೀಕಿ ಕೇವಲ‌ ಒಂದು ಸಮಾಜಕ್ಕೆ ಸೀಮಿತವಾಗಿಲ್ಲ. ಭಾರತದ ಇತಿಹಾಸದಲ್ಲೇ ರಾಮಾಯಣ ಎಂಬ ಶ್ರೇಷ್ಠ ಕೃತಿ ರಚಿಸುವ ಮೂಲಕ, ಇತಿಹಾಸದ ಸಂಸ್ಕೃತಿಯನ್ನು ನಮಗೆ ತಲುಪಿಸುವ ಕೆಲಸ ಮಾಡಿದ್ದಾರೆ.

ಪುರಾಣಗಳಲ್ಲಿ ಶ್ರೀರಾಮನ ಪರಭಕ್ತ ಎಂದು ಉಲ್ಲೇಖವಾಗಿದೆ. ಸೀತಾಮಾತೆ ಲವ, ಕುಶರಿಗೆ ವಾಲ್ಮೀಕಿಯವರ ಆಶ್ರಮದಲ್ಲಿ ಜನ್ಮ ನೀಡಿದ್ದಾಳೆ. ಅವರ ಬಗ್ಗೆ ಜ್ಞಾನವನ್ನು ಅರಿತಿರುವ ನಾವೇ ಪುಣ್ಯವಂತರು ಎಂದರು.

ಸರ್ಕಾರದಿಂದ ಸಮಾಜದವರಿಗೆ ನೀಡಿರುವ ನಿವೇಶನಗಳಲ್ಲಿ ಗೊಂದಲ ಇರುವ ಕುರಿತು ಮಾಹಿತಿ ಇದೆ. ರೋಸ್ಟರ್‌ ಪದ್ಧತಿ ಪಾಲನೆಯಾಗಿಲ್ಲ. ಗ್ರಾಪಂ ವ್ಯಾಪ್ತಿಯಲ್ಲಿ ಮನೆಗಳ ಹಂಚಿಕೆಯಲ್ಲಿಯೂ ರೋಸ್ಟರ್‌ ಪದ್ಧತಿ ಪಾಲನೆ ಮಾಡಬೇಕಿದೆ. ಆದರಿಂದ ಸಮಾಜದವರಿಗೆ ನಿವೇಶನ ನೀಡುವ ಕೆಲಸ ಮಾಡುತ್ತೇನೆಂದು ಹೇಳಿದರು.

ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ಮೀಸಲಿದ್ದ ಅನುದಾನವನ್ನು ಅದೇ ಸಮುದಾಯದ ಅಭಿವೃದ್ಧಿಗೆ ಬಳಕೆ ಮಾಡಿದರೆ, ಸಾರ್ಥಕವಾಗುವ ಜತೆಗೆ ಅಭಿವೃದ್ಧಿಯೂ ಆಗಲಿದೆ. ಆದರೆ ಅಭಿವೃದ್ಧಿಗೆ ಮೀಸಲಿಟ್ಟ ₹25 ಕೋಟಿ ಹಣವನ್ನು ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿದೆ ಎಂದರು.

ವಾಲ್ಮೀಕಿ ಮಹರ್ಷಿ ಕುರಿತು ಶಿಕ್ಷಕ ಅಕ್ಕಸಾಲಿ ಉಮಾಪತಿ ಉಪನ್ಯಾಸ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ‌ ನಿರ್ದೇಶಕ ಆನಂದ ಡೊಳ್ಳಿನ ಪ್ರಾಸ್ತಾವಿಕ ಮಾತನಾಡಿದರು.

ತಹಸೀಲ್ದಾರ್ ಸಂತೋಷ್ ಕುಮಾರ್, ಇಒ ಉಮೇಶ್ ಮೈ‌ನಹಳ್ಳಿ, ವಾಲ್ಮೀಕಿ ಮಹಾ ಸಭಾದ ತಾಲೂಕು ಅಧ್ಯಕ್ಷ ಎಲ್‌.ಜಿ. ಹೊನ್ನಪ್ಪನವರ್‌, ಗೌರವಾಧ್ಯಕ್ಷ ಹನುಮಂತಪ್ಪ, ನಿಂಗಪ್ಪ, ಹಂಪಸಾಗರ ಕೋಟೆಪ್ಪ, ಎಚ್. ಪೂಜಪ್ಪ, ಬೀರಪ್ಪ ಇತರರಿದ್ದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಸನ್ಮಾನಿಸಲಾಯಿತು.