ಸಾರಾಂಶ
ಮುಂಡರಗಿ: ನಮ್ಮಲ್ಲಿರುವ ಅಜ್ಞಾನವನ್ನು ಕಳೆದು ನಮ್ಮನ್ನು ಸುಜ್ಞಾನದತ್ತ ಕರೆದೊಯ್ಯುವುದೇ ಮಹಾಶಿವರಾತ್ರಿ. ಶಿವ ಎಂದರೆ ಅವನು ನಿರಾಡಂಬರ. ಅಂತಹ ಶಿವನನ್ನು ಪೂಜಿಸಿ ಆರಾಧಿಸಬೇಕು ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಬುಧವಾರ ಸಂಜೆ ಪಟ್ಟಣದ ಶ್ರೀ ಮಂಜುನಾಥ ದೇವಸ್ಥಾನ ಟ್ರಸ್ಟ್ ಕಮಿಟಿ ಮುಂಡರಗಿ ಇದರ ಆಶ್ರಯದಲ್ಲಿ ಜರುಗಿದ ಮಂಜುನಾಥ ದೇವಸ್ಥಾನದ 9ನೇ ವಾರ್ಷಿಕೋತ್ಸವ, ಮಹಾಶಿವರಾತ್ರಿ ಅಂಗವಾಗಿ ಜರುಗಿದ ಸಾಂಸ್ಕೖತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಮ್ಮ ದೇಶಕ್ಕೆ ನಾಗರಿಕತೆ ಬಂದ ನಂತರ ನಮಗೆ ದೇವರ ಕಲ್ಪನೆ ಬಂತು. ದೇವರೆಂಬ ಕಲ್ಪನೆ ಎಲ್ಲರಿಗೂ ಬೇಕು. ಅದಕ್ಕೆ ರೂಪ ಇಲ್ಲ. ಬಸವಾದಿ ಶಿವಶರಣು ಹೇಳುವಂತೆ ಕಲ್ಲು, ಮಣ್ಣು, ಮರದಿಂದ ನಿರ್ಮಾಣ ಮಾಡಿದ ದೇವರು ದೇವರಲ್ಲ. ಕಾಯಕ ದಾಸೋಹ ಮಾಡಿ ಅದರಲ್ಲಿ ಸಿಗುವ ತೃಪ್ತಿಯೇ ನಿಜವಾದ ದೇವರು. ನಾವು ಯಾರನ್ನೂ ಮೇಲು ಕೀಳಾಗಿ ಕಾಣದೇ ಎಲ್ಲರನ್ನೂ ಒಂದೇ ಎಂದು ನೋಡಬೇಕು. ಈ ಮಹಾಶಿವರಾತ್ರಿ ಕಾರ್ಯಕ್ರಮದ ಮೂಲಕ ಅನೇಕ ಕಲೆಗಳನ್ನು ಪ್ರೋತ್ಸಾಹಿಸುತ್ತಿರುವ ಕಾರ್ಯ ಶ್ಲಾಘನೀಯವಾದುದು ಎಂದರು.
ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಈ ನಾಡಿನಲ್ಲಿ ಸತ್ಯ, ನ್ಯಾಯ, ಧರ್ಮದ ದೇವರೆಂದರೆ ಅದು ಧರ್ಮಸ್ಥಳ ಮಂಜುನಾಥ. ನಾವು ಧರ್ಮಸ್ಥಳಕ್ಕೆ ಹೋಗದೇ ಇಲ್ಲಿಯೇ ದರ್ಶನ ಮಾಡಿಕೊಳ್ಳುವ ಭಾಗ್ಯವನ್ನು ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಟ್ರಸ್ಟ್ ಕಮಿಟಿಯವರು ಮಾಡಿಕೊಟ್ಟಿದ್ದಾರೆ. ಇಲ್ಲಿ ಪ್ರತಿ ವರ್ಷವೂ ಅರ್ಥಪೂರ್ಣ ಮಹಾಶಿವರಾತ್ರಿ ಆಚರಿಸುತ್ತಾ ಬಂದಿದ್ದಾರೆ ಎಂದರು.ರಾಜೀವಗಾಂಧಿ ಆರೋಗ್ಯ ವಿಜ್ಞಾನಿಗಳ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ. ವೀರೇಶ ಹಂಚಿನಾಳ ಮಾತನಾಡಿ, ಶಿವನ ಕುರಿತು ನಾವು ನೂರಾರು ಕಲ್ಪನೆಗಳನ್ನು ಮಾಡಿಕೊಳ್ಳುತ್ತೇವೆ. ನಮ್ಮ ಕಲ್ಪನೆಯ ಶಿವನನ್ನು ನೆನೆದುಕೊಳ್ಳಲು ಮಹಾಶಿವರಾತ್ರಿ ವಿಶೇಷವಾಗಿದೆ. ನಮ್ಮಲ್ಲಿ ಜಾತಿ ಹಾಗೂ ತಾರತಮ್ಯದ ಭೇದಭಾವ ದೂರಾಗಿ ನಾವೆಲ್ಲರೂ ಒಂದೇ ಎನ್ನುವ ಭಾವನೆ ಬರಬೇಕು ಎಂದರು.
ಬಿಜೆಪಿ ಮುಂಡರಗಿ ಮಂಡಲದ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ಸಮಾಜ ಕಲ್ಯಾಣ ಇಲಾಖೆಯ ಅರುಣಾ, ಪ್ರೊ.ರಾಜೇಶ್ವರಿ ಇನಾಮದಾರ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಶ್ರೀ ಮಂಜುನಾಥೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಈಶ್ವರಪ್ಪ ಕವಲೂರು ಅಧ್ಯಕ್ಷತೆ ವಹಿಸಿದ್ದರು.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ನಿವೃತ್ತ ನೌಕರರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಚಂದ್ರಕಾಂತ ಯಾವಗಲ್, ಸುವರ್ಣಾ ಕೋಟಿ, ಶೋಭಾ ಮೇಟಿ, ಬಸವಂತಪ್ಪ ಹೊಸಮನಿ, ಪರಶುರಪಾಮ ರಾಮೇನಹಳ್ಳಿ, ಡಾ. ಅನ್ನದಾನಿ ಮೇಟಿ, ಪ್ರಹ್ಲಾದ ಹೊಸಮನಿ, ಶಿವಪ್ಪ ಚಿಕ್ಕಣ್ಣವರ, ಸಚಿನಕುಮಾರ ಹೊಸಮನಿ, ಮಂಜುನಾಥ ಮುಂಡವಾಡ, ಸುರೇಶ ಗುಡಿ, ಹನುಮಂತಪ್ಪ ದೊಡ್ಡಮನಿ, ಪರಶುರಾಮ ಗುಗ್ಗರಿ, ಉಮೇಶ ಬನ್ನಿಕೊಪ್ಪ, ಮಹಾದೇವಪ್ಪ ಹೊಸಮನಿ, ಗಂಗಾಧರ ದೊಡ್ಡಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬಸವರಾಜ ರಾಮೇನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹನಮಂತಪ್ಪ ಗುಗ್ಗರಿ ಹಾಗೂ ಸುರೇಶ ರಾಮೇನಹಳ್ಳಿ ನಿರೂಪಿಸಿ, ವಂದಿಸಿದರು. ನಂತರ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.